ಜಿಲ್ಲೆಯಲ್ಲಿವೆ ಸಾವಿರಾರು ನಿರುಪಯುಕ್ತ ಕೊಳವೆ ಬಾವಿಗಳು
Team Udayavani, May 21, 2019, 6:10 AM IST
ಉಡುಪಿ: ಉಡುಪಿ ನಗರ ಸೇರಿದಂತೆ ಐದು ನಗರ ಸ್ಥಳೀಯ ಸಂಸ್ಥೆಗಳು ಮತ್ತು 158 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಕೇಳುತ್ತಿರುವಂತೆ ಜಿಲ್ಲೆಯಲ್ಲಿ ಐದಾರು ಸಾವಿರ ಕೊಳವೆಬಾವಿಗಳು ನಿರುಪಯುಕ್ತವಾಗಿ ಬಿದ್ದಿರುವುದು ಮತ್ತು ಶೇ.20 ಕೊಳವೆಬಾವಿಗಳೂ ಉಪಯೋಗಕ್ಕೆ ಬಾರದೆ ಇರುವುದು ತಿಳಿದುಬಂದಿದೆ.
ಇದಕ್ಕೆ ಕಾರಣ ಸರಕಾರದ ಆಡಳಿತಾತ್ಮಕ ದೋಷ. ನಾಲ್ಕೈದು ಹಿಂದೆ ತಾಲೂಕು ಕೇಂದ್ರದಲ್ಲಿ ತಾ.ಪಂ. ಸುಪರ್ದಿಯಲ್ಲಿ ಇದರ ನಿರ್ವಹಣೆ ನಡೆಯುತ್ತಿತ್ತು. ಈಗ ಕೊಳವೆಬಾವಿಗಳ ನಿರ್ವಹಣಾ ಜವಾಬ್ದಾರಿಯನ್ನು ಗ್ರಾ.ಪಂ.ಗೆ ವಹಿಸಿಕೊಡಲಾಗಿದೆ. ಹಿಂದೆ ಕೈಪಂಪು ತುಂಡಾಗಿದ್ದರೆ, ಪಂಪು ಕೆಟ್ಟು ಹೋಗಿದ್ದರೆ ಹೀಗೆ ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ತಿಳಿದುಬಂದ ಕೂಡಲೇ ಅಲ್ಲಿಗೆ ನಿರ್ವಹಣಾ ವ್ಯಕ್ತಿಗಳು ಹೋಗಿ ದುರಸ್ತಿ ಮಾಡುತ್ತಿದ್ದರು.
ಇದಕ್ಕೆ ಬೇಕಾದ ಮಾನವ ಮತ್ತು ಯಾಂತ್ರಿಕ ಸಂಪನ್ಮೂಲ ತಾಲೂಕು ಕೇಂದ್ರಗಳಲ್ಲಿತ್ತು. ಇದರ ಖರ್ಚನ್ನು ಗ್ರಾ.ಪಂ. ವಹಿಸಿಕೊಳ್ಳುತ್ತಿತ್ತು. ಆಗ ಜಿ.ಪಂ. ಮೂಲಕ ತಾ.ಪಂ.ಗೆ, ತಾ.ಪಂ. ಮೂಲಕ ಗ್ರಾ.ಪಂ.ಗೆ ನಿರ್ವಹಣಾ ಅನುದಾನ ಬರುತ್ತಿತ್ತು. ಈಗ ಇದಕ್ಕಾಗಿ ಪ್ರತ್ಯೇಕ ಅನುದಾನ ಬರುತ್ತಿಲ್ಲ. ಕೇಂದ್ರ ಸರಕಾರದಿಂದ ಬರುವ 14ನೆಯ ಹಣಕಾಸು ಆಯೋಗದ ಅನುದಾನದಲ್ಲಿ ಕುಡಿಯುವ ನೀರಿನ ನಿರ್ವಹಣೆ ನೋಡಿಕೊಳ್ಳಲು ಸೂಚನೆ ಬಂದಿದೆ. ಹೀಗಾಗಿ ರಾಜ್ಯ ಸರಕಾರವೂ ವಿಶೇಷ ಆದ್ಯತೆ ಕೊಟ್ಟಿಲ್ಲ. ಕನಿಷ್ಠ ಶೇ.20 ಅನುದಾನವನ್ನು ಇರಿಸಿಕೊಳ್ಳಬಹುದೆಂದು ಸೂಚಿಸಲಾಗಿದೆಯಾದರೂ ಬಹುತೇಕ ಮೊತ್ತವನ್ನು ಹೊಸ ಕಾಮಗಾರಿಗಳಿಗೆ ಗ್ರಾ.ಪಂ. ಉಪಯೋಗಿಸುತ್ತಿದೆ. ಇದರಿಂದ ಹಳೆ ಕೊಳವೆಬಾವಿ ದುರಸ್ತಿ ಅಷ್ಟಕ್ಕಷ್ಟೆ ನಡೆಯುತ್ತಿದೆ.
ಮಾನವ ಸಂಪನ್ಮೂಲದ ಕೊರತೆ
ಗ್ರಾ.ಪಂ. ಮಟ್ಟದಲ್ಲಿ ಕೊಳವೆಬಾವಿ ದುರಸ್ತಿ ಮಾಡುವ ವ್ಯಕ್ತಿಗಳ ಕೊರತೆ ಇದೆ. ಹಿಂದೆ ತಾಲೂಕು ಮಟ್ಟದಲ್ಲಿ ಒಂದಿಬ್ಬರು ಮಾನವ ಸಂಪನ್ಮೂಲ ವ್ಯಕ್ತಿಯನ್ನು ಗುರುತಿಸಿ ಇಡುತ್ತಿದ್ದರು. ಅವರಿಗೆ ತಿಳಿಸಿದಾಗ ಬಂದು ಮಾಡಿ ಹೋಗುತ್ತಿದ್ದರು. ಈಗ ಕೊಳವೆಬಾವಿಗಳ ಸಂಖ್ಯೆ ಹೆಚ್ಚಿದೆ. ಇನ್ನೊಂದೆಡೆ ಕೊಳವೆಬಾವಿ ದುರಸ್ತಿ ಮಾಡುವ ವ್ಯಕ್ತಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಕೆಟ್ಟು ಹೋದ ಕೊಳವೆಬಾವಿಯನ್ನು ಮುಟ್ಟುವವರು ಇಲ್ಲವಾಗಿದೆ. ಒಟ್ಟಾರೆ ಲಕ್ಷಾಂತರ ರೂ. ವೆಚ್ಚ ಮಾಡಿ ಕೊರೆಸಿದ ಕೊಳವೆಬಾವಿಗಳು ಪಾಳುಬಿದ್ದಿವೆ.
ಉಪಯೋಗಿಸದಿದ್ದರೆ ನಿರುಪಯುಕ್ತ
ಕೊಳವೆಬಾವಿಗಳು ಬಳಸುತ್ತಿದ್ದರೆ ಮಾತ್ರ ಅದರಿಂದ ಬರುವ ನೀರನ್ನು ಉಪಯೋಗಿಸುವುದು ಸಾಧ್ಯ. ಬಳಸದೆ ಇದ್ದರೆ ಕಬ್ಬಿಣದ ಕೊಳವೆಯಿಂದ ಕಬ್ಬಿಣದ ಅಂಶ ಸೇರಿ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೆಲವು ಬಾರಿ ಕೆಸರು ಸೇರಿಕೊಂಡು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ನೀರನ್ನು ಹೊರಗೆ ಹಾಕಿದರೆ ಮಾತ್ರ ಕುಡಿಯಲು ಯೋಗ್ಯವಾಗಿರುತ್ತದೆ. ಇಂತಹ ಕೆಲಸ ನಡೆಯುತ್ತಿಲ್ಲವಾದ ಕಾರಣ ಕೊಳವೆಬಾವಿಗಳು ನಿರುಪಯುಕ್ತವಾಗಿವೆ. ಒಂದು ಕೊಳವೆಬಾವಿ ಅವಧಿ 10ರಿಂದ 15 ವರ್ಷ. ಹೀಗೆ ನಿರುಪಯುಕ್ತವಾಗಿದ್ದರೆ ಅದನ್ನು ಮರು ಉಪಯೋಗಗೊಳಿಸುವುದೂ ಕಷ್ಟಸಾಧ್ಯ.
ಗ್ರಾ.ಪಂಗೆ ವಹಿಸಿಕೊಡಲಾಗಿದೆ
ಯಾರು ಬಳಕೆದಾರರೋ ಅವರೇ ಅದರ ನಿರ್ವಹಣಾ ಜವಾಬ್ದಾರಿ ವಹಿಸಿಕೊಳ್ಳುವುದು ಉತ್ತಮ. ಈ ಕಾರಣಕ್ಕಾಗಿ ಗ್ರಾ.ಪಂ.ಗೆ ವಹಿಸಿಕೊಡಲಾಗಿದೆ. ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ತಿಳಿದು ಬಗೆಹರಿಸಲು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೂ ಸೂಚನೆ ಕೊಡಲಾಗಿದೆ. ಸಮನ್ವಯದ ದೃಷ್ಟಿಯಿಂದ ಸಮಸ್ಯೆ ಇದ್ದಲ್ಲಿ ಪರಿಹರಿಸಲು ಗಮನಹರಿಸುತ್ತೇವೆ.
– ಸಿಂಧು ಬಿ. ರೂಪೇಶ್, ಉಡುಪಿ ಜಿ.ಪಂ. ಸಿಇಒ.
ಸಲಹೆ
ಪ್ರತಿ ತಾಲೂಕಿನಲ್ಲಿ ಕೊಳವೆಬಾವಿ ದುರಸ್ತಿಪಡಿಸುವ ಮಾನವ ಸಂಪನ್ಮೂಲ ಕೋಶ ಸಿದ್ಧಪಡಿಸಿ ಗ್ರಾ.ಪಂ.ಗಳಿಗೆ ಕಳುಹಿಸಿದರೆ ಅವರು ಅಗತ್ಯವಿದ್ದಾಗ ಅವರಿಗೆ ತಿಳಿಸಬಹುದು. ಈಗ ಕೊಳವೆಬಾವಿ ದುರಸ್ತಿಪಡಿಸುವ ಮಾನವ ಸಂಪನ್ಮೂಲದ ಕೊರತೆ ಇದೆ. ಹೀಗಾಗಿ ಪ್ರತಿ ಗ್ರಾ.ಪಂ.ನಲ್ಲಿರುವ ಕುಡಿಯುವ ನೀರಿಗೆ ಸಂಬಂಧಿಸಿದ ಸಿಬಂದಿಗೆ ಜಿಲ್ಲಾ ಅಥವಾ ರಾಜ್ಯ ಮಟ್ಟದಲ್ಲಿ ತರಬೇತಿ ಕೊಡಿಸಿದರೆ ಇವರನ್ನೇ ಕೊಳವೆಬಾವಿ ದುರಸ್ತಿಗೆ ಮಾನವ ಸಂಪನ್ಮೂಲವಾಗಿ ಬಳಸಿಕೊಳ್ಳಬಹುದು. ಸದ್ಯ ಈ ಕೆಲಸ ನಡೆಯುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಜಿ.ಪಂ. ಆಸಕ್ತಿ ವಹಿಸಿ ತರಬೇತಿ ಕಾರ್ಯಾಗಾರ ನಡೆಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವಿದೆ. ಇಲ್ಲವಾದರೆ ನಮ್ಮದೇ ತೆರಿಗೆ ಹಣ ಪೋಲಾಗಿ ಹೋಗುತ್ತದೆ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ