ಕಾರ್ಕಳ: ಪ್ರಾಕೃತಿಕ ವಿಕೋಪ ಎದುರಿಸಲು ತಾಲೂಕು ಆಡಳಿತ ಸನ್ನದ್ಧ
ಜನರ ಸಮಸ್ಯೆ ಆಲಿಸಲು ಪ್ರತ್ಯೇಕ ಕಂಟ್ರೋಲ್ ರೂಂ ; ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ
Team Udayavani, Jun 4, 2019, 6:00 AM IST
ಕಾರ್ಕಳ:ತಾಲೂಕು ಆಡಳಿತವು ಪ್ರಾಕೃತಿಕ ವಿಕೋಪ ಎದುರಿಸಲು ಸರ್ವಸನ್ನದ್ಧವಾಗಿದ್ದು,ಈಗಾಗಲೇ ಎಲ್ಲ ರೀತಿಯ ಪೂರ್ವತಯಾರಿ ನಡೆಸಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ನಡೆಸಿ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಹಶೀಲ್ದಾರ್ ಸೂಚಿಸಿದ್ದು, ಈ ನಿಟ್ಟಿನಲ್ಲಿ ಸಕಲ ವ್ಯವಸ್ಥೆಗಳು ನಡೆದಿವೆ.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೇ| ಹರ್ಷ ಕೆ.ಬಿ. ಪ್ರಾಕೃತಿಕ ವಿಕೋಪ ತಡೆಗಟ್ಟುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಅವರು ವೀಡಿಯೋ ಕಾನ್ಫರೆನ್ಸ್ನಲ್ಲಿ ಬರ ಪರಿಸ್ಥಿತಿ ಮತ್ತು ಮಳೆ ಬಗ್ಗೆ ನೀಡಿರುವ ಸೂಚನೆಯನ್ನು ಎಲ್ಲ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾ.ಪಂ. ನೀರು ಸರಬರಾಜು ಮಾಡಿದ ಬಗ್ಗೆ ಕೂಡಲೇ ಬಿಲ್ ನೀಡಬೇಕು. ನೀರಿನ ನಿರ್ವಹಣೆ ಮತ್ತು ಪ್ರಾಕೃತಿಕ ವಿಕೋಪ ತಡೆಗಟ್ಟುವಲ್ಲಿ ಉದಾಸೀನ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಲು ಈಗಾಗಲೇ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಯವರಲ್ಲಿ ತಿಳಿಸಿದ್ದಾರೆ. ಯಾವುದೇ ಬಿಲ್ ಸಲ್ಲಿಸಲು ವಿಳಂಬ ಮಾಡಬಾರದು. ಎಲ್ಲ ಗ್ರಾಮಕರಣಿಕರು ಮತ್ತು ಪಿಡಿಒಗಳು ಕೂಡಲೇ ಕ್ರಮ ವಹಿಸಬೇಕು ಎಂದರು.
ಗ್ರಾಮ ಸಮಿತಿ
ಪಿಡಿಒ,ನೊಡೇಲ್ ಅ ಧಿಕಾರಿ ಸಮಿತಿಯು ಗ್ರಾಮ ಮಟ್ಟದ ಅನಾಹುತದ ಬಗ್ಗೆ ವರದಿ ಮಾಡಬೇಕು. ಇಲ್ಲಿ ಗ್ರಾಮಕರಣಿಕರು, ಗ್ರಾಮ ಸಹಾಯಕರು ಮತ್ತು ಪಿಡಿಒರವರ ಕರ್ತವ್ಯ ಮುಖ್ಯವಾಗಿದ್ದು, ವಾರದ 24 ಗಂಟೆಯೂ ಕರ್ತವ್ಯ ನಿರ್ವಹಿಸಬೇಕು. ಕಂದಾಯ ನಿರೀಕ್ಷಕರ ಸಹಿತ ಎಲ್ಲರ ಸಹಕಾರ ಬೇಕು. ಯಾರೂ ರಜೆ ಹಾಕಬಾರದು. ರಜೆ ಹಾಕಲೇಬೇಕಾದಲ್ಲಿ ಪೂರ್ವಾನುಮತಿ ಪಡೆದು ಬದಲಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆಯಲು ತತ್ಕ್ಷಣ ವ್ಯವಸ್ಥೆ ಮಾಡಬೇಕು. ಹಲವಾರು ಮುಂಜಾಗೃತ ಕ್ರಮದಿಂದ ನೆರೆ ಹಾವಳಿ ತಪ್ಪಿಸಬಹುದು. ಮರ ಬಿದ್ದ ಸಂದರ್ಭ ಅರಣ್ಯ ಇಲಾಖೆಯು ಮರಗಳನ್ನು ತೆರವುಗೊಳಿಸಬೇಕು. ಮಾಳ ಎಸ್.ಕೆ. ಬಾರ್ಡರ್ನಲ್ಲಿ ರಾತ್ರಿ ವೇಳೆ ರಸ್ತೆಗೆ ಮರಗಳು ಬೀಳುತ್ತಿದ್ದು, ಅರಣ್ಯ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಅಧಿಕಾರಿಗಳು ಸೂಚಿಸಿದರು.
ಮಲೇರಿಯಾ/ಡೆಂಗ್ಯೂ ಮುಂತಾದ ಸಾಂಕ್ರಾಮಿಕ ರೋಗಗಳ ತಡೆ ಬಗ್ಗೆ ಮುಂಜಾಗೃತವಾಗಿ ಔಷ ಧ ದಾಸ್ತಾನು ಇರಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸ ಲಾಯಿತು. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಶಾಲೆಗಳ ಸುತ್ತಮುತ್ತ ಕಲ್ಲು ಕೋರೆಗಳಿದ್ದಲ್ಲಿ ಮುಚ್ಚಲು ಕ್ರಮ ಕೈಗೊಳ್ಳುವ ಜತೆಗೆ, ಹೊಂಡಗಳ ಬಳಿ ಹೋಗಲು ಮಕ್ಕಳನ್ನು ಬಿಡಬಾರದು ಎಂದು ಎಲ್ಲಾ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಸೂಚಿಸಲು ಮತ್ತು ಸೊಳ್ಳೆಗಳಿಂದ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಆರೋಗ್ಯ ಇಲಾಖೆಯಿಂದ ಪುಸ್ತಕ ಪಡೆದು ಮಕ್ಕಳಿಗೆ ಮಾಹಿತಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸೂಚನೆ ನೀಡಲಾಯಿತು.ಭೂ ಕುಸಿತ, ಸಿಡಿಲು ಹಾನಿಯಿಂದ ಮಾತ್ರ ಜಾನುವಾರುಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಚರ್ಚಿಸಲಾಯಿತು. ಕಾಲುಬಾಯಿ ರೋಗ ಮತ್ತು ಮೇವಿನ ಬಗ್ಗೆ ಮುಂಜಾಗೃತ ಕ್ರಮ ಕೈಗೊಳ್ಳಲು ಪಶು ಸಂಗೋಪನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.
ಕ್ರಮ ವಹಿಸಲಾಗಿದೆ
ಪುರಸಭೆ ವ್ಯಾಪ್ತಿಯಲ್ಲಿ ಚರಂಡಿ ಹೂಳೆತ್ತಲಾಗಿದೆ. ತಗ್ಗು ಪ್ರದೇಶ, ನೀರು ಹರಿಯಲು ಕ್ರಮ ವಹಿಸಲಾಗಿದೆ. ಪುರಸಭಾ ಅಧಿಕಾರಿ/ಸಿಬಂದಿ ತಂಡ ರಚಿಸಲಾಗಿದೆ. ರಾತ್ರಿ ಹಗಲು ಪಾಳಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ ಎಂದು ಪುರಸಭೆ ಮುಖ್ಯಾ ಧಿಕಾರಿ ರೇಖಾ ಶೆಟ್ಟಿ ತಿಳಿಸಿದರು.
ಇನ್ನಾ ಗ್ರಾಮದಲ್ಲಿ ದೋಣಿ ಸಮಸ್ಯೆಯಿದೆ ಎಂದು ಕಂದಾಯ ನಿರೀಕ್ಷಕರು ತಿಳಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಮಾಹಿತಿ ನೀಡಲು ತಹಶೀಲ್ದಾರರು ಸೂಚಿಸಿದರು. ಮರ್ಣೆಯಲ್ಲಿ ಕಿಂಡಿ ಅಣೆಕಟ್ಟು ಸಮಸ್ಯೆಯಿದೆ ಎಂದು ಮರ್ಣೆ ಗ್ರಾಮಕರಣಿಕರು ತಿಳಿಸಿದರು. ಹಾನಿ ಸಂಭವಿಸಿದ್ದಲ್ಲಿ ಮಾಹಿತಿಯನ್ನು ಮೊದಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಕರಣಿಕರಿಗೆ ನೀಡಲು ತಾಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳು ತಿಳಿಸಿದರು.
ತುರ್ತು ವರದಿಗೆ ಸೂಚನೆ
ಅಗ್ನಿಶಾಮಕ ದಳವು ಎಲ್ಲ ಅವಶ್ಯ ಸಾಮಗ್ರಿ ಗಳೊಂದಿಗೆ ಸನ್ನದ್ಧರಾಗಿರಬೇಕು. 2 ವಾಹನ 16 ಮಂದಿ ಸಿಬಂದಿಯಿದ್ದು, 24xx7 ಸೇವೆ ನೀಡಲು ಸಿದ್ಧ ರಿರಬೇಕು. ಇನ್ನಾ ಗ್ರಾಮದಲ್ಲಿ ಕಳೆದ ವರ್ಷ ದೋಣಿ ಇಲ್ಲದೇ ಸಮಸ್ಯೆಯಾಗಿದೆ. ಸಣ್ಣ ದೋಣಿಗಳನ್ನು ಇರಿಸಿಕೊಳ್ಳಬೇಕು.
ಡಿಸಾಸ್ಟರ್ ಮ್ಯಾನೇಜ್ಮೆಂಟ್ ಪ್ಲಾನ್ ಬದಲಾವಣೆಯಿದ್ದರೆ ತಿಳಿಸುವಂತೆ ಸೂಚಿಸಲಾಯಿತು.ಕಂದಾಯ ಇಲಾಖೆ ಸನ್ನದ್ಧರಾಗಿರುವ ಜತೆಗೆ ಎಲ್ಲ ಇಲಾಖೆಗಳೊಂದಿಗೆ ಸಮನ್ವಯತೆ ಕಾಪಾಡಿಕೊಳ್ಳಬೇಕು. ಗಂಜಿ ಕೇಂದ್ರ ಅವಶ್ಯವಾಗಿ ಸ್ಥಾಪಿಸಬೇಕು. ಎಲ್ಲ ಗ್ರಾಮಕರಣಿಕರು, ಕಂದಾಯ ನಿರೀಕ್ಷಕರು ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ತುರ್ತು ವರದಿ ನೀಡುವಂತೆ ಸೂಚಿಸಲಾಯಿತು. ಬೆಳೆ ಹಾನಿ ಬಗ್ಗೆ ವರದಿ ನೀಡಲು ಕೃಷಿ ಇಲಾಖೆಗೆ ಸೂಚಿಸಲಾಯಿತು.
ಕಂಟ್ರೋಲ್ ರೂಂ
ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಸರಕಾರದಿಂದ ಈಗಾಗಲೇ 22 ಲಕ್ಷ ರೂ. ಬಿಡುಗಡೆಗೊಂಡಿದೆ. ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು 25 ಲಕ್ಷ ರೂ. ಬಿಡುಗಡೆಗೊಳಿಸಿದ್ದಾರೆ. ಜನರ ಸಮಸ್ಯೆ ಹೇಳಿಕೊಳ್ಳಲು ಪ್ರತ್ಯೇಕ ಕಂಟ್ರೋಲ್ ರೂಂ ತೆರೆಯಲಾಗಿದ್ದು, 24×7 ಸೇವೆ ನೀಡಲಿದೆ. ಸಮಸ್ಯೆ ಇದ್ದಲ್ಲಿ 9448624978 ನಂಬರ್ ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ