ಕಾಡೂರು-ಮೈರ್ಕೊಮೆ: ಹದಗೆಟ್ಟ ರಸ್ತೆ: ಗ್ರಾಮಸ್ಥರ ಮನವಿ
Team Udayavani, Jul 24, 2018, 6:00 AM IST
ಬ್ರಹ್ಮಾವರ: ಕಾಡೂರು ಮೈರ್ಕೊಮೆ ಸಂಪರ್ಕ ರಸ್ತೆ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಪ್ರಸಿದ್ಧ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, ಪ್ರತಿನಿತ್ಯ ಶಿವಮೊಗ್ಗ, ಕೊಪ್ಪ, ತೀರ್ಥಹಳ್ಳಿ, ಆಗುಂಬೆ, ಸೋಮೇಶ್ವರ, ಹೆಬ್ರಿ, ಕಾರ್ಕಳ ಮೊದಲಾದ ಊರುಗಳ ಸಾವಿರಾರು ಮಂದಿ ಸಂಚರಿಸುತ್ತಾರೆ.
ಅಪಘಾತಕ್ಕೆ ಆಹ್ವಾನ
ರಸ್ತೆಯಲ್ಲಿ ಹೊಂಡ ಗುಂಡಿಗಳಾದ ಪರಿಣಾಮ ಸವಾರರು ಒಂದು ಹೊಂಡ ತಪ್ಪಿಸಲು ಹೋಗಿ ಇನ್ನೊಂದು ಹೊಂಡಕ್ಕೆ ಬಿದ್ದು ಅಪಘಾತವಾದ ನಿದರ್ಶನಗಳಿವೆ. ಶಾಲೆ, ಫ್ಯಾಕ್ಟರಿಗಳ ಹತ್ತಾರು ವಾಹನಗಳು ಇದೇ ದುಸ್ಥಿತಿಯಲ್ಲಿ ಸಂಚರಿಸಬೇಕಾಗಿದೆ.
ಅಪಾಯಕಾರಿ ಮರ
ಅಲ್ಲದೆ ಈ ಮಾರ್ಗದಲ್ಲಿ ಹಲವು ಕಡೆ ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಒಣ ಮರಗಳ ಪಕ್ಕದಲ್ಲಿಯೇ ವಿದ್ಯುತ್ ತಂತಿಗಳು ಹಾದು ಹೋಗಿರುವುದರಿಂದ ಅಪಾಯವನ್ನು ಆಹ್ವಾನಿಸುತ್ತಿದೆ.
ಚರಂಡಿ ದುರಸ್ತಿ
ಚರಂಡಿ ಹೂಳು ತುಂಬಿದ ಪರಿಣಾಮ ಮಳೆ ನೀರು ರಸ್ತೆಯಲ್ಲೇ ಹರಿದು ಇನ್ನಷ್ಟು ಅವಾಂತರ ಸೃಷ್ಟಿಸುತ್ತಿದೆ. ಹೊಂಡಗಳಲ್ಲಿ ನೀರು ತುಂಬಿ ಆಳ ಅರಿಯದಂತಾಗಿದೆ. ಇದೇ ರೀತಿ ಶಿರೂರು ಮೂರುಕೈ ರಸ್ತೆಯೂ ಹದಗೆಟ್ಟಿದೆ. ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ತಕ್ಷಣ ಗಮನ ಹರಿಸಿ ಈ ರಸ್ತೆ ದುರಸ್ತಿಗೊಳಿಸುವಂತೆ ಗ್ರಾಮಸ್ಥರು, ಪ್ರಯಾಣಿಕರು ಮನವಿ ಮಾಡಿದ್ದಾರೆ.