ಇಂಗಿಸಿದ ನೀರು: ಮನೆಗೂ ಆಯ್ತು, ಕೃಷಿಗೂ ಆಯ್ತು!
ಬೆಳ್ವೆಯಲ್ಲಿ ಕೃಷಿಕನ ಯಶಸ್ವೀ ಪ್ರಯೋಗ ; ಕೆರೆ, ಕೊಳವೆ ಬಾವಿಗೆ ಜಲ ಮರುಪೂರಣ
Team Udayavani, Jul 25, 2019, 5:08 AM IST
ಕೊಳವೆ ಬಾವಿಗೆ ಮರು ಜಲಪೂರಣ ಕಾರ್ಯ.
ಕುಂದಾಪುರ: ಮನೆ ನೀರಿಗೆ ತತ್ವಾರ, ಕೃಷಿ ನೀರು ಹರೋಹರ ಎಂಬ ಸ್ಥಿತಿಯಿತ್ತು. ಆದರೆ ಈಗ 24 ಗಂಟೆ ಪಂಪು ಚಾಲೂ ಮಾಡಿದರೂ ತೋಟಕ್ಕೆ ನೀರಿಗೆ ಕೊರತೆಯಿಲ್ಲ. ಊರೆಲ್ಲ ನೀರಿಗೆ ಪರದಾಡಿದರೂ ಇವರಿಗೆ ನೀರಿಗೆ ಬರವಿಲ್ಲ.
ನೀರಿಂಗಿಸುವಿಕೆ
ಅಂದಹಾಗೆ ನೀರಿಂಗಿಸುವ ಮೂಲಕ ಸಮಸ್ಯೆ ನಿವಾರಿಸಿಕೊಂಡದ್ದು ಬೆಳ್ವೆ ಶಂಕರನಾರಾಯಣ ದೇವಸ್ಥಾನ ಬಳಿಯ ನಿವಾಸಿ, ಬೆಳ್ವೆ ಗ್ರಾ.ಪಂ. ಸದಸ್ಯ ಕೃಷ್ಣ ನಾಯ್ಕ. ತಾರಸಿ ಮನೆ, ತೋಟ, ಗದ್ದೆ ಎಂದು ಹೊಂದಿರುವ ಕೃಷ್ಣ ನಾಯ್ಕ ಅವರಿಗೆ ನೀರಿಗೆ ಸಮಸ್ಯೆಯಿತ್ತು. ಕೃಷಿಗೆ ನೀರು ಸಾಲುತ್ತಿರಲಿಲ್ಲ.
76 ಸಾವಿರ ರೂ. ಖರ್ಚಿನಲ್ಲಿ ಕೊರೆದ ಕೊಳವೆ ಬಾವಿಯಲ್ಲಿ ಮುಕ್ಕಾಲು ಇಂಚು ನೀರಷ್ಟೇ ಇತ್ತು. ಕೆರೆ ಇದ್ದರೂ ಮಾರ್ಚ್ ಕೊನೆಗೆ ನೀರು ಕಡಿಮೆಯಾಗುತ್ತಿತ್ತು. 3 ಎಚ್ಪಿ ಪಂಪಿನ ಬದಲು 1 ಎಚ್ಪಿ ಮೋಟರ್ಗೆ ಬದಲಿಸಿದರು. ಆದರೂ ಅರ್ಧಗಂಟೆಗೆ ನೀರು ಖಾಲಿ. ಹೀಗೆ ನೀರಿನ ತಾಪತ್ರಯ ಎದುರಿಸುತ್ತಿದ್ದವರಿಗೆ ಹೊಳೆದ ಐಡಿಯಾವೇ ನೀರಿಂಗಿಸುವ ಪ್ರಕ್ರಿಯೆ.
ಕಳೆದ ವರ್ಷ ಮೊದಲು ಮನೆ ಉಪಯೋಗದ ಕೆರೆಗೆ ನೀರಿಂಗಿಸಲು ಮುಂದಾದರು. ಇದಕ್ಕೆ ಮಾರ್ಗದರ್ಶನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದಿಂದ. ತಾಲೂಕು ಕೃಷಿ ಅಧಿಕಾರಿ ಚೇತನ್ ಪ್ರೋತ್ಸಾಹ ನೀಡಿದರು. ಯೋಜನೆ 1 ಸಾವಿರ ರೂ.ಗಳ ಸಹಾಯಧನ ನೀಡಿತು. ಪರಿಣಾಮವಾಗಿ ಮನೆ ಮಾಡಿಗೆ ನೀರಿಂಗಿಸುವ ಸಲಕರಣೆಗಳ ಜೋಡಣೆಯಾದವು.
ಮನೆ ನೀರು ಸಂಗ್ರಹ
1450 ಚ.ಅಡಿ ಮನೆಯ ತಾರಸಿಯಲ್ಲಿ ಹೇರಳ ನೀರು ಸಂಗ್ರಹವಾಗುತ್ತಿತ್ತು. ಅದಕ್ಕಾಗಿ ಕೃಷ್ಣ ಅವರು 2.5 ಇಂಚು ಗಾತ್ರದ ಪೈಪುಗಳನ್ನು ಆಯ್ದುಕೊಂಡರು. ಇಳಿಬಿಟ್ಟ ಮಾಡಿನ ನೀರು ಸಂಗ್ರಹವಾಗಲು 45 ಅಡಿ ಉದ್ದನೆಯ ತಗಡಿನ ಹರಣಿ (ಅರ್ಧ ಚಂದ್ರಾಕೃತಿಯ ಪೈಪ್, ತುಳುವಿನ ದಂಬೆ) ಇಟ್ಟರು. ಸಾಮಾನ್ಯವಾಗಿ ಪಿವಿಸಿಯ ಹರಣಿ ದೊರೆಯುತ್ತದೆ. ಆದರೆ ದೊಡ್ಡ ಪ್ರಮಾಣ, ಆಕಾರದಲ್ಲಿ ದೊರೆಯುವುದಿಲ್ಲ. ತಾರಸಿಯಿಂದ ನೀರು ಸೋಸುವ ವಿವಿಧ ಫಿಲ್ಟರ್ಗಳನ್ನು ಅಳವಡಿಸಿದ 200 ಲೀ. ಸಾಮರ್ಥ್ಯದ ಡ್ರಮ್ಗೆ ನೀರು ಬಂದು ಅಲ್ಲಿಂದ 2.5 ಲೆಂತ್ನ ಪೈಪ್ ಮೂಲಕ ಕೆರೆಗೆ ಬರುವಂತೆ ಮಾಡಿದರು.
ಕೃಷಿಗೂ ಆಯಿತು
ಈ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಯಿತು. ಸಾಲದೆಂಬಂತೆ ಕೃಷಿಗೂ ನೀರಾಯಿತು. ಕಳೆದ ತಿಂಗಳು ಮಳೆ ಕಡಿಮೆಯಿತ್ತು. ಕೃಷಿಗೆ ಬೇಕಾದಷ್ಟು ಬರಲಿಲ್ಲ. ಆದರೆ ಬಂದ ಮಳೆ ನೀರನ್ನೇ ಉಪಯೋಗಿಸಿ ಭತ್ತ ನಾಟಿ ಮಾಡಿದರು. ನೀರಿಂಗಿಸುವ ಗುಂಡಿಯಿಂದ ಗದ್ದೆಗೆ ಹರಿಸಿ ಭತ್ತದ ಕೃಷಿಯನ್ನೂ ಇದೇ ನೀರಿಂಗಿಸುವ ತಂತ್ರಜ್ಞಾನದ ಮೂಲಕ ವರವಾಗಿಸಿದರು.
ನೀರಾಯಿತು
ಎಷ್ಟು ಪರಿಣಾಮಕಾರಿಯಾಯಿತು ಈ ವ್ಯವಸ್ಥೆ ಎಂದರೆ 700 ಅಡಿ ಆಳದ ಕೊಳವೆಬಾವಿಯಲ್ಲಿ ಮುಕ್ಕಾಲು ಇಂಚು ನೀರಿದ್ದುದು ಈಗ 24 ತಾಸು ತೆಗೆದರೂ ಮುಗಿಯದಷ್ಟಾಗಿದೆ!. ಇದರ ನೀರನ್ನೇ 70 ತೆಂಗಿನ ಮರಗಳು, 2 ಎಕರೆ ಭತ್ತದ ಗದ್ದೆ, 200 ಅಡಿಕೆ ಮರಗಳಿಗೆ ಉಪಯೋಗಿಸುವಷ್ಟು ನೀರು ಸಂಗ್ರಹವಾಗುತ್ತಿದೆ. 10 ನಿಮಿಷ ಪಂಪು ಚಾಲೂ ಮಾಡಿದರೆ ಸಾವಿರ ಲೀ.ನ ಸಿಂಟೆಕ್ಸ್ 10 ನಿಮಿಷದೊಳಗೆ ತುಂಬುತ್ತದೆ ಎನ್ನುತ್ತಾರೆ ಕೃಷ್ಣ ನಾಯ್ಕ ಅವರು. ಆಗಸ್ಟ್ ಅನಂತರದ ನೀರು ಪ್ರತಿ ಹನಿಯೂ ಭೂಮಿಗೆ ಇಂಗುವಂತಾಗಿದೆ. ಇದೆಲ್ಲದರ ಪರಿಣಾಮ ಅವರು ಕೃಷಿ ಇಲಾಖೆಯಿಂದ ನೀರು ನಿರ್ವಹಣೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದರು.
ಕೊಳವೆಬಾವಿಗೆ
ಕೊಳವೆಬಾವಿಗೂ ನೀರಿಂಗಿಸಲು ಮನ ಮಾಡಿದರು. ಆದರೆ ಸ್ವಲ್ಪ ವೆಚ್ಚದಾಯಕವಾಯಿತು. ಕೊಳವೆಬಾವಿಗೆ ಸಮಾನಾಂತರವಾಗಿ ಸುತ್ತ 15 ಅಡಿ ಅಗಲ, 15 ಅಡಿ ಆಳ, 15 ಅಡಿ ಉದ್ದದ ಗುಂಡಿ ತೋಡಿದರು. ಅದರಲ್ಲಿ ಕಾಲು ಇಂಚಿನ 126 ರಂಧ್ರಗಳನ್ನು ಕೊರೆದರು. ಅದಕ್ಕೆ ಕಬ್ಬಿಣದ ಬಲೆ ಹಾಕಿದರು. ಗುಂಡಿಯ ಬುಡದಲ್ಲಿ 2 ಅಡಿ ಎತ್ತರಕ್ಕೆ ದೊಡ್ಡ ಬೋಡ್ರಸ್ (ಕಲ್ಲು), ನಂತರ 6 ಮಿ.ಮೀ. ಗಾತ್ರದ ಬೋಡ್ರಸ್ ಅನ್ನು 1 ಅಡಿ ಎತ್ತರಕ್ಕೆ ಹಾಕಿದರು. ಅದರ ಮೇಲೆ 2 ಅಡಿ ಎತ್ತರಕ್ಕೆ ಕಚ್ಚಾ ಮರಳು ಹಾಕಿದರು. ಬಳಿಕ ಕಬ್ಬಿಣದ ಬಲೆ ಹಾಕಲಾಯಿತು. ಅದರ ಮೇಲೆ ಇದ್ದಿಲು ಸುರಿದರು. ಅನಂತರ ಪುನಃ ಬಲೆ ಹಾಕಲಾಯಿತು. ಅದರ ಮೇಲೆ ಕಸರಹಿತವಾದ ಗಾಳಿಸಿದ ಮರಳನ್ನು ಹಾಕಲಾಯಿತು. ಇದಕ್ಕೆ ತಾರಸಿ ನೀರು ಬಿದ್ದು ಇಂಗುವ ವ್ಯವಸ್ಥೆ ಮಾಡಲಾಗಿದೆ.
ಸರಕಾರದ
ಪ್ರೋತ್ಸಾಹ ಬೇಕು
ಅಮಾಸೆಬೈಲು ಪಂಚಾಯತ್ನಲ್ಲಿ ನೀರಿಂಗಿಸಲು ಪ್ರೋತ್ಸಾಹಧನ ಕೊಟ್ಟಂತೆ ಎಲ್ಲ ಪಂಚಾಯತ್ಗಳಲ್ಲೂ ನೀಡುವಂತಾಗಬೇಕು. ಸರಕಾರ ಮಳೆ ನೀರಿಂಗಿಸಲು ಪ್ರೋತ್ಸಾಹ ಕೊಡಬೇಕು. ಈ ನಿಟ್ಟಿನಲ್ಲಿ ಉದಯವಾಣಿ ಮಾಡು ತ್ತಿರುವ ಅಭಿಯಾನ ಶ್ಲಾಘನೀಯ.
-ಕೃಷ್ಣ ನಾಯ್ಕ ಬೆಳ್ವೆ,
ಪ್ರಗತಿಪರ ಕೃಷಿಕರು
ನೀವೂ ಅಳವಡಿಸಿ,
ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವ ರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ