ಮನೆ ಮನೆಗೆ ಪಿಂಚಣಿ ಯೋಜನೆ ಅಭಿಯಾನಕ್ಕೆ ಚಾಲನೆ
Team Udayavani, Mar 1, 2020, 5:17 AM IST
ಕಾಪು: ಸರಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯಲು ಅರ್ಹರಾಗಿದ್ದೂ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿರುವ ಅರ್ಹ ಫಲಾನುಭವಿಗಳನ್ನು ಗುರುತಿಸುವ ಮನೆ ಮನೆ ಪಿಂಚಣಿ ಯೋಜನೆ ಈಗ ಕಾಪು ತಾಲೂಕಿನಲ್ಲೂ ಶುರುವಾಗಿದೆ.
ಕಂದಾಯ ಅಧಿಕಾರಿಗಳು ಉಪ ತಹಶೀಲ್ದಾರ್ ನೇತೃತ್ವದಲ್ಲಿ ಮನೆ ಮನೆ ಭೇಟಿ ನೀಡಲಿದ್ದಾರೆ. ತಾಲೂಕಿನ 30 ಗ್ರಾಮಗಳಲ್ಲಿ ಈ ಯೋಜನೆ ನಡೆಯಲಿದೆ. ಗ್ರಾಮ ಕರಣಿಕರು ಮತ್ತು ಗ್ರಾಮ ಸಹಾಯಕರು ಹಾಗೂ ಕಾಪು ಹೋಬಳಿಯ ಕಂದಾಯ ನಿರೀಕ್ಷಕರು ಇದರಲ್ಲಿ ಭಾಗಿಯಾಗಲಿದ್ದಾರೆ.
ಈವರೆಗೆ 75 ಮಂದಿಯನ್ನು ಗುರುತಿಸಲಾಗಿದೆ. ಫೆ.26ರಂದು ಒಂದೇ ದಿನ ಕಾಪು ಪಡುಗ್ರಾಮದ 13 ಮಂದಿಯನ್ನು ಫಲಾನುಭವಿಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಬೇಕಾದ ದಾಖಲೆಗಳು
ಅಧಿಕಾರಿಗಳು ಭೇಟಿ ನೀಡುವ ಸಂದರ್ಭದಲ್ಲಿ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಯಸ್ಸಿನ ದಾಖಲೆ, ಪಾಸ್ ಬುಕ್ ಜೆರಾಕ್ಸ್ ಮತ್ತು 3 ಫೊಟೋಗಳನ್ನು ನೀಡಬೇಕಿದೆ.
9,684 ಫಲಾನುಭವಿಗಳು
ಕಾಪು ತಾಲೂಕಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಈವರೆಗೆ 9,684 ಫಲಾನುಭವಿಗಳಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆ – 5,933, ವಿಧವಾ ವೇತನ – 1,833, ಇಂದಿರಾ ಗಾಂಧಿ ಪಿಂಚಣಿ ಯೋಜನೆ (ವೃದ್ಧಾಪ್ಯ ವೇತನ)- 724, ಅಂಗವಿಕಲ ವೇತನ – 375 + 256, ಮನಸ್ವಿನಿ – 563 ಫಲಾನುಭವಿಗಳು ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ.
ಸಮಸ್ಯೆಯಾದರೆ ಕಚೇರಿಗೆ ತೆರಳಬಹುದು
ಆಧಾರ್ ಲಿಂಕ್ ಆಗದೇ ಇರುವುದು, ದಾಖಲೆಗಳ ಸಮಸ್ಯೆ ಇತ್ಯಾದಿ ಕಾರಣ ಪಿಂಚಣಿ ಹಣ ತಲುಪದೇ ಇದ್ದರೆ ಕಚೇರಿಗೆ ಬರಲು ತಹಶೀಲ್ದಾರ್ ನಾಗರಿಕರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಈವರೆಗೆ 927 ಫಲಾನುಭವಿಗಳ ದಾಖಲೆ ಪರಿಶೀಲಿಸಿ ತಿದ್ದುಪಡಿ ಮಾಡಲಾಗಿದೆ ಎಂದಿದ್ದಾರೆ.
ಸಂಪೂರ್ಣ ಉಚಿತ ಸೇವೆ
ಪಿಂಚಣಿ ಪಡೆಯಲು ಅರ್ಹರಾದವರನ್ನು ಗುರುತಿಸಿ ಅವರ ಓಟಿಸಿ – ರೇಷನ್ ಕಾರ್ಡ್ ಡಾಟಾವನ್ನು ಸಂಗ್ರಹಿಸಿ ಅಟಲ್ ಜೀ ಸೇವಾ ಕೇಂದ್ರದ ಮೂಲಕ ಎಂಟ್ರಿ ಮಾಡಿಸಲಾಗುತ್ತದೆ. ನೇರವಾಗಿ ಮನೆಗೇ ತೆರಳಿ ಎಂಟ್ರಿ ಇತ್ಯಾದಿ ಮಾಡುವುದರಿಂದ ಕನಿಷ್ಠ 10 ದಿನಗಳ ಒಳಗೆ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರವನ್ನು ನೀಡಲಾಗುತ್ತದೆ. ಈ ಸೇವೆ ಸಂಪೂರ್ಣ ಉಚಿತ.
-ಮಹಮ್ಮದ್ ಇಸಾಕ್,
ತಹಶೀಲ್ದಾರ್, ಕಾಪು