ಅಟ್ಟೆಗೆ 70 ರೂ.: ಭೀತಿಯಲ್ಲಿ ಮಲ್ಲಿಗೆ ಬೆಳೆಗಾರರು
Team Udayavani, May 8, 2021, 5:40 AM IST
ಶಿರ್ವ: ಕೋವಿಡ್ ದಿಂದಾಗಿ ಶಂಕರಪುರ ಮಲ್ಲಿಗೆ ದರದಲ್ಲಿ ಇಳಿಕೆಯಾಗಿದ್ದು ಇದು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮೇ 5ರಂದು ಅಟ್ಟೆಗೆ 70 ರೂ. ಇದ್ದ ದರ ಮೇ 6ರಂದು 170 ರೂ.ಗೆ ಏರಿತ್ತು. ಬಳಿಕ ಇಳಿಕೆಯಾಗಿ ಗುರುವಾರ 130 ರೂ. ಇದ್ದು ಶುಕ್ರವಾರ ಮತ್ತೆ 70 ರೂ.ಗೆ ಇಳಿದಿದೆ.
ವರ್ಷದ ಹೆಚ್ಚಿನ ಆದಾಯ ಎಪ್ರಿಲ್ -ಮೇ ತಿಂಗಳಲ್ಲಿ ಸಿಗುವುದರಿಂದ ಮಲ್ಲಿಗೆ ಕೃಷಿಯನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದ ನೂರಾರು ಕುಟುಂಬಗಳು, ಬೆಳೆಗಾರರು, ಕಟ್ಟೆ ವ್ಯಾಪಾರಿಗಳು, ಮಾರಾಟಗಾರರು ಕಂಗಾಲಾಗಿದ್ದಾರೆ. ಸೀಸನ್ನಲ್ಲೇ ಬೆಲೆ ಪಾತಾಳಕ್ಕೆ ಕೋವಿಡ್ ಕರ್ಫ್ಯೂನಿಂದಾಗಿ ಜಾತ್ರೆ, ಶುಭ ಸಮಾರಂಭಗಳಿಗೂ ಕಡಿವಾಣ ಬಿದ್ದ ಕಾರಣ ಮಲ್ಲಿಗೆ ಧಾರಣೆ ಪಾತಾಳಕ್ಕೆ ಕುಸಿದಿದೆ. ಈ ಸಮಯದಲ್ಲಿ ಗರಿಷ್ಠ ದರ 1,000 ರೂ. ಆಸುಪಾಸಿನಲ್ಲಿ ಇದ್ದ ದರ, ಜಿಲ್ಲೆಯ ಮಾರುಕಟ್ಟೆ ಬಿಟ್ಟು ಬೇರೆ ಕಡೆಗೆ ರವಾನೆಯಾಗದೆ ದರದಲ್ಲಿ ಭಾರೀ ಕುಸಿತ ಕಂಡಿದೆ. ಈ ಬಾರಿ ಮಾರ್ಚ್ನಿಂದ ಎಪ್ರಿಲ್ 3ನೇ ವಾರದವರೆಗೆ ಮೌಡ್ಯವಿದ್ದು, ಸೀಸನ್ ಆರಂಭವಾಗುವ ವೇಳೆಗೆ ಕೋವಿಡ್ ಮಲ್ಲಿಗೆ ಬೆಳೆಗಾರರ ಆದಾಯದ ಮೂಲ ಕಸಿದುಕೊಂಡಿದೆ. ಹೂ ಕೊಯ್ದು ಕಟ್ಟಿ 1 ಚೆಂಡು ಹೂವಿಗೆ 20 ರೂ.ಗೆ ನೀಡಬೇಕಾಗಿದೆ.
ಕಳೆದ ವರ್ಷ ಲಾಕ್ಡೌನ್ ಹಂತದಲ್ಲಿ ಮಾ. 23ರಂದು ಅಟ್ಟೆಗೆ 50 ರೂ. ದಾಖ ಲಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ 2-3 ವಾರಗಳ ಕಾಲ ಮಲ್ಲಿಗೆ ಕಟ್ಟೆ ಬಂದ್ ಆಗಿ ವ್ಯಾಪಾರ ಸ್ಥಗಿತಗೊಂಡು ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು. ಬಳಿಕ ಚೇತರಿಸಿಕೊಂಡಿದ್ದ ಮಲ್ಲಿಗೆ ಮಾರುಕಟ್ಟೆ ನವರಾತ್ರಿ ಸೇರಿ ಸತತ 19 ದಿನಗಳ ಕಾಲ 1,250 ರೂ.ಗರಿಷ್ಠ ದರ ಮುಂದುವರಿದಿದ್ದು ದಾಖಲೆಯಾಗಿತ್ತು.
5 ಸಾವಿರಕ್ಕೂ ಹೆಚ್ಚು ಬೆಳೆಗಾರರು :
ತೋಟಗಾರಿಕೆ ಇಲಾಖೆಯ ಪ್ರಕಾರ ಉಡುಪಿ ಜಿಲ್ಲೆಯ ಕಾಪು ತಾಲೂಕಿನ 10 ಗ್ರಾಮಗಳಲ್ಲಿ ಸುಮಾರು 5,000ಕ್ಕೂ ಹೆಚ್ಚು ಮಲ್ಲಿಗೆ ಬೆಳೆಗಾರರಿದ್ದು, ಸುಮಾರು 103 ಹೆಕ್ಟೇರ್ ಪ್ರದೇಶದಲ್ಲಿ ಮಲ್ಲಿಗೆ ಬೆಳೆಯಲಾಗುತ್ತಿದೆ.
ಸಿಗದ ಪರಿಹಾರ, ಸಹಾಯಧನ :
ಮಲ್ಲಿಗೆ ಬೆಳೆಯನ್ನು ತೋಟಗಾರಿಕೆ ಬೆಳೆ ಎಂದು ಹೇಳಲಾಗುತ್ತಿದೆಯಾದರೂ ಹೆಚ್ಚಿನ ಕೃಷಿಕರು ಮಲ್ಲಿಗೆ ಬೆಳೆಯನ್ನು 5ರಿಂದ 10 ಸೆಂಟ್ಸ್ ಜಮೀನಿನಲ್ಲಿ ಬೆಳೆಯುತ್ತಿದ್ದು 1 ಎಕ್ರೆಗಿಂತ ಕಡಿಮೆ ಜಮೀನಿನಲ್ಲಿ ಕೃಷಿ ಮಾಡುವ ಬೆಳೆಗಾರರಿಗೆ ಸರಕಾರದಿಂದ ಸಬ್ಸಿಡಿ, ಕೃಷಿ ಸಲಕರಣೆಗಳಿಗೆ ಯಾವುದೇ ಸಹಾಯಧನ ಸಿಗುವುದಿಲ್ಲ.
ಕೋವಿಡ್ ದಿಂದಾಗಿ ಮಲ್ಲಿಗೆ ಬೆಳೆಗಾರ ರಿಗೆ ಸೀಸನ್ನ ಆದಾಯಕ್ಕೆ ಕತ್ತರಿ ಬಿದ್ದಿದೆ. ಕಳೆದ ವರ್ಷ ಮುಖ್ಯಮಂತ್ರಿಯವರ ಪರಿಹಾರ ಧನ ಆರ್ಟಿಸಿಯಲ್ಲಿ ಮಲ್ಲಿಗೆ ಕೃಷಿ ಎಂದು ನಮೂದಿಸಿದವರಿಗೆ ಮಾತ್ರ ದೊರೆತಿದ್ದು, ಶೇ. 99 ಫಲಾನುಭವಿಗಳಿಗೆ ದೊರೆತಿಲ್ಲ. ಸರಕಾರ ಗಿಡವೊಂದಕ್ಕೆ ಕನಿಷ್ಠ 500 ರೂ.ನಂತೆ ಪರಿಹಾರ ನೀಡಿ ಕೃಷಿಕರ ಹಿತ ಕಾಯಬೇಕಿದೆ. –ಬಂಟಕಲ್ಲು ರಾಮಕೃಷ್ಣ ಶರ್ಮ, ಅಧ್ಯಕ್ಷರು, ಮಲ್ಲಿಗೆ ಬೆಳೆಗಾರರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ