ಇನ್ನಂಜೆ – ಶಂಕರಪುರ ರಸ್ತೆ: ಬಾವಿ ದಂಡೆ ಕುಸಿತ
ಅಪಾಯದ ಭೀತಿಯಲ್ಲಿ ಕಾಂಕ್ರೀಟ್ ರಸ್ತೆ
Team Udayavani, Oct 19, 2021, 5:18 AM IST
ಕಾಪು: ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯ ಇನ್ನಂಜೆ-ಶಂಕರಪುರ ರಸ್ತೆಯ ಕಾಂಕ್ರೀಟ್ ರಸ್ತೆ ಪಕ್ಕದ ಬಾವಿಯ ದಂಡೆ ಕುಸಿದು ಅಪಾಯಕಾರಿ ಕಂದಕ ಸೃಷ್ಟಿಯಾಗಿದ್ದು ಕಾಂಕ್ರೀಟ್ ರಸ್ತೆ, ರಸ್ತೆ ಸಂಚಾರಕ್ಕೆ ಅಪಾಯದ ಭೀತಿ ಎದುರಾಗಿದೆ.
ಇನ್ನಂಜೆ – ಶಂಕರಪುರ ರಸ್ತೆಯಲ್ಲಿ ಇನ್ನಂಜೆ ಸಿಎ ಬ್ಯಾಂಕ್ ಪ್ರಧಾನ ಕಚೇರಿ ಬಳಿಯ ಅಶ್ವಥಕಟ್ಟೆ ಪಕ್ಕದಲ್ಲಿರುವ ಖಾಸಗಿಯವರಿಗೆ ಸೇರಿದ ಗದ್ದೆಯ ಬದಿಯಲ್ಲಿರುವ ಬಾವಿಯ ದಂಡೆಯ ಒಂದು ಪಾರ್ಶ್ವ ಸಂಪೂರ್ಣ ಕುಸಿದಿದ್ದು, ದಂಡೆಯೊಂದಿಗೆ ಕಾಂಕ್ರೀಟ್ ರಸ್ತೆಯ ಬದಿಯೂ ಬಾವಿಯೊಳಗೆ ಕುಸಿದು ಬಿದ್ದಿರುವುದರಿಂದ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ.
ಅಗಲ ಕಿರಿದಾದ ಕಾಂಕ್ರೀಟ್ ರಸ್ತೆ ಬದಿಯ ಒಂದು ಪಾರ್ಶ್ವ ಕುಸಿದು ಎರಡು ತಿಂಗಳಾಗುತ್ತಾ ಬಂದಿದ್ದು ಗ್ರಾ.ಪಂ. ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ರಸ್ತೆಯ ಒಂದು ಬದಿಯಲ್ಲಿ ಬ್ಯಾರಿಕೇಡ್ ಇರಿಸಿ, ಟೇಪ್ ಅಂಟಿಸಿ, ತಾತ್ಕಾಲಿಕ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಕಾಪು – ಇನ್ನಂಜೆ – ಶಂಕರಪುರ ನಡುವಿನ ಪ್ರಮುಖ ರಸ್ತೆ ಇದಾಗಿದೆ. ಗ್ರಾ.ಪಂ. ಎಚ್ಚೆತ್ತುಕೊಂಡು, ಪರ್ಯಾಯ ವ್ಯವಸ್ಥೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಮುಂಬರುವ ದಿನಗಳಲ್ಲಿ ಕರ್ನಾಟಕ ಎಲ್ಲಾ ಕ್ಷೇತ್ರದಲ್ಲೂ ಅಗ್ರಸ್ಥಾನ ಪಡೆಯಲಿದೆ :ಅಶ್ವತ್ಥನಾರಾಯಣ
ಶೀಘ್ರ ಶಾಶ್ವತ ತಡೆಗೋಡೆ ರಚನೆಗೆ ಪ್ರಯತ್ನ
ಇನ್ನಂಜೆ – ಶಂಕರಪುರ ರಸ್ತೆಯ ಅಶ್ವತ್ಥಕಟ್ಟೆಯ ಬಳಿಯಲ್ಲಿ ರಸ್ತೆಯ ಒಂದು ಪಾರ್ಶ್ವ ಕುಸಿದಿರುವ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಇರಿಸಿ, ಸೂಚನೆ ನೀಡಲಾಗಿದೆ. ಬಾವಿ ಖಾಸಗಿಯವರಿಗೆ ಸೇರಿದ್ದು, ದಂಡೆ ಕುಸಿತದ ಬಗ್ಗೆ ಜಾಗದ ವಾರಸುದಾರರೊಂದಿಗೂ ಮಾತುಕತೆ ನಡೆಸಲಾಗಿದೆ. ಮರಳು ಗೋಣಿ ಚೀಲಗಳನ್ನು ಇಟ್ಟು ತಾತ್ಕಾಲಿಕ ತಡೆಗೋಡೆ ರಚಿಸಲು ಗ್ರಾ.ಪಂ. ಕ್ರಮ ಕೈಗೊಂಡಿದ್ದು, ಮಳೆಗಾಲ ಮುಗಿದ ಬಳಿಕ ಪಿಲ್ಲರ್ ಹಾಕಿ ಶಾಶ್ವತ ತಡೆಗೋಡೆ ರಚಿಸಲಾಗುವುದು.
-ಸುರೇಶ್ ಶೆಟ್ಟಿ, ಉಪಾಧ್ಯಕ್ಷರು, ಇನ್ನಂಜೆ ಗ್ರಾ.ಪಂ.,
ಪರಿಶೀಲನೆ
ಜಿ.ಪಂ. ರಸ್ತೆ ಇದಾಗಿದ್ದು ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳ ಸಮೀಕ್ಷೆ ನಡೆಸಿದ್ದಾರೆ. ಪಂಚಾಯತ್ ನೇತೃತ್ವದಲ್ಲೂ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರೊಂದಿಗೆ ಪರಿಶೀಲನೆ ನಡೆಸಲಾಗಿದೆ. ಗ್ರಾ.ಪಂ.ನ ವರ್ಗ 1ರ ಅನುದಾನ ಬಳಸಿಕೊಂಡು ತಾತ್ಕಾಲಿಕ ತಡೆಗೋಡೆ ರಚಿಸಲಾಗುವುದು. ಮಳೆ ಕಡಿಮೆಯಾದ ಬಳಿಕ ಪಿಲ್ಲರ್ ಅಳವಡಿಸಿ, ಶಾಶ್ವತ ತಡೆಗೋಡೆ ಸಹಿತ ಕಾಮಗಾರಿ ನಡೆಸಲಾಗುವುದು.
-ಮಂಜುನಾಥ ಆಚಾರ್ಯ, ಪಿಡಿಒ, ಇನ್ನಂಜೆ ಗ್ರಾ.ಪಂ.