ಇಲ್ಲಿನ ರಸ್ತೆಯಲ್ಲಿ ಬಸ್ ತಿರುಗಿಸುವುದೇ ಕಷ್ಟ
Team Udayavani, Apr 29, 2019, 6:30 AM IST
ಕಾರ್ಕಳ: ಇಲ್ಲಿನ ಪೇಟೆಯ ಹೃದಯ ಭಾಗ ತೀರ ಕಿರಿದಾಗಿದ್ದು ರಸ್ತೆ ಅಭಿವೃದ್ಧಿ ಕಾಣದೆ ಸುಗಮ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲಿಲ್ಲ. ನಗರದ ಪ್ರಮುಖ ಸಮಸ್ಯೆ ಇದಾದರೂ, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿ ಕಾರಿಗಳಾಗಲಿ, ಜನಪ್ರತಿನಿ ಧಿಗಳಾಗಲಿ ಇಚ್ಚಾಶಕ್ತಿ ಪ್ರದರ್ಶಿಸಿಲ್ಲ.
ಇದರಿಂದಾಗಿ ಮೂರು ಮಾರ್ಗ ಪ್ರದೇಶದಲ್ಲಿ ಬಸ್ ಚಾಲಕರಿಗೆ ಬಸ್ ತಿರುಗಿಸುವುದು ಸವಾಲಿನ ಕೆಲಸವೇ ಆಗಿದೆ. ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿದ್ದು, ಸವಾರರು ಟ್ರಾಫಿಕ್ ಸಮಸ್ಯೆಯಿಂದ ಪರಿತಪಿಸುವಂತಾಗುತ್ತಿದೆ.
ಇಕ್ಕಟ್ಟಾದ ರಸ್ತೆ
ತೀರಾ ಇಕ್ಕಟ್ಟಾಗಿರುವ ರಸ್ತೆಯಾಗಿರುವುದರಿಂದ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಕಿಷ್ಕಿಂದೆಯಂತಿರುವ ಈ ರಸ್ತೆಯಲ್ಲಿ ಪಾದಚಾರಿಗಳೂ ನಿತ್ಯ ಪರದಾಡುವಂತಾಗಿದೆ. ರಸ್ತೆಯನ್ನು ಅಗಲಗೊಳಿಸುವತ್ತ ಈ ವರೆಗೂ ಯಾರೂ ಗಮನ ವಹಿಸಿಲ್ಲ.
ಪಾರ್ಕಿಂಗ್ಗೆ ಇಲ್ಲ ಜಾಗ
ಪೇಟೆಯಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಪಾರ್ಕಿಂಗ್ಗಾಗಿ ಸೂಕ್ತ ಜಾಗ ಗುರುತಿಸಿಲ್ಲ. ಇದರಿಂದ ಹಬ್ಬ ಹರಿದಿನಗಳು, ಉತ್ಸವಾದಿಗಳ ಸಂದರ್ಭದಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತದೆ.
ರಸ್ತೆ ಬದಿ ಗುಂಡಿ
ಪೈಪ್ಲೆ„ನ್ ಅಳವಡಿಕೆಗೆ ಮುಖ್ಯರಸ್ತೆಬದಿ ಅಗೆದ ಗುಂಡಿ ಗಳನ್ನು ಮುಚ್ಚಿಲ್ಲ. ಬಸ್ ಸ್ಟಾಂಡ್ನಿಂದ ಬಂಡಿಮಠದವರೆಗಿನ ರಸ್ತೆ ಯಲ್ಲಿ ಇಂಗುಗುಂಡಿಯಂತೆ ಅಲ್ಲಲ್ಲಿ ಹೊಂಡವಿದ್ದು, ತೊಡಕಾಗಿ ಪರಿಣಮಿಸಿದೆ.
ಡಿಸಿ ಮುಂದಾಗಿದ್ದರು
ಈ ಹಿಂದೆ ಉಡುಪಿ ಡಿಸಿಯಾಗಿದ್ದ ಹೇಮಲತಾ ಅವರು ರಸ್ತೆಗೆ ಹೊಂದಿಕೊಂಡಂತಿದ್ದ ಅಂಗಡಿ ಮುಂಭಾಗ ತೆರವುಗೊಳಿಸುವತ್ತ ದಿಟ್ಟ ಕ್ರಮ ಕೈಗೊಂಡಿದ್ದರು. ಅವರ ಪ್ರಯತ್ನ ಮಾತ್ರ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಕೆಲವೆಡೆ ಕಟ್ಟಡ ಮಾಲಕರು ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಸಹಕರಿಸಿದ್ದರೆ ಇನ್ನು ಕೆಲವರು ಜಾಗ ಬಿಟ್ಟುಕೊಡಲು ನಿರಾಕರಿಸಿದ್ದರು. ಆದ್ದರಿಂದ ಜಾಗದ ಮಾಲಕರಿಗೆ ಸೂಕ್ತ ಪರಿಹಾರ ನೀಡಿ ರಸ್ತೆ ಅಭಿವೃದ್ಧಿಪಡಿಸುವತ್ತ ಗಮನ ನೀಡಬೇಕೆಂಬುದು ಸಾರ್ವಜನಿಕರ ಆಗ್ರಹ.