“ಜಿಎಸ್ಟಿ ಪಾವತಿ ಜನವರಿಯಲ್ಲಿ ಮತ್ತಷ್ಟು ಸರಳ’-ರಾಜೇಶ್ ಪ್ರಸಾದ್
Team Udayavani, Sep 21, 2018, 9:41 AM IST
ಉಡುಪಿ: ಗುರುವಾರ ವೈಕುಂಠ ಬಾಳಿಗಾ ಕಾನೂನು ಕಾಲೇಜು ಹಾಗೂ ತಾನು ಕಲಿತ ಹಿರಿಯಡಕ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ “ಉದಯವಾಣಿ’ ಜತೆಗೆ ಮಾತನಾಡಿದ ತೆರಿಗೆ ಆಯುಕ್ತ ರಾಜೇಶ್ ಅವರು ಜಿಎಸ್ಟಿ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.
*ಜಿಎಸ್ಟಿ ಯಶಸ್ಸಾಯಿತೆ?
ಪೂರ್ಣ ಯಶಸ್ಸು ಸಾಧಿಸುತ್ತಿದೆ. ಜಿಎಸ್ಟಿ ಜಾರಿಗೊಳಿಸಿದ ಇತರ ಕೆಲವು ದೇಶಗಳಲ್ಲಿ ಹಣದುಬ್ಬರದ ಸಮಸ್ಯೆ ಎದುರಾಗಿತ್ತು. ಮಲೇಶ್ಯಾದಲ್ಲಿ ಒಂದೇ ತೆರಿಗೆ ದರ ವಿಧಿಸಿದ್ದರಿಂದ ಅಲ್ಲಿ ಸಮಸ್ಯೆಯಾಗಿತ್ತು. ಆದರೆ ಇಲ್ಲಿ ವಿಭಿನ್ನ ತೆರಿಗೆ ಸ್ಲಾಬ್ಗಳನ್ನು ಮಾಡಿದ್ದರಿಂದ ಹಣದುಬ್ಬರ ಸಮಸ್ಯೆ ಬಾಧಿಸಿಲ್ಲ.
* ಜಿಎಸ್ಟಿಯಿಂದ ಯಾರಿಗೆಷ್ಟು ಲಾಭ?
ಹಿಂದೆ ಹಲವು ಪರೋಕ್ಷ ತೆರಿಗೆಗಳಿದ್ದವು. ಈಗ ಕೆಲವಕ್ಕೆ ಅಷ್ಟೇ ತೆರಿಗೆ ದರ ಅಥವಾ ಕಡಿಮೆ ಇದೆ ವಿನಾ ಹೆಚ್ಚಿಲ್ಲ. ತೆರಿಗೆ ವಂಚನೆಯೂ ಕಡಿಮೆ. ದಿನಬಳಕೆಯ ಅನೇಕ ವಸ್ತು ಗಳ ತೆರಿಗೆ ಇಳಿಕೆಯಾಗಿದೆ. ಈ ಹಿಂದೆ ಶೇ.28ರಿಂದ 33ರ ವರೆಗೆ ಇದ್ದ ತೆರಿಗೆ ದರವನ್ನು ಶೇ. 18ರ ವರೆಗೆ ಇಳಿಸಲಾಗಿದೆ. ಅನೇಕ ವಸ್ತುಗಳನ್ನು ತೆರಿಗೆಯಿಂದ ಹೊರಗಿಡಲಾಗಿದೆ. ಗ್ರಾಹಕರಿಗೆ ಲಾಭ ವಾಗಿದೆ. ಗ್ರಾಹಕರಿಗೆ ಲಾಭ ದೊರೆಯದಿದ್ದರೆ ದೂರು ಕೂಡ ಸಲ್ಲಿಸಬಹುದು. ಕಾನೂನು ಕ್ರಮ ಸಾಧ್ಯ.
*ಜಿಎಸ್ಟಿ ಪಾವತಿ ವ್ಯವಸ್ಥೆಯ ತೊಂದರೆಗಳಿಗೆ ಪರಿಹಾರವೇನು?
ಆರಂಭದಲ್ಲಿ ಉಂಟಾಗಿದ್ದ ಸಮಸ್ಯೆಗಳಲ್ಲಿ ಬಹುತೇಕ ಬಗೆಹರಿದಿವೆ. ಇನ್ವೈಸ್ ಮ್ಯಾಚಿಂಗ್ನಂತಹ ಐಟಿ ಸಿಸ್ಟಂ ಜಗತ್ತಿನಲ್ಲಿಯೇ ಮೊದಲ ಬಾರಿಗೆ ಇಲ್ಲಿ ಅನುಷ್ಠಾನಗೊಳಿಸಲಾಗಿದೆ. ಎಲ್ಲಿ ತೊಂದರೆ ಬಂದರೂ ಕೂಡಲೇ ಪರಿಹರಿಸಲಾಗುತ್ತಿದೆ.
* ಪಾವತಿ ನ್ಯೂನತೆಗೆ ದಂಡ ಕ್ರಮಕ್ಕೆ ಆಕ್ಷೇಪವಿದೆಯಲ್ಲವೆ?
ತಾಂತ್ರಿಕ ದೋಷದಿಂದ ಆಗುವ ತಪ್ಪುಗಳಿಗೆ ದಂಡ ವಿಧಿಸುವುದಿಲ್ಲ. ಉದ್ದೇಶಪೂರ್ವಕ ತೆರಿಗೆ ತಪ್ಪಿಸುವವರಿಗೆ ಮಾತ್ರ ದಂಡ. ತಪ್ಪಿತಸ್ಥ ಕಂಪೆನಿ ವಿರುದ್ಧವೂ ಕ್ರಮ ಜರಗಿಸಲಾಗುತ್ತಿದೆ.
*ಸ್ಥಳೀಯ ಅಧಿಕಾರಿಗಳಿಗೆ ತೊಂದರೆ ಸರಿಪಡಿಸುವ ಅಧಿಕಾರವಿಲ್ಲವೆ?
ಇದೆ. ಆದರೆ ತಾಂತ್ರಿಕ ತೊಂದರೆಗಳ ನಿಭಾವಣೆ ಅವರಿಗೆ ಅಸಾಧ್ಯ. ಅದನ್ನು ಜಿಎಸ್ಟಿ ಅಹವಾಲು ವಿಭಾಗಕ್ಕೆ ತಿಳಿಸಬೇಕು. ಜಿಎಸ್ಟಿ ತೊಂದರೆ ಬಗ್ಗೆ ಜಿಎಸ್ಟಿ ಕೌನ್ಸಿಲ್ ಸಭೆಗಳು ನಡೆಯುತ್ತವೆ.
ಬೊಮ್ಮಾರಬೆಟ್ಟು ಶಾಲೆಯಿಂದ ತೆರಿಗೆ ಆಯುಕ್ತರವರೆಗೆ…
ರಾಜೇಶ್ ಪ್ರಸಾದ್ ಮೂಲತಃ ಹಿರಿಯಡಕ ಬೊಮ್ಮಾರಬೆಟ್ಟಿನವರು. ಅಲ್ಲಿನ ಸ. ಪ್ರಾ. ಶಾಲೆಯಲ್ಲಿ ಪ್ರಾಥಮಿಕ, ಹಿರಿಯಡಕ ಸ.ಪ.ಪೂ. ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಪಡೆದು ಎಂಜಿಎಂ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದರು. ಐಎಎಸ್ ಉತ್ತೀರ್ಣರಾಗಿ ಗೋವಾ, ಅರುಣಾಚಲಪ್ರದೇಶ, ಹೊಸದಿಲ್ಲಿಯಲ್ಲಿ ಡಿಸಿ ಆಗಿ ಸೇವೆ ಸಲ್ಲಿಸಿದರು. ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸಿ ಪ್ರಸ್ತುತ ತೆರಿಗೆ ಆಯುಕ್ತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ