ಕಾರ್ಕಳ: ಇಂಟರ್ಲಾಕ್ ಬಳಸಿ ಮುಖ್ಯ ರಸ್ತೆಯ ಹೊಂಡ ಮುಚ್ಚಿದ ಸ್ಥಳೀಯರು
Team Udayavani, Sep 20, 2019, 5:53 AM IST
ಕಾರ್ಕಳ: ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳು ಹೊಂಡ ಗುಂಡಿಗಳಿಂದ ಆವೃತ್ತವಾಗಿದ್ದು, ದ್ವಿಚಕ್ರ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆ ಸರಿಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಂಬಂಧ ಪಟ್ಟವ ರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಕಾರ್ಕಳದ ಮೂರು ಮಾರ್ಗ ಎಂಬಲ್ಲಿ ನಿರ್ಮಾಣವಾದ ಬೃಹತ್ ಹೊಂಡವನ್ನು ಸ್ಥಳೀಯ ಯುವಕರು ಇಂಟರ್ಲಾಕ್ನಿಂದ ಮುಚ್ಚಿ , ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗುವ ಜತೆಗೆ ಪುರಸಭೆಯನ್ನು ಎಚ್ಚರಗೊಳ್ಳುವಂತೆ ಮಾಡಿದ್ದಾರೆ.
ವಿವೇಕಾನಂದ ಶೆಣೈ,ಸುನಿಲ್ ನಾಯಕ್, ವಿನೋದ್ ಕಿಣಿ, ವಿಘ್ನೇಶ್ ಶೆಣೈ, ವಿವೇಕ್ ನಾಯಕ್ ಅವರು ಸೆ. 18ರ ರಾತ್ರಿ ರಸ್ತೆಯ ಹೊಂಡದಲ್ಲಿ ಸಂಗ್ರಹವಾದ ನೀರು ತೆಗೆದು ಇಂಟರ್ಲಾಕ್ ಅಳವಡಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು.
ಪುರಸಭೆ ನಿರ್ಲಕ್ಷ್ಯ
ಕಾರ್ಕಳ ನಗರದ ರಸ್ತೆ ಹೊಂಡಗಳಿಂದಲೇ ತುಂಬಿ ಹೋಗಿದೆ. ಬಸ್ ಸಾಗುವ ವೇಳೆ ಫುಟ್ಪಾತ್ನಲ್ಲಿ ನಡೆಯುವ ಪಾದಚಾರಿಗಳ ಮೇಲೆ ಹೊಂಡದ ನೀರು ಎರಚುವುದು ಇಲ್ಲಿ ಸಾಮಾನ್ಯ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗೆ ರಸ್ತೆಯೇ ತೋಡಿನಂತೆ ಗೋಚರಿಸುತ್ತಿದೆ. ಹೀಗಾಗಿ ವಾಹನ ಸವಾರರಿಗೆ ಹೊಂಡ ಗುರುತಿಸುವುದು ಕಷ್ಟವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪುರಸಭೆಯೇ ನಿರ್ಲಕ್ಷ್ಯ ವಹಿಸಿದೆ ಎಂಬುದು ಸ್ಥಳೀಯರ ದೂರು.
ಅನಾಹುತವನ್ನು ಆಹ್ವಾನಿಸುತ್ತಿವೆ ಬೃಹತ್ ಹೊಂಡಗಳು ಅನಾಹುತವನ್ನು ಆಹ್ವಾನಿಸುವಂತಿತ್ತು. ಸಂಬಂಧಪಟ್ಟವರು ಈ ಕುರಿತು ಮೌನವಾಗಿರುವುದರಿಂದ ಸ್ಥಳೀಯ ಯುವಕರು ಒಟ್ಟು ಸೇರಿ ಇಂಟರ್ಲಾಕ್ ಅಳವಡಿಸುವ ಕಾರ್ಯ ಮಾಡುತ್ತಿದ್ದೇವೆ.
-ವಿವೇಕಾನಂದ ಶೆಣೈ,
ಪುರಸಭಾ ಮಾಜಿ ಸದಸ್ಯರು