ದೇವಲ್ಕುಂದ ಮೀನು ಸಂಸ್ಕರಣ ಘಟಕಕ್ಕೆ ತನಿಖಾ ಸಮಿತಿ ಭೇಟಿ
ಅಮೋನಿಯಾ ಸೋರಿಕೆ ಪ್ರಕರಣ: ಫಾಲೋಅಪ್
Team Udayavani, Aug 15, 2019, 5:58 AM IST
ಕುಂದಾಪುರ: ಅಮೋನಿಯಾ ಸೋರಿಕೆಯಿಂದ 75 ಮಂದಿ ಕಾರ್ಮಿಕರು ಅಸ್ವಸ್ಥರಾಗಲು ಕಾರ್ಖಾನೆಯ ನಿರ್ಲಕ್ಷ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು , ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗುತ್ತಿದೆ. ನಿರ್ಲಕ್ಷ್ಯ ಕುರಿತು ವಿವಿಧ ಇಲಾಖೆ ಗಳು ತನಿಖೆ ನಡೆಸಲಿವೆ ಎಂದು ಸಹಾಯಕ ಕಮಿಷನರ್ ಡಾ| ಎಸ್.ಎಸ್. ಮಧುಕೇಶ್ವರ್ ಹೇಳಿದರು.
ಅವರು ಬುಧವಾರ ಕಟ್ಬೆಲ್ತೂರು ಪಂಚಾಯತ್ ವ್ಯಾಪ್ತಿಯ ದೇವಲ್ಕುಂದದ ಮಲ್ಪೆ ಫ್ರೆಶ್ ಮರೈನ್ ಎಕ್ಸ್ಪೋರ್ಟ್ ಘಟಕಕ್ಕೆ ತನಿಖಾ ಸಮಿತಿ ನೆಲೆಯಲ್ಲಿ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾಧ್ಯಮದ ಜತೆ ಮಾತನಾಡಿದರು.
ಎಂಸಿಎಫ್ನಿಂದ ತಜ್ಞರು
8 ಟನ್ ಗ್ಯಾಸ್ ಪೈಕಿ 1.5 ಟನ್ನಷ್ಟು ಗ್ಯಾಸ್ ಪೈಪ್ನಲ್ಲಿದೆ. ಪೈಪ್ನ ಒಳಗೆ ಅನಿಲದ ಒತ್ತಡ ಹೆಚ್ಚಾಗಿ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಇದರ ತೆರವಿಗೆ ಮಂಗಳೂರಿನ ಎಂಸಿಎಫ್ನಿಂದ ಪರಿಣಿತರು ಆಗಮಿಸಲಿದ್ದಾರೆ. ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಮೊದಲಾದ ಮುಂಜಾಗ್ರತಾ ಕ್ರಮಗಳೊಂದಿಗೆ ಪೈಪ್ನ ಅನಿಲ ಖಾಲಿ ಮಾಡಲಾಗುವುದು. ಈಗಾಗಲೇ ಘಟಕಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಯಂತ್ರ ಸರಬರಾಜು ಮಾಡಿದ ಸಂಸ್ಥೆಯವರು ಮುಂಬಯಿಯಿಂದ ಬಂದಿದ್ದು, ಸೋರಿಕೆಯಾದಲ್ಲಿಗೆ ತಾತ್ಕಾಲಿಕವಾಗಿ ವೆಲ್ಡಿಂಗ್ ಮಾಡಿದ್ದನ್ನು ಪರಿಶೀಲಿಸಲಿದ್ದಾರೆ. ಈ ಸಂದರ್ಭ ಕೈಗಾರಿಕಾ ಇಲಾಖೆಯ ಬಾಯ್ಲರ್ಸ್ ವಿಭಾಗದವರು ಉಪಸ್ಥಿತರಿರುತ್ತಾರೆ. ಯಂತ್ರ ನಿರ್ವಹಣೆ ಕುರಿತು ಕಂಪನಿ ನಿರಾಕ್ಷೇಪಣ ಪತ್ರ ನೀಡಬೇಕು. ಸುರಕ್ಷತಾ ಕ್ರಮಗಳನ್ನು ಅಳವಡಿಸಿದ ಬಳಿಕವಷ್ಟೇ ಘಟಕ ಆರಂಭವಾಗಲಿದ್ದು, ಕಾರ್ಮಿಕರಿಗೆ 1 ವಾರದ ರಜೆ ನೀಡಲಾಗಿದೆ ಎಂದರು.
ಇಲ್ಲಿ ಒಟ್ಟು 401 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ವೇತನಕ್ಕೆ ಸಂಬಂಧಿಸಿದ ದೂರುಗಳಿಲ್ಲ. ಕಾರ್ಮಿಕರಿಗೆ ಘಟಕ ಆವರಣದಲ್ಲಿ ವಸತಿ ಕಲ್ಪಿಸುವಂತಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ವಿವರಣೆ ಕೇಳಲಿದೆ. ಘಟಕ ನಿರ್ವಹಣೆ ಕಡೆಗೆ ಗಮನ ನೀಡಿಲ್ಲ. ಅಗ್ನಿ ಅವಘಡ, ಕಾರ್ಖಾನೆ ಸಂಬಂಧದ ಅವಘಡಗಳ ಅಣಕು ಪ್ರದರ್ಶನ ಮಾಡಿದ್ದರೂ ರಾಸಾಯನಿಕ ಅವಘಡದ ನಿರ್ವಹಣೆ, ಸುರಕ್ಷೆ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ನಿರ್ವಾಹಕರಿಗೆ ಜೀವರಕ್ಷಕ ಸಾಧನ, ಪ್ರಥಮ ಚಿಕಿತ್ಸಾ ಸಲಕರಣೆ ಇಟ್ಟಿಲ್ಲ ಎಂದರು.
12 ವರ್ಷಗಳಿಂದ ಅಗ್ನಿಶಾಮಕ ದಳದ ನಿರಾಕ್ಷೇಪಣೆ ತೆಗೆದುಕೊಂಡಿಲ್ಲ. ತ್ಯಾಜ್ಯವನ್ನು ವಂಡ್ಸೆಯಲ್ಲಿ ಸುರಿಯಲಾಗುತ್ತದೆ ಎಂಬ ಕುರಿತು ಮಾಧ್ಯಮದವರು ಗಮನ ಸೆಳೆದಾಗ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿವೈಎಸ್ಪಿ ದಿನೇಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅಶೋಕ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಬೈಂದೂರು ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್, ಮಾಲಿನ್ಯ ನಿಯಂತ್ರಣ ಮಂಡಳಿಯ ಡಾ| ಲಕ್ಷ್ಮಿಕಾಂತ್, ವಾಮನ ನಾಯಕ್, ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ಉಡುಪಿಯ ಜೀವನ್ ಕುಮಾರ್, ಕುಂದಾಪುರ ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ, ಫ್ಯಾಕ್ಟರೀಸ್ ಆಂಡ್ ಬಾಯ್ಲರ್ಸ್ ಇಲಾಖೆಯ ಪ್ರತಾಪ್, ಅಗ್ನಿಶಾಮಕ ದಳದ ಕೊರಗ ಮೊಗವೀರ, ರಾಘವೇಂದ್ರ ಆಚಾರ್ ಉಪಸ್ಥಿತರಿದ್ದರು.
ಅಮೋನಿಯಾ ಸೋರಿಕೆಯಿಂದ 75 ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಸಿ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದ್ದು ಈ ಸಮಿತಿ ಬುಧವಾರ ಘಟಕದ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿ, ಘಟಕದ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ