ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಿ: ರಾಮಚಂದ್ರ ಭಟ್
Team Udayavani, Jun 19, 2019, 5:54 AM IST
ಉಡುಪಿ: ಎಂಟು ವರ್ಷಗಳಿಂದ ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯು ಅರ್ಹ ಬಡ ಕುಟುಂಬಗಳಿಗೆ ಕುಟುಂಬ ಚೈತನ್ಯ ನಿಧಿ, ವಿದ್ಯಾಪೋಷಕ್ ನಿಧಿ, ಪ್ರತಿಭಾ ಪುರಸ್ಕಾರ ಮೊದಲಾದ ಸಮಾಜಮುಖೀ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿಯೊಬ್ಬರೂ ಇಂತಹ ಯೋಜನೆಗಳಲ್ಲಿ ಕೈಜೋಡಿಸಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಉಡುಪಿ ಅನಂತ ವೈದಿಕ ಕೇಂದ್ರದ ವೇ|ಮೂ| ಚೇಂಪಿ ರಾಮಚಂದ್ರ ಭಟ್ ಹೇಳಿದರು.
ಅವರು ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆ ವತಿಯಿಂದ ಮುದರಂಗಡಿಯ ಸಮರ್ಪಣಾ ಚಾರಿಟೆಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಅಜ್ಜರಕಾಡು ಪುರಭವನದಲ್ಲಿ ರವಿವಾರ ಜರಗಿದ ವಿದ್ಯಾಪೋಷಕ್ ವಿದ್ಯಾರ್ಥಿವೇತನ ವಿತರಣೆ, ಸಂಸ್ಕೃತ ಕಲಿತವರಿಗೆ ದಿ| ಪಡುಬಿದ್ರಿ ದೇವದಾಸ ಶರ್ಮ ದತ್ತಿನಿಧಿ ವಿದ್ಯಾರ್ಥಿವೇತನ ವಿತರಣೆ ಮತ್ತು ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿವೇತನ ಸಮಿತಿ ಅಧ್ಯಕ್ಷ ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್, ಮಣಿಪಾಲ್ ಫೈನಾನ್ಸ್ ಕಾರ್ಪೊರೇಶನ್ ಲಿ.ನ ಎಂಡಿ ಟಿ. ನಾರಾಯಣ ಪೈ, ಸಿಂಡಿಕೇಟ್ ಬ್ಯಾಂಕಿನ ಎಚ್ಆರ್ ವಿಭಾಗದ ಜಿಎಂ ಸತೀಶ್ ಕಾಮತ್ ಮಾತನಾಡಿದರು.
ಸಮರ್ಪಣಾ ಟ್ರಸ್ಟ್ನ ಕಾಂಜಾರಕಟ್ಟೆ ರತ್ನಾಕರ ಕಾಮತ್, ಲಕ್ಷ್ಮೀ ಆರ್. ಕಾಮತ್, ನಾರಾಯಣಿ ದೇವದಾಸ ಶರ್ಮ, ಕುಂಬಳೆ ಶ್ರೀಮತಿ ನಾಯಕ್, ಲೆಕ್ಕಪರಿಶೋಧಕ ಗೋಪಾಲಕೃಷ್ಣ ಭಟ್, ವಿದ್ಯಾಪೋಷಕ್ ಸಮಿತಿ ಸಂಚಾಲಕ ವಿಜಯ ಕುಮಾರ್ ಶೆಣೈ, ವೇದಿಕೆಯ ಸಂಚಾಲಕ ಆರ್. ವಿವೇಕಾನಂದ ಶೆಣೈ ಇದ್ದರು. ವೇದಿಕೆ ಅಧ್ಯಕ್ಷ ಜಿ. ಸತೀಶ್ ಹೆಗ್ಡೆ ಕೋಟ ಸ್ವಾಗತಿಸಿ, ವೆಂಕಟರಮಣ ಭಂಡಾರ್ಕರ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರ್ವಹಿಸಿದರು.
ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ
ದಿ| ಪಡುಬಿದ್ರಿ ದೇವದಾಸ ಶರ್ಮ ದತ್ತಿನಿಧಿಯಿಂದ ಕಾರ್ಕಳ ಭುವನೇಂದ್ರ ಪ್ರೌಢಶಾಲೆಯ ಎಸೆಸೆಲ್ಸಿ ಸಂಸ್ಕೃತ ಪರೀಕ್ಷೆಯಲ್ಲಿ ಶೇ. 100 ಸಾಧನೆಗೈದ 8 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಉಡುಪಿ, ದ.ಕ. ಜಿಲ್ಲೆಯ 304 ವಿದ್ಯಾರ್ಥಿಗಳಿಗೆ 26.80 ಲ.ರೂ. ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು. ಎಸೆಸೆಲ್ಸಿ, ಪಿಯುಸಿಯಲ್ಲಿ ರ್ಯಾಂಕ್ ವಿಜೇತರಾದ ಉಭಯ ಜಿಲ್ಲೆಗಳ 16 ಜಿಎಸ್ಬಿ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.