ಶ್ರೀಕೃಷ್ಣನ ತಣ್ತೀ ಅಳವಡಿಸಿಕೊಳ್ಳುವುದು ಅಗತ್ಯ
ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠದ ಕಿರಿಯ ಸ್ವಾಮೀಜಿ
Team Udayavani, Jan 17, 2020, 6:30 AM IST
ಶ್ರೀಕೃಷ್ಣ ಮಠದಲ್ಲಿ 2 ವರ್ಷಗಳ ಪರ್ಯಾಯ ಆರಂಭವಾದ ಬಳಿಕ 32ನೆಯ ಪರ್ಯಾಯ ಚಕ್ರದ ಎರಡನೆಯ ಪರ್ಯಾಯ ಪೂಜಾ ಕೈಂಕರ್ಯದ ಉತ್ಸವ ನಡೆಯುತ್ತಿದೆ. ಇದು ಅದಮಾರು ಮಠಕ್ಕೆ 32ನೆಯ ಪರ್ಯಾಯ. ಈ ಸರದಿ ಅದಮಾರು ಮಠಕ್ಕೆ ಸಲ್ಲುತ್ತಿರುವ ಹಿನ್ನೆಲೆಯಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಪಟ್ಟ ಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು “ಉದಯವಾಣಿ’ ಜತೆ ನಡೆಸಿದ ಮಾತುಕತೆಯ ಸಾರ ಇಲ್ಲಿದೆ.
ಪರ್ಯಾಯ ಪೂಜೆಯ ಅವಧಿಯಲ್ಲಿ ತಾವು ಹಮ್ಮಿಕೊಂಡಿರುವ ಯೋಜನೆಗಳೇನು?
ಯೋಜನೆಗಳೇನೂ ಇಲ್ಲ. ಇದ್ದದ್ದನ್ನು ರೂಢಿಸಿಕೊಂಡು ಹೋಗುತ್ತೇವೆ. ಪ್ರತಿನಿತ್ಯ ಈಗ ಅಖಂಡ ಭಜನೆ ನಡೆಯುತ್ತಿರುವ ಸ್ಥಳದಲ್ಲಿಯೇ ಬೆಳಗ್ಗೆ ಮತ್ತು ಸಂಜೆ ಎರಡು ಅವಧಿ ನಿರಂತರ ಭಜನೆಯನ್ನು ಮುಂದುವರಿಸಿಕೊಂಡು ಹೋಗು ತ್ತೇವೆ. ತುಳಸಿ ದಳಗಳನ್ನು ಭಕ್ತರು ತಂದುಕೊಟ್ಟರೆ ಲಕ್ಷತುಳಸೀ ಅರ್ಚನೆಯನ್ನೂ ಮಾಡುತ್ತೇವೆ. ಚಿಣ್ಣರ ಸಂತರ್ಪಣೆಯಂತಹ ಯೋಜನೆಗಳು ಮುಂದುವರಿ ಯುತ್ತವೆ. ನಮ್ಮ ಹಿರಿಯರು ನಡೆಸಿ ಕೊಂಡು ಬಂದ ದೇವರ ದರ್ಶನ, ಅನ್ನ ಸಂತರ್ಪಣೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇವೆ. ಈಗ ಸಾರ್ವಜನಿಕರು ನೋಡುವಂತೆ ಪರ್ಯಾಯ ಪೂಜೆಯ ದೃಷ್ಟಿ ಇಲ್ಲ. ಆಚಾರ್ಯ ಮಧ್ವರ ಆಣತಿಯಂತೆ 2 ವರ್ಷ ಕೃಷ್ಣ ಪೂಜೆಯನ್ನು ವ್ರತದಂತೆ ಮಾಡುವುದು ಬಹಳ ಮುಖ್ಯ.
ಕಿರಿಯ ಸ್ವಾಮೀಜಿಯವ ರಾಗಿ ಮಠದ ಅಧಿಕಾರ ತಮಗೆ ದೊರಕಿರುವ ಬಗ್ಗೆ ತಮ್ಮ ಅಭಿಪ್ರಾಯ?
ನಾವು ದೇವರಲ್ಲಿ ಪ್ರಾರ್ಥಿಸುವಾಗ ನಾನಾ ಬೇಕು ಗಳನ್ನು ಸಲ್ಲಿಸುತ್ತೇವೆ. ಶಾಸ್ತ್ರಗಳ ಪ್ರಕಾರ ಹೀಗೆ ನಾವು ಏನನ್ನೂ ಕೇಳಕೂಡದು. ಕೇಳುವುದಿದ್ದರೆ ಅತಿ ದೊಡ್ಡದನ್ನು ಕೇಳಬೇಕು. ಅದುವೇ ಎಲ್ಲ ಬಂಧನಗಳಿಂದ ಮುಕ್ತಿ ಇರುವ ಸ್ಥಿತಿ, ಮೋಕ್ಷ. “ನಿಮ್ಮ ಕೆಲಸ ನೀವು ಮಾಡಿ. ಕೊಡ ಬೇಕಾದದ್ದನ್ನು ಕೊಡುವ ಸಂದರ್ಭದಲ್ಲಿ ಕೊಡು ತ್ತೇನೆ’ ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ. ಗುರುಗಳು ಹೇಳಿದ ಜವಾಬ್ದಾರಿಯನ್ನು ಶ್ರೀಕೃಷ್ಣನ ಸೇವೆ ಎಂದು ವಿನಮ್ರವಾಗಿ ಮಾಡುತ್ತೇವೆ.
ಭಕ್ತ ಜನರಿಗೆ ಸಂದೇಶವೇನು?
ಶ್ರೀಕೃಷ್ಣನ ತಣ್ತೀಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಒಳ್ಳೆಯ ಉದ್ದೇಶದ ಸಾಧನೆಗಳನ್ನು ಒಮ್ಮಿಂದೊಮ್ಮೆಲೇ ಮಾಡಲು ಆಗುವುದಿಲ್ಲ. ಕಾಲಕ್ರಮೇಣ ಅದು ಕೈಗೂಡಬೇಕು. ಆದ್ದರಿಂದ ಒಳ್ಳೆಯ ಕೆಲಸ ಗಳಿಗಾಗಿ ನಿತ್ಯ ಪ್ರಯತ್ನದಲ್ಲಿರೋಣ. ಪರಿಪೂರ್ಣ ಎಂದು ಹೇಳಲು ಆಗುವುದಿಲ್ಲ. ಆ ದಿಕ್ಕಿನಲ್ಲಿ ಮುನ್ನಡೆ ಯೋಣ. ಯಾವುದೋ ಒಂದು ದಿನ ಭಗವಂತ ವಿಶಿಷ್ಟವಾದ ಅನುಗ್ರಹವನ್ನು ಮಾಡುತ್ತಾನೆ.
ಶ್ರೀಕೃಷ್ಣ ಮಠದಲ್ಲಿ ಸಾವಯವ ಅಕ್ಕಿ, ಸ್ಥಳೀಯ ಬಾಳೆ ಎಲೆಯ ಖರೀದಿ ಇತ್ಯಾದಿಗಳ ಕುರಿತು…
ಸ್ಥಳೀಯವಾಗಿ ಬೆಳೆದ ಬಾಳೆ ಎಲೆಯನ್ನು ಖರೀದಿಸಲು ನಿರ್ಧರಿಸಿದ್ದೇವೆ. ಸಾವಯವ ಧಾನ್ಯಗಳನ್ನು ಯಾರಾದರೂ ಬೆಳೆದರೆ ಅದನ್ನು ಖರೀದಿಸಬಹುದು. ಹೊರೆಕಾಣಿಕೆಯಲ್ಲಿ ಭಕ್ತರು ಅಕ್ಕಿ ಕೊಡುತ್ತಾರೆ. ಭಕ್ತಿಯಿಂದ ತಂದುಕೊಡುವಾಗ ಸಾವಯವ ಅಕ್ಕಿಯೇ ಆಗಬೇಕೆನ್ನುವುದು ಕಷ್ಟ. ಹೀಗೆ ಭಕ್ತರು ಕೊಟ್ಟದ್ದು ಮತ್ತು ಸಾವಯವ ಎರಡನ್ನೂ ಬಳಸುತ್ತೇವೆ. ಸಾವಯವದಂತಹ ಪ್ರಯತ್ನ ತತ್ಕ್ಷಣವೇ ಆಗುವಂಥದ್ದಲ್ಲ, ಸುದೀರ್ಘ ಕಾಲವನ್ನು ಅದು ತೆಗೆದುಕೊಳ್ಳುತ್ತದೆ.
ಶ್ರೀ ವಿಬುಧೇಶತೀರ್ಥರು ವಿಜ್ಞಾನದ ಮೇಲಿನ ಗೌರವದಿಂದ ಹಿರಿಯ ವಿಜ್ಞಾನಿಗಳನ್ನು ಕರೆದು ಗೌರವಿಸಿದಂತೆ ತಾವೇನಾದರೂ ಅಂತಹ ಉಪಕ್ರಮ ಗಳನ್ನು ಅಳವಡಿಸಿಕೊಳ್ಳಲಿದ್ದೀರಾ?
ಎಲ್ಲ ಬಗೆಯ ಸಾಧಕರನ್ನು ಗುರುತಿಸಬೇಕೆಂದಿದೆ. ಇದು ಪರ್ಯಾಯದ ದಿನವೇ ಎಂದರ್ಥವಲ್ಲ. ಪರ್ಯಾಯದ ದಿನವೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುತ್ತಿದ್ದೇವೆ. ಎರಡು ವರ್ಷಗಳ ಅವಧಿಯಲ್ಲಿ ಕೇವಲ ವಿಜ್ಞಾನಿಗಳೆಂದಲ್ಲ, ಎಲ್ಲ ಕ್ಷೇತ್ರಗಳ ಸಾಧಕರನ್ನೂ ಗುರುತಿಸುವ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇವೆ.
ಯುವಕರು, ವಿದ್ಯಾರ್ಥಿಗಳಿಗೆ ಸಂದೇಶವೇನು?
ಈಗಿನ ಕಾಲದಲ್ಲಿ ವಿಚಿತ್ರ ಸಮಸ್ಯೆ ಎಂದರೆ ಸುಲಭವಾದ ಸಂಪರ್ಕ. ಅರ್ಧ ಗಂಟೆಯಲ್ಲಿ ಎಲ್ಲಿಂದ ಎಲ್ಲಿಗೂ ಹೋಗಬಹುದು. ಬಂದ ಬಳಿಕ ಅದಕ್ಕೆ ಬೇಕಾದ ವ್ಯವಸ್ಥೆಗಳಾಗುವುದು ಸುಲಭದ ವಿಷಯವಲ್ಲ. ಈಗ ಇಲ್ಲಿದ್ದವರು ಇನ್ನೊಂದೂರಿಗೆ, ಆ ಊರಿನಿಂದ ಮತ್ತೂಂದೂರಿಗೆ ಹೋಗುತ್ತಾರೆ. ಯಾರೂ ಎಲ್ಲಿಯೂ ನೆಲೆಯೂರುವುದಿಲ್ಲ. ಇದರರ್ಥ ಒಬ್ಬ ವ್ಯಕ್ತಿ ಒಂದೇ ರೀತಿಯ ಆಚರಣೆಯಲ್ಲಿ ಬದುಕುತ್ತಿಲ್ಲ. ಸಮಯಕ್ಕೆ ಸರಿಯಾಗಿ ಅವರವರಿಗೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುತ್ತಾರೆ. ನಾವು ಸ್ಥಳೀಯ ಸಂಸ್ಕೃತಿಯ ಜಾಗೃತಿ ಮೂಡಿಸುವುದಕ್ಕೆ ಆದ್ಯತೆ ಕೊಡುತ್ತೇವೆ. ನಮ್ಮವರು, ನಮ್ಮ ನಾಡು, ನಮ್ಮ ವಸ್ತುಗಳ ಬಗೆಗೆ ಪ್ರೀತಿ ಹುಟ್ಟಬೇಕು. ಇಲ್ಲವಾದರೆ ತಂದೆತಾಯಿಗಳು ವೃದ್ಧರಾದ ಬಳಿಕ ಬಿಟ್ಟುಬಿಡುವಂತೆ ಎಲ್ಲದಕ್ಕೂ ಆಗುತ್ತದೆ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’