ಕಂಡ್ಲೂರು-ಸೌಕೂರು ರಸ್ತೆ: ದುರಸ್ತಿಗೆ ಗ್ರಾಮಸ್ಥರ ಆಗ್ರಹ
Team Udayavani, Jul 10, 2017, 3:50 AM IST
ಕುಂದಾಪುರ: ಕಾವ್ರಾಡಿ ಹಾಗೂ ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಪುರಾಣ ಪ್ರಸಿದ್ಧ ಸೌಕೂರು ದೇಗುಳಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾದ ರಸ್ತೆ ದುರಸ್ತಿ ಕಾಣದೇ ವರ್ಷಗಳೇ ಸಂದಿದೆ. ದುರಸ್ತಿ ಕಾಣದೇ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ, ಸಂಬಂಧಪಟ್ಟ ಜನಪ್ರತಿನಿಧಿ ಗಳಿಗೆ ಎಷ್ಟೇ ಮನವಿ ನೀಡಿದರೂ ವರ್ಷ ಗಳ ಸಮಸ್ಯೆಗೆ ಇನ್ನೂ ಮುಕ್ತಿಯಂತೂ ಈ ತನಕ ಸಿಕ್ಕಿಲ್ಲವಾದರೂ ಸ್ಥಳೀಯ ಗ್ರಾ.ಪಂ.ಹಾಗೂ ಸೌಕೂರು ದೇವಸ್ಥಾನ ಫ್ರೆಂಡ್ಸ್ ನವರು ಸ್ವಲ್ಪಮಟ್ಟಿ ಶ್ರಮದಾನದ ಮೂಲಕ ಹೊಂಡ ಮುಚ್ಚುವ ಕಾರ್ಯವನ್ನು ನಡೆಸಿದ್ದಾರೆ.
ರಸ್ತೆ ಕೆಸರುಮಯ
ಗ್ರಾಮೀಣ ಭಾಗದ ಕೆಲವು ರಸ್ತೆಗಳು ಹೇಗಿರುತ್ತದೆ ಎನ್ನುವುದಕ್ಕೆ ಸೌಕೂರು-ಕಂಡ್ಲೂರು ಸಂಪರ್ಕ ರಸ್ತೆಯೇ ಸಾಕ್ಷಿಯಾಗಿದೆ. ಸಂಪೂರ್ಣ ಹದಗೆಟ್ಟಿದ್ದು ಸುಗಮ ಸಂಚಾರಕ್ಕೆ ವಾಹನ ಸವಾರರು ಪರಿತಪಿಸುವಂತಾಗಿದೆ. ಕಂಡ್ಲೂರಿನಿಂದ ಸೌಕೂರಿಗೆ ಸಾಗುವ ಸುಮಾರು 1.5 ಕಿ.ಮೀ ಡಾಮರು ರಸ್ತೆ ಸಂಪೂರ್ಣ ಮಾಯವಾಗಿ ಕೆಸರು ಮಯವಾಗಿದೆ. ಮಳೆಗಾಳದಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಈ ಹಿಂದೆ ಬಸ್ಸು ಸಂಪರ್ಕವನ್ನು ಹೊಂದಿದ್ದು ರಸ್ತೆಯ ಅವ್ಯವಸ್ಥೆಯನ್ನು ಕಂಡು ಕಳೆದ ಒಂದೂವರೆ ವರ್ಷದಿಂದ ಬಸ್ಸುಗಳೂ ಸಹ ಬರುವುದನ್ನು ನಿಲ್ಲಿಸಿವೆ. ಇಲ್ಲಿನ ಜನರು ಮುಖ್ಯ ರಸ್ತೆಯನ್ನು ತಲುಪಬೇಕಾದರೆ ನಡೆದುಕೊಂಡೇ ಸಾಗಬೇಕಾಗಿದೆ.
ಈ ಭಾಗದ ಗ್ರಾಮಸ್ಥರು ಜನಪ್ರತಿನಿ ಗಳಿಗೆ ಹಲವು ಬಾರೀ ಮನವಿ ಮಾಡಿದರೂ ಯಾವುದೇ ಪ್ರಯೋಜನವೂ ಆಗಿಲ್ಲ. ದ್ವಿಚಕ್ರ ವಾಹನ ಸವಾರರಿಗೆ ಕಷ್ಟಕರವಾದರೆ ರಸ್ತೆ ಸಮಸ್ಯೆಯಿಂದ ಆಟೋ ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಇಷ್ಟು ಪಡುತ್ತಿಲ್ಲ.
ಗ್ರಾ.ಪಂ., ಟೆಂಪಲ್ ಫ್ರೆಂಡ್ಸ್ ಸ್ಪಂದನೆ
ದುರಸ್ತಿ ಬಗ್ಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಯಲ್ಲಿ ಗ್ರಾಮಸ್ಥರು ಜೂನ್ ತಿಂಗಳ ಕೊನೆಯಲ್ಲಿ ಪ್ರತಿಭಟನೆಯನ್ನು ನಡೆಸಿ ದ್ದರು. ಗ್ರಾಮಸ್ಥರ ಸಮಸ್ಯೆಯನ್ನು ಕಂಡು ಸ್ಥಳೀಯ ಕಾವ್ರಾಡಿ ಗ್ರಾ.ಪಂ. ಹೊಂಡ ಗುಂಡಿಗಳಿಗೆ ಜಲ್ಲಿ ಹುಡಿಗಳನ್ನು ಹಾಕುವ ಮೂಲಕ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ ಹಾಗೆಯೇ ಸೌಕೂರು ಟೆಂಪಲ್ ಫ್ರೆಂಡ್ಸ್ನವರು ರಸ್ತೆ ಹೊಂಡಗಳನ್ನು ಮುಚ್ಚುವಲ್ಲಿ ಶ್ರಮಿಸಿ ದ್ದರು. ಆದರೆ ಈ ಭಾಗದ ರಸ್ತೆ ಶಾಶ್ವತ ಕಾಂಕ್ರೀಟೀಕರಣ ಆದರೆ ಮಾತ್ರ ಪ್ರಯೋ ಜನ ವಿನಾ ತೇಪೆ ಕಾರ್ಯದಿಂದ ಪ್ರಯೋಜನ ಇಲ್ಲ ಎನ್ನುವುದು ಗ್ರಾಮಸ್ಥರ ವಾದ.
ರಸ್ತೆ ಹಾಳಾಗಿದ್ದು ಈ ತನಕ ಇಲಾಖೆಯಿಂದ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ವರ್ಷದಿಂದ ದುರಸ್ತಿ ಕಾಣದ ಈ ರಸ್ತೆಯನ್ನು ಶಾಶ್ವತವಾಗಿ ಕಾಂಕ್ರಿಟ್ ರಸ್ತೆಯನ್ನಾಗಿ ನಿರ್ಮಾಣ ಮಾಡಿ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಬೇಕಾಗಿದೆ. ಗ್ರಾ.ಪಂ. ವತಿಯಿಂದ ಹೊಂಡ ಮುಚ್ಚುವ ಕಾಮಗಾರಿಯನ್ನು ನಡೆಸ ಲಾಗಿದೆ. ಅಲ್ಲದೇ ರಸ್ತೆ ನಿರ್ಮಾಣದ ಬಗ್ಗೆ ಈಗಾಗಲೇ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿಯನ್ನು ನೀಡಲಾಗಿದೆ.
-ಪ್ರಕಾಶ್,
ಗ್ರಾ.ಪಂ. ಸದಸ್ಯ ಕಾವ್ರಾಡಿ
ಹಲವು ವರ್ಷಗಳಿಂದ ರಸ್ತೆ ಹದಗೆಟ್ಟಿದೆ. ಸಂಚಾರ ಅಸಾಧ್ಯ ವಾಗಿದೆ. ಜನಪ್ರತಿನಿಧಿಗಳು ಸ್ಪಂದಿಸಿ ರಸ್ತೆ ನಿರ್ಮಾಣಕ್ಕೆ ಮನ ಮಾಡಬೇಕು.
-ಸುರೇಶ್, ಸ್ಥಳೀಯರು