ಗಾಳಿ ಮಳೆಗೆ ಕಾರ್ಕಳ ತಾಲೂಕಿನ ವಿವಿಧೆಡೆ ಹಾನಿ
Team Udayavani, Jun 14, 2019, 6:10 AM IST
ಕಾರ್ಕಳ: ಎರಡು ದಿನಗಳಿಂದ ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಲವೆಡೆ ಹಾನಿಯಾಗಿದೆ.
ನಿಟ್ಟೆ ಗ್ರಾಮದ ಬೋರ್ಗಲ್ಗುಡ್ಡೆ ಅಲಿಯಬ್ಬ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣ, ಗೋಡೆ ಹಾನಿಗೀಡಾಗಿದೆ. ಮುಂಡ್ಕೂರು ಗ್ರಾಮದ ಕಳ್ಳಿಮಾರ್ ರಾಬರ್ಟ್ ಫೆರ್ನಾಂಡಿಸ್ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಮರ್ಣೆ ಗ್ರಾಮದ ವನಿತಾ ಎಂಬವರ ಮನೆಗೆ ಮರ ಬಿದ್ದು ತೊಂದರೆಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ನೂಟ್ನಿಂದ ಸೂಡ ಗ್ರಾಮದ ಗ್ಲೇಟಿಸ್ ಅಲ್ಮೇಡಾ ಅವರ ಮನೆಗೆ ಹೊಂದಿ ಕೊಂಡಿದ್ದ ಕೊಟ್ಟಿಗೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಚರಂಡಿ ಅವ್ಯವಸ್ಥೆ
ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೇ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಕಲ್ಲೊಟ್ಟೆ , ಬಂಡೀಮಠ, ಕಾಬೆಟ್ಟು ಪರಿಸರದಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ. ಚರಂಡಿ ಗಳಲ್ಲಿ ಕಸ, ತ್ಯಾಜ್ಯ, ಹೂಳು ತುಂಬಿಕೊಂಡಿರುವ ಕಾರಣ ನೀರು ಚರಂಡಿಯಲ್ಲಿ ಸರಾಗವಾಗಿ ಹರಿ ಯುತ್ತಿಲ್ಲ. ಮಳೆಗಾಲ ಆರಂಭಕ್ಕಿಂತ ಮುಂಚೆಯೇ ಪುರಸಭೆ ಎಚ್ಚೆತ್ತುಕೊಂಡು ಹೂಳೆತ್ತುವ ಕಾರ್ಯ ಮಾಡಬೇಕಿತ್ತು ಎನ್ನುವುದು ನಾಗರಿಕರ ಅಭಿಮತ.
ಗಾಂಧಿ ಮೈದಾನದ ಮರ ತೆರವುಗೊಳಿಸಿ
ಗಾಂಧಿ ಮೈದಾನದ ಬಳಿ ಬೃಹತ್ ಮರವೊಂದು ಬೀಳುವ ಸ್ಥಿತಿಯಲ್ಲಿದೆ. ಇದೇ ಪರಿಸರದಲ್ಲಿ ಎಚ್ಟಿ ವಿದ್ಯುತ್ ತಂತಿ ಹಾದು ಹೋಗಿದ್ದು, ಮೆಸ್ಕಾಂ ಇಲಾಖೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
10 ಲಕ್ಷ ರೂ. ಮಂಜೂರು
23 ವಾರ್ಡ್ಗಳ ಚರಂಡಿ ದುರಸ್ಥಿ ಕಾರ್ಯಕ್ಕೆ ಪುರಸಭೆ ಸಾಮಾನ್ಯ ನಿಧಿಯಿಂದ 10 ಲಕ್ಷ ರೂ. ಮಂಜೂರು ಮಾಡಿದೆ. 23 ವಾರ್ಡ್ಗಳಿಗೆ ಈ ಹಣ ಏನೇನೂ ಸಾಲದು ಎನ್ನುವುದು ಅನೇಕರ ಅಭಿಪ್ರಾಯ.
ಕೇಬಲ್ ಗುಂಡಿ ಅಪಾಯ
ಕಾರ್ಕಳ ನಗರದಲ್ಲಿ ಖಾಸಗಿ ದೂರಸಂಪರ್ಕ ಕಂಪೆನಿಯವರು ರಸ್ತೆ ಬದಿ ಗುಂಡಿ ತೋಡಿ ಕೇಬಲ್ ಅಳವಡಿಸಿದ್ದು, ಸಮರ್ಪಕವಾಗಿ ಗುಂಡಿಮುಚ್ಚದ ಕಾರಣ ಮತ್ತಷ್ಟು ಸಮಸ್ಯೆ ತಲೆ ದೋರುವಂತೆ ಆಗಿದೆ. ಬಂಗ್ಲೆಗುಡ್ಡೆ, ಕಾಬೆಟ್ಟು, ಪೆರ್ವಾಜೆ ಪರಿಸರದಲ್ಲಿ ಇಂತಹ ಸಮಸ್ಯೆಗಳು ಗೋಚರಿಸಿವೆೆ.
ಅತ್ತೂರು ಚರ್ಚ್ ಬಳಿ ಪರ್ಪಲ್ ಗುಡ್ಡೆಯನ್ನು ನಿರಂತರವಾಗಿ ಅಗೆಯುತ್ತಿರುವ ಪರಿಣಾಮ ಅಲ್ಲಿನ ಮಣ್ಣು ಕೊಚ್ಚಿಕೊಂಡು ಕೆಳಗಡೆ ಪರಿಸರದಲ್ಲಿರುವ ಗದ್ದೆ, ತೋಟದಲ್ಲಿ ತುಂಬಿಕೊಂಡಿದೆ. ಅತ್ತೂರು ಶಾಲೆ, ಅಂಗನವಾಡಿ ಕೇಂದ್ರದ ವಠಾರ ತುಂಬೆಲ್ಲ ಮಣ್ಣು ತುಂಬಿದೆ. ಹೀಗಾಗಿ ಅಂಗನವಾಡಿ ಕೇಂದ್ರಕ್ಕೆ 2 ದಿನ ರಜೆ ನೀಡಲಾಗಿದೆ. ಗುಡ್ಡದಲ್ಲಿ ಮಣ್ಣು ಅಗೆದು ಸಮತಟ್ಟುಗೊಳಿಸಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹಾಗೂ ಅಂಗನವಾಡಿ ಮಕ್ಕಳ ಹೆತ್ತವರು ತಮ್ಮ ಅಳಲು ತೋಡಿಕೊಂಡರು.