ಶಾಲೆಯಲ್ಲಿ ಪುಸ್ತಕ ಪಾಠ ಹೇಳುವ ಶಿಕ್ಷಕರಿಗೆ ನೈಜ ಕಾರ್ಯರೂಪ
Team Udayavani, Jul 1, 2017, 3:20 AM IST
ಉಡುಪಿ: ಶಾಲೆಯ ತರಗತಿಯಲ್ಲಿ ಪಠ್ಯ ಪುಸ್ತಕ ಹಿಡಿದುಕೊಂಡು ಅದರಲ್ಲಿ ಅಚ್ಚಾಗಿರುವ ಮಾನವ ಶರೀರದ ಕುರಿತು ಥಿಯರಿ (ಕಲ್ಪನೆಯ) ಪಾಠ ಮಾಡುವ ಶಿಕ್ಷಕರಿಗೆ ಪ್ರಾಕ್ಟಿಕಲ್ (ಕಾರ್ಯರೂಪ) ಆಗಿ ನೈಜ ಮಾನವ ಶರೀರದ ಬಗ್ಗೆ ತಿಳಿದುಕೊಳ್ಳುವ ವಿಶೇಷ ಕಾರ್ಯಾಗಾರವು ಮಣಿಪಾಲ ವಿವಿಯ ಮಲೇಕಾ ಮಣಿಪಾಲ ಮೆಡಿಕಲ್ ಕಾಲೇಜಿನ ಅನಾಟಮಿ, ಫಿಸಿಯಾಲಜಿ ಮತ್ತು ಬಯೋಕೆಮಿಸ್ಟ್ರಿ ವಿಭಾಗದ ವತಿಯಿಂದ ಮಣಿಪಾಲದಲ್ಲಿ ನಡೆಯಿತು. ಉಡುಪಿ ಜಿಲ್ಲೆಯ ಆಯ್ದ ಪ್ರೌಢಶಾಲೆ ಮತ್ತು ಪಿಯುಸಿಯ ಶಿಕ್ಷಕರಿಗೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ಮಣಿಪಾಲ ವಿವಿ ಕುಲಪತಿ ಡಾ| ಎಚ್. ವಿನೋದ್ ಭಟ್ ಅವರು ಉದ್ಘಾಟಿಸಿ, ಸಾಮಾಜಿಕವಾಗಿ ಸಂವೇದನಾಶೀಲತೆ ಹೊಂದಿರುವುದು ಪ್ರತಿ ವಿಶ್ವವಿದ್ಯಾನಿಲಯಗಳ ದೊಡ್ಡ ಕೆಲಸವಾಗಿದೆ. ಕಳೆದ 6 ದಶಕಗಳಿಂದ ಮಣಿಪಾಲ ಶಿಕ್ಷಣ ಸಂಸ್ಥೆಯು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ ಎಂದರು.
ಮಾನವಾಂಗದ ವೀಡಿಯೋ ಪ್ರಸಾರ
ಹೃದಯ ಮತ್ತು ಶ್ವಾಸಕೋಶಗಳು ಹೇಗೆ ಕಾರ್ಯವನ್ನು ನಿರ್ವಹಿಸುತ್ತವೆ ಎನ್ನುವುದರ ಕುರಿತು ಮಾನವ ದೇಹದೊಳಗಿನ ಅವುಗಳ ಕಾರ್ಯನಿರ್ವಹಣೆಯನ್ನು ವೀಡಿಯೋ ರೆಕಾರ್ಡಿಂಗ್ ತೋರಿಸುವ ಮೂಲಕ ಪ್ರದರ್ಶಿಸಲಾಯಿತು. ಡಿಜಿಟಲ್ ಲ್ಯಾಬೊರೇಟರಿಯಲ್ಲಿ ಜೀವಶಾಸ್ತ್ರ ರಸಾಯನ ವಿಭಾಗದವರು ‘ಪೌಷ್ಟಿಕಾಂಶ ಮತ್ತು ಶರೀರ ವಿಜ್ಞಾನ’ದ ಕುರಿತು ವಿಷಯವನ್ನು ತಿಳಿಸಿದರು. ಆರೋಗ್ಯ, ಅನಾರೋಗ್ಯದ ಪರಿಕಲ್ಪನೆಗಳು, ವಿವಿಧ ಪೌಷ್ಟಿಕಾಂಶಗಳ ಕುರಿತ ಸಂಶಯವನ್ನು ನಿವಾರಿಸಿದರು. ಮಧುಮೇಹಿಗಳು, ಅವರ ಆಹಾರ ಕ್ರಮ, ಬೊಜ್ಜು ಕುರಿತು ಕೂಡ ತಜ್ಞ ಪ್ರೊಫೆಸರ್ಗಳು ವಿವರಿಸಿದರು.
ಶಿಕ್ಷಕರಿಗೆ ಸ್ವ-ಅನುಭವ
ಶಿಕ್ಷಕರನ್ನು ವಿವಿಧ ಗುಂಪುಗಳಾಗಿ ವಿಂಗಡಿಸಲಾಯಿತು. ಹೃದಯ ಬಡಿತ, ಬಿ.ಪಿ. ಟೆಸ್ಟಿಂಗ್, ಶ್ವಾಸಕೋಶಗಳ ಕಾರ್ಯಗಳ ಕುರಿತು ಸ್ವತಃ ಶಿಕ್ಷಕರೇ ಸ್ವಯಂ ಅನುಭವಗಳನ್ನು ಪಡೆಯುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕರು ಅವರವರೇ ಹೃದಯ ಬಡಿತ, ಬಿ.ಪಿ. ತಪಾಸಣೆಯಂತಹ ಕಾರ್ಯಗಳನ್ನು ಟೆಸ್ಟಿಂಗ್ ಮೀಟರ್ಗಳ ಮೂಲಕ ಮಾಡಿ ಸ್ವಅನುಭವ ಪಡೆದುಕೊಂಡರು.
ಲಿಟಲ್ ರಾಕ್ ಇಂಡಿಯನ್ ಶಾಲೆ ಮತ್ತು ಸೈಂಟ್ ಮೇರಿ ಶಾಲೆಯ ಶಿಕ್ಷಕರು ಕಾರ್ಯಾಗಾರದಿಂದ ಪಡೆದುಕೊಂಡ ಅನುಭವಗಳನ್ನು ವಿವರಿಸಿದರು. ಮಣಿಪಾಲ ವಿವಿ ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಅವರು ಭಾಗವಹಿಸಿದ ಶಿಕ್ಷಕರಿಗೆ ಪ್ರಮಾಣಪತ್ರ ವಿತರಿಸಿದರು. ಮಲೇಕಾ ಮಣಿಪಾಲ ಮೆಡಿಕಲ್ ಕಾಲೇಜಿನ ಡೀನ್ ಡಾ| ಉಲ್ಲಾಸ್ ಕಾಮತ್, ಅನಾಟಮಿ ವಿಭಾಗದ ಮುಖ್ಯಸ್ಥ ಡಾ| ಮೋಹನ್ದಾಸ್ ರಾವ್, ಫಿಸಿಯಾಲಜಿ ವಿಭಾಗ ಮುಖ್ಯಸ್ಥ ಡಾ| ಕಿರಣ್ಮಾಯಿ ರೈ, ಬಯೋಕೆಮಿಸ್ಟ್ರಿ ವಿಭಾಗ ಮುಖ್ಯಸ್ಥ ಡಾ| ಗುರುಪ್ರಸಾದ್ ರಾವ್ ಅವರು ಉಪಸ್ಥಿತರಿದ್ದರು.
ಕಣ್ಣಾರೆ ಕಂಡು ದಂಗಾದೆವು..!
ಅಂಗ ರಚನಾಶಾಸ್ತ್ರ ಹಾಲ್ನಲ್ಲಿ ಜೀವಶಾಸ್ತ್ರ ಶಿಕ್ಷಕರು ಮನುಷ್ಯ ದೇಹದ ವಿವಿಧ ಅಂಗಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ನಾವು ವಿಜ್ಞಾನ ಪುಸ್ತಕ ನೋಡಿ ಮನುಷ್ಯ ದೇಹದೊಳಗೆ 2-3 ಕವಾಟಗಳ ಬಗ್ಗೆ ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿ ಅಚ್ಚಾಗಿರುವ ಚಿತ್ರಗಳ ಮೂಲಕ ಅದನ್ನು ವಿವರಿಸಿ ಪಾಠ ಮಾಡುತ್ತೇವೆ. ಆದರೆ ಇಲ್ಲಿ ಕಣ್ಣಾರೆ ಮನುಷ್ಯ ಜೀವದ ನೈಜ ಅಂಗಗಳನ್ನು ಕಂಡು ಸ್ವಲ್ಪ ದಂಗಾದೆವು. ಆದರೆ ಅದನ್ನು ನೋಡಿ ಕಲಿತದ್ದು ವಿಶೇಷ ಅನುಭವವನ್ನು ನೀಡಿದೆ ಎಂದು ಶಿಕ್ಷಕಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ