ಜ. 6: ರಾ.ಹೆ. ತಡೆ; ಬೆಂಬಲಕ್ಕೆ ಮನವಿ
Team Udayavani, Jan 5, 2019, 12:30 AM IST
ಮಲ್ಪೆ: ಬೋಟ್ ನಾಪತ್ತೆಯಾಗಿ 20 ದಿನ ಕಳೆದರೂ ಪ್ರಕರಣ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿರುವ ರಾಜ್ಯ ಸರಕಾರದ ವಿರುದ್ಧ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಜ. 6ರಂದು ಆಯೋಜಿಸಿರುವ ಬೃಹತ್ ಪ್ರತಿಭಟನ ಜಾಥಾ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಮೀನುಗಾರಿಕೆಯ ಇತಿಹಾಸದಲ್ಲೇ ಕಂಡು ಕೇಳರಿಯದ ಈ ಪ್ರಕರಣದಿಂದ ಮೀನುಗಾರರು ಮಾನಸಿಕವಾಗಿ ಕುಗ್ಗಿದ್ದು ರಾಜ್ಯ ಸರಕಾರ ಸೂಕ್ತವಾಗಿ ಸ್ಪಂದಿಸದೇ ಮೀನುಗಾರರನ್ನು ನಿರ್ಲಕ್ಷಿಸಿರುವುದು ದುರದೃಷ್ಟಕರ. ಈ ಘಟನೆ ಮೀನುಗಾರರ ನೈತಿಕ ಸ್ಥೈರ್ಯವನ್ನೇ ಅಡಗಿಸಿದೆ ಎಂದು ಅವರು ಹೇಳಿದ್ದಾರೆ.
3 ಜಿಲ್ಲೆಯ ಮೀನುಗಾರರು ಭಾಗಿ
ದ.ಕ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಸಂಘಟನೆಗಳು, ಮೀನುಗಾರಿಕಾ ಸಹಕಾರಿ ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದು ಮೀನುಗಾರಿಕೆ ಬಂದ್ ಮಾಡಲಿವೆ.
ಜ. 6ರಂದು ನಡೆಯುವ ರಾ.ಹೆ. ಬಂದ್ ವೇಳೆ ಆದಿವುಡುಪಿ -ಮಲ್ಪೆ ಮಾರ್ಗ ಮತ್ತು ಅಂಬಲಪಾಡಿ-ಕಿದಿಯೂರು ಮಾರ್ಗದಲ್ಲಿ ಸಂಚರಿಸುವ ಬಸ್ ಮತ್ತು ಇನ್ನಿತರ ವಾಹನಗಳು ಹಾಗೂ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಿಕೊಂಡು ಬಂದ್ಗೆ ಸಹಕರಿಸಬೇಕು. ವೈದ್ಯಕೀಯ ಚಿಕಿತ್ಸೆ, ಮೆಡಿಕಲ್ ಮತ್ತು ತೀರ ಅಗತ್ಯದ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಲಾಗಿದೆ.
ಸತೀಶ್ ಕುಂದರ್, ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ