ಬಸ್ ನಿಲ್ದಾಣದಿಂದ ಭಿಕ್ಷುಕರ ತೆರವು
Team Udayavani, Aug 4, 2018, 6:30 AM IST
ಉಡುಪಿ: ನಗರದ ಕಲ್ಸಂಕ ರಾಯಲ್ ಗಾರ್ಡನ್ ಬಳಿ ಇರುವ ಬಸ್ ನಿಲ್ದಾಣದಲ್ಲಿ ವಾಸ್ತವ್ಯವಿದ್ದ ಉತ್ತರ ಭಾರತ ಮೂಲದ ಅಲೆಮಾರಿ ಭಿಕ್ಷುಕರ ಪರಿವಾರವನ್ನು ಸ್ಥಳದಿಂದ ತೆರವುಗೊಳಿಸಲಾಯಿತು.
ಮಹಿಳೆಯರು, ಮಕ್ಕಳು ಸೇರಿದಂತೆ 30 ಮಂದಿಯಷ್ಟಿದ್ದ ಭಿಕ್ಷುಕರ ಪರಿವಾರವು ನಗರದಲ್ಲಿ ಭಿಕ್ಷಾಟನೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಬಯಲು ಶೌಚ ಮಾಡಿ ಪರಿಸರವನ್ನು ಹಾಳು ಮಾಡುತ್ತಿದ್ದರು. ಬಸ್ ನಿಲ್ದಾಣವನ್ನು ಇವರು ಆಕ್ರಮಿಸಿದ್ದರಿಂದ ಬಸ್ ಪ್ರಯಾಣಿಕರಿಗೂ ಕೂಡ ಅನನುಕೂಲವಾಗಿತ್ತಲ್ಲದೆ ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯುತ್ತಿದ್ದರು. ಇಲ್ಲಿನ ಸಮಸ್ಯೆ ಬಗ್ಗೆ ನಾಗರಿಕ ಹೋರಾಟ ಸಮಿತಿಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ಯಲ್ಲಿ ಸಮಿತಿ ಸದಸ್ಯರು ಹಿರಿಯ ನಾಗರಿಕ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕ, ಮಹಿಳಾ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆ ಮೂಲಕ ಭಿಕ್ಷುಕರ ಪರಿವಾರವನ್ನು ಬಸ್ ನಿಲ್ದಾಣದಿಂದ ತೆರವುಗೊಳಿಸಿದರು.