ಕಾರ್ಕಳ ತಾ| ಬಿಲ್ಲವ ಸಮಾವೇಶ: ಜನಸಾಗರ
Team Udayavani, Feb 11, 2019, 1:00 AM IST
ಕಾರ್ಕಳ: ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಕಾರ್ಕಳ ನಾರಾಯಣ ಗುರು ಸಭಾಭವನದಲ್ಲಿ ಫೆ. 10ರಂದು ತಾಲೂಕು ಬಿಲ್ಲವ ಸಮಾವೇಶ ಅತ್ಯಂತ ಅದ್ದೂರಿಯಾಗಿ ಜರಗಿತು.
ಸಭಾಂಗಣ ಸಂಪರ್ಕಿಸುವ ರಸ್ತೆಗಳ ಇಕ್ಕೆಲ ಬ್ಯಾನರ್, ಹಳದಿ ಬಣ್ಣದ ಬಂಟಿಂಗ್ಸ್, ಬಾವುಟಗಳಿಂದ ಶೃಂಗಾರ ಗೊಂಡಿತ್ತು. ನೂತನ ಸಭಾಂಗಣ ಮುಂಭಾಗ ಕೋಟಿ ಚೆನ್ನಯ ಸ್ವಾಗತ ಕಮಾನು, ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದ ಎದುರು ತೆಂಗಿನ ಗರಿಯ ಕಮಾನು ಆಕರ್ಷಕವಾಗಿತ್ತು.
ಬಿಲ್ಲವ ಸಮಾಜದ ಯುವಕರು ಹಳದಿ ಶಾಲು ಧರಿಸಿ ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದರು. ಎರಡು ಸಭಾಂಗಣ ತುಂಬೆಲ್ಲ ಬಿಲ್ಲವರು ಭರ್ತಿಯಾಗಿದ್ದು, ಜನಸ್ತೋಮ ನೆರೆದಿತ್ತು. ನೂತನ ನಾರಾಯಣ ಗುರು ವೇದಿಕೆಯಲ್ಲಿ ಸಮಾರಂಭ ನಡೆದಿದ್ದು, ಹಳೆ ವೇದಿಕೆ ಹಾಗೂ ಊಟದ ಸಭಾಂಗಣದಲ್ಲಿ ಬೃಹತ್ ಎಲ್ಸಿಡಿ ಪರದೆ ಅಳವಡಿಸಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಸ್ವಯಂ ಸೇವಕರು ಎಲ್ಲೆಡೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು, ವಾಹನ ಪಾರ್ಕಿಂಗ್ಗೆ ವಿಶಾಲ ಜಾಗ ಅಣಿಗೊಳಿಸಲಾಗಿತ್ತು. ವಿವಿಧ ಪುಸ್ತಕ ಮಳಿಗೆ, ನಾರಾಯಣ ಗುರು ಭಾವಚಿತ್ರ ಮಾರಾಟದ ಮಳಿಗೆಗಳು ಸಭಾಂಗಣದ ಮುಂಭಾಗದಲ್ಲಿತ್ತು.
ವಿದ್ಯಾರ್ಥಿ ವೇತನ
ಸಮಾಜದ ಸುಮಾರು 300 ಮಂದಿ ವಿದ್ಯಾರ್ಥಿಗಳಿಗೆ ರೂ. 6 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ವಿದ್ಯಾರ್ಥಿ ವೇತನವಾಗಿ ವಿತರಿಸಲಾಯಿತು.
ಸಮ್ಮಾನ
ತಾಲೂಕಿನ ಗರಡಿಗಳಲ್ಲಿ ಅರ್ಚಕ ರಾಗಿ ಸೇವೆ ಸಲ್ಲಿಸುತ್ತಿರುವ 5 ಮಂದಿ ಹಿರಿಯರನ್ನು ಗುರುತಿಸಿ ಸಮ್ಮಾನಿಸಲಾಯಿತು. ಶಾಸಕ ವಿ. ಸುನಿಲ್ ಕುಮಾರ್, ಜಿ.ಪಂ. ಸದಸ್ಯರಾದ ಉದಯ ಎಸ್. ಕೋಟ್ಯಾನ್, ದಿವ್ಯಾಶ್ರೀ ಜಿ. ಅಮೀನ್, ಜ್ಯೋತಿ ಹರೀಶ್, ತಾ.ಪಂ. ಸದಸ್ಯರಾದ ರಮೇಶ್ ಪೂಜಾರಿ, ಮಂಜುಳಾ, ಪ್ರವೀಣ್ ಕೋಟ್ಯಾನ್, ಪುಷ್ಪಾ ಪೂಜಾರಿ, ವಿದ್ಯಾ ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು.
ಪುರಸಭಾ ಸದಸ್ಯರಾದ ಪ್ರಶಾಂತ್ ಕೋಟ್ಯಾನ್, ಮೀನಾಕ್ಷಿ ಗಂಗಾಧರ್, ಮಮತಾ ಪೂಜಾರಿ, ಭಾರತೀ ಅಮೀನ್ ಸೇರಿದಂತೆ 8 ಮಂದಿ ಗ್ರಾಪಂ ಅಧ್ಯಕ್ಷರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.