ಹೀಗೊಂದು ವಿನೂತನ ರೀತಿಯ ದೀಪಾವಳಿ ಆಚರಣೆ
ಅನಾರೋಗ್ಯದಿಂದ ಬಳಲುತ್ತಿರುವ ಪ್ರತೀಕ್ಗೆ ಸಹಾಯ
Team Udayavani, Nov 3, 2019, 8:44 PM IST
ಉಡುಪಿ: ಸ್ಥಳೀಯ ವ್ಯಾಪಾರಿಯೊಬ್ಬರು ಅಂಗಡಿ ಪೂಜೆಯ ಪಟಾಕಿ ಸಿಡಿಸಿ ಸಂಭ್ರಮಿಸುವ ಬದಲಿಗೆ ಈ ವೆಚ್ಚಕ್ಕೆ ಸರಿದೂಗುವ ಮೊತ್ತವನ್ನು ಅನಾರೋಗ್ಯದಿಂದ ಬಳಲುತ್ತಿರುವ ಎಂಜಿಎಂ ಕಾಲೇಜು ಹಿಂಭಾಗದ ಸಗ್ರಿ ಸಮೀಪದ ನಿವಾಸಿ ಬಾಲಕೃಷ್ಣ ಪದಕಣ್ಣಾಯ, ಪ್ರಮೀಳಾ ದಂಪತಿಯ ಪುತ್ರ ಪ್ರತೀಕ್ ಕುಟುಂಬಕ್ಕೆ ದೇಣಿಗೆಯಾಗಿ ನೀಡಿದ್ದಾರೆ.
ಉಡುಪಿ-ಪುತ್ತೂರು ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ನ್ಯಾಚುರಲ್ ಗ್ರಾನೈಟ್ಸ್ನ ಮಾಲಕ ನೀಲೇಶ್ ಕರಡಿ ಅವರೇ ಈ ವಿನೂತನ ಆಚರಣೆಗೆ ನಾಂದಿ ಹಾಡಿದವರು. ಇಂತಹ ಸಲಹೆ ನೀಡಿ, ತಮ್ಮ ಸಂಚಾಲಕತ್ವದ ಸಂಸ್ಥೆಯಾದ ವಿದ್ಯಾ ದೇಗುಲದ ವತಿಯಿಂದ ತಾವೂ ದೇಣಿಗೆ ನೀಡಿ ನೀಲೇಶರೊಂದಿಗೆ ಕೈಜೋಡಿಸಿದವರು ಪುತ್ತೂರು ವಿದ್ಯಾನಿಧಿ ಸಮಿತಿ ಸೇವಾ ಸಂಸ್ಥೆಯ ಅಧ್ಯಕ್ಷ ಕೆ. ಮಾಧವ ಉಪಾಧ್ಯಾಯ ಅವರು ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿ ದೇಣಿಗೆ ನೀಡಲಾಗಿದೆ.
ಹಬ್ಬದ ಸಂದರ್ಭ ನಾನಾ ರೂಪಗಳಲ್ಲಿ ಸುಡುಮದ್ದು ಸಿಡಿಸುವುದರಿಂದ ಉಂಟಾಗುವ ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಪ್ರಧಾನ ಮಂತ್ರಿಗಳ ಸ್ವತ್ಛತಾ ಅಭಿಯಾನಕ್ಕೆ ಹೀಗೆ ಸಹಕರಿಸಬಹುದೆಂಬ ಚಿಂತನೆಯ ಫಲವೇ ಈ ದೇಣಿಗೆ ನೀಡಿಕೆ ಕಾರ್ಯ. ಮುಂದೆಯೂ ದೀಪಾವಳಿ ಸಂದರ್ಭ ಸುಡುಮದ್ದಿಗೆ ತಗಲುವ ವೆಚ್ಚವನ್ನು ಅರ್ಹ ಫಲಾನುಭವಿಗಳಿಗೆ ದೇಣಿಗೆಯಾಗಿ ನೀಡುವ ಯೋಜನೆ ಇದೆ ಎಂದು ನೀಲೇಶ್ ಕರಡಿ, ಮಾಧವ ಉಪಾಧ್ಯಾಯ ತಿಳಿಸಿದರು.
ವಿದ್ಯಾನಿಧಿ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್ ಕೆ., ಕೋಶಾಧಿಕಾರಿ ಸುರೇಶ್ ಯು.ಕೆ. ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅನಾರೋಗ್ಯ ಪೀಡಿತ ಪ್ರತೀಕ್ ಅವರಿಗೆ ಸಹಾಯಧನ ನೀಡಲಿಚ್ಛಿಸುವವರು 9343012233ಗೆ ಸಂಪರ್ಕಿಸಬಹುದು.