ಹೆದ್ದಾರಿ ಅವ್ಯವಸ್ಥೆ: ಉಗ್ರ ಹೋರಾಟಕ್ಕೆ ತೀರ್ಮಾನ
ಕುಂದಾಪುರ: ಸಾರ್ವಜನಿಕ ಸಭೆಯಲ್ಲಿ ಮುಂದಿನ ಹೋರಾಟದ ಚರ್ಚೆ
Team Udayavani, Nov 17, 2019, 5:14 AM IST
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ಪುರಸಭೆ ವ್ಯಾಪ್ತಿ ಮಾತ್ರವಲ್ಲದೆ, ಮಾಬುಕಳ ದಿಂದ ಸಂಗಮ್ವರೆಗಿನ ಅವ್ಯವಸ್ಥೆ ಕುರಿತಂತೆ ಮುಂದಿನ ದಿನಗಳಲ್ಲಿ ಎಲ್ಲರೂ ಸಂಘಟಿತರಾಗಿ, ಜನಪ್ರತಿನಿಧಿಗಳು, ಗುತ್ತಿಗೆದಾರರ ಕಣ್ತೆರೆಸಿ, ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸುವ ಸಂಬಂಧ ಉಗ್ರ ರೀತಿಯ ಹೋರಾಟ ಮಾಡುವ ತೀರ್ಮಾನವನ್ನು ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಕೈಗೊಳ್ಳಲಾಯಿತು.
ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಸುರತ್ಕಲ್ನಿಂದ ಕುಂದಾಪುರದವರೆಗಿನ 76 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ ಆರಂಭವಾದಂದಿನಿಂದ ಈವರೆಗೆ ಅಂದರೆ 10 ವರ್ಷಗಳಲ್ಲಿ ಒಬ್ಬನೇ ಒಬ್ಬ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಇಲ್ಲಿಗೆ ಭೇಟಿ ಕೊಟ್ಟಿಲ್ಲ. ಶೇ.90 ರಷ್ಟು ಕಾಮಗಾರಿ ಆಗಿದೆ ಅಂತಾರೆ, ಆದರೆ ಕಾಮಗಾರಿಯ ಮೂಲ ಕರಡು ನಕಾಶೆಯೇ ಯಾರಲ್ಲಿಯೂ ಇಲ್ಲ. ಹಾಗಾದರೆ ಶೇ.90 ರಷ್ಟು ಕಾಮಗಾರಿ ಮುಗಿದಿದೆ ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಸರಿಯಾದ ಚಿತ್ರಣ ಕೊಡಿ ಎಂದು ಕೇಳಿದರೆ ಕೊಡುತ್ತಿಲ್ಲ. ಶಾಸಕರು, ಸಂಸದರಿಗೂ ಈ ಬಗ್ಗೆ ಮಾಹಿತಿಯಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಈ ವರೆಗೆ ಹೆದ್ದಾರಿ ಕುರಿತು ನಡೆದ ಸಂಸದರು, ಶಾಸಕರು, ಡಿಸಿ ನೇತೃತ್ವದ ಸಭೆಗಳೆಲ್ಲ ಬರೀ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿಯನ್ನು ಸಮಾಧಾನ ಮಾಡುವ ಯತ್ನ ಅಷ್ಟೇ ಆಗಿದ್ದು ಬಿಟ್ಟರೆ, ಅದರಿಂದ ಕಾಮಗಾರಿಗೆ ಏನೂ ವೇಗ ಆಗಿಲ್ಲ. ಶಾಸ್ತಿÅ ಸರ್ಕಲ್ ಬಳಿಯ ಫ್ಲೆ$çಓವರ್ ಮುಗಿಸಿ, ಬಸೂÅರು ಮೂರುಕೈ ಅಂಡರ್ ಪಾಸ್ ಕಾಮಗಾರಿ ಆರಂಭಿಸಿ ಎಂದು ಹೇಳಿದರೆ, ಒಟ್ಟಿಗೆ ಮುಗಿಸಲಾಗುವುದು ಎನ್ನುವ ಭರವಸೆ ನೀಡಿದರು. ಈಗ ಎರಡೂ ಆಗುತ್ತಿಲ್ಲ ಎಂದು ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದರು.
ಎಲ್ಲ ಗ್ರಾ.ಪಂ.ಗಳಲ್ಲಿ ನಿರ್ಣಯ
ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ ಮಾತನಾಡಿ, ಈ ವಿಚಾರದಲ್ಲಿ ರಾಜಕೀಯ ಮರೆತು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ. ಇದು ಕೇವಲ ಹೆದ್ದಾರಿ ಹಾದು ಹೋಗುವ ಗ್ರಾಮಗಳ, ಪುರಸಭೆಯ ಜನರ, ಜನಪ್ರತಿನಿಧಿಗಳ ಸಮಸ್ಯೆಯಲ್ಲ. ಕುಂದಾಪುರ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಈ ಹೆದ್ದಾರಿಯ ಅಗತ್ಯವಿದ್ದು, ಹಾಗಾಗಿ ಪ್ರತಿ ಗ್ರಾ.ಪಂ.ಗಳಲ್ಲಿ ವಿಶೇಷ ಸಭೆ ಕರೆದು ನಿರ್ಣಯ ಮಾಡಲಿ ಎಂದು ಆಗ್ರಹಿಸಿದರು.
ನ.29ಕ್ಕೆ ಧರಣಿ
ಸಿಪಿಐಎಂ ಮುಖಂಡ ವೆಂಕಟೇಶ್ ಕೋಣಿ ಮಾತ ನಾಡಿ, ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಸಂಬಂಧ ಪಟ್ಟವ ರನ್ನು ಎಚ್ಚರಿಸಬೇಕಾದವರು ಇಲ್ಲಿನ ಶಾಸಕರು, ಸಂಸದರು. ಆದರೆ ಅವರು ಇಲ್ಲಿಗೆ ಬಂದು ಒಮ್ಮೆ ಮಾತನಾಡಿ ಹೋಗುತ್ತಾರೆ. ಮತ್ತೆ ಅದರ ಗೊಡವೆಗೆ ಹೋಗು ವುದಿಲ್ಲ. ಈ ಬಗ್ಗೆ ಸಿಪಿಐಎಂ ಪಕ್ಷ ರಸ್ತೆಗಿಳಿದು ಪ್ರತಿಭಟನೆಗೆ ಮುಂದಾಗಿದ್ದು, ಇದೇ ನ.29ಕ್ಕೆ ಹೆದ್ದಾರಿ ಯಲ್ಲಿಯೇ ಧರಣಿ ಕುಳಿತುಕೊಳ್ಳಲಿದ್ದೇವೆ ಎಂದರು.
ಸಭೆಯಲ್ಲಿ ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಗಿರೀಶ್ ಜಿ.ಕೆ., ಅಬು ಮಹಮ್ಮದ್, ವಿವಿಧ ಪಕ್ಷಗಳ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು, ನಾಗರಿಕರು ಭಾಗವಹಿಸಿದ್ದರು.ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಕಾರ್ಯಕ್ರಮ ನಿರ್ವಹಿಸಿದರು.
ಜನಾಂದೋಲನ: ಸಲಹೆ
ಈ ಬಗ್ಗೆ ಈವರೆಗಿನ ಸಭೆಗಳೆಲ್ಲ ಫಲ ಸಿಗದಿರುವ ಕಾರಣ, ಕುಂದಾಪುರದ ಎಲ್ಲ ಜನರು, ಅಂಗಡಿ ಮಾಲಕರು, ವಾಹನ ಚಾಲಕರನ್ನೆಲ್ಲ ಸೇರಿಸಿಕೊಂಡು, ಬೃಹತ್ ಜನಾಂದೋಲನ ಮಾಡುವ. ಅಲ್ಲಿಗೆ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳನ್ನು ಕರೆಯಿಸಿ, ಅವರಿಗೆ ಎಚ್ಚರಿಕೆಯನ್ನು ನೀಡುವ ಎನ್ನುವ ಸಲಹೆಯನ್ನು ಕುಂದಾಪುರದ ವಕೀಲ ಗೋಪಾಲಕೃಷ್ಣ ಶೆಟ್ಟಿ ನೀಡಿದರು.