ಅಂದು ಡಂಪಿಂಗ್ ಯಾರ್ಡ್; ಇಂದು ಪುರಸಭೆ ಆದಾಯದ ಮೂಲ!
Team Udayavani, Jan 26, 2019, 12:30 AM IST
ಕಾಪು: ಕಳೆದ ಮೂರು ದಶಕಗಳಿಂದ ಕಾಪು ಹೆದ್ದಾರಿ ಬದಿ ಬಿದ್ದ ರಾಶಿ ತ್ಯಾಜ್ಯ ಈಗ ಪುರಸಭೆ ಪಾಲಿಗೆ ಆದಾಯದ ಮೂಲವಾಗಿ ಪರಿವರ್ತನೆಗೊಂಡಿದೆ.
ರಾಷ್ಟ್ರೀಯ ಹೆದಾರಿ 66ರ ಸನಿಹದ ಕಾಪು ಹಳೇ ಮಾರಿಗುಡಿ, ಕಲ್ಕುಡ ದೈವಸ್ಥಾನ ಮತ್ತು ಮಹಾದೇವಿ ಪ್ರೌಢಶಾಲೆ ಹಾಗೂ ಜನವಸತಿ ಪ್ರದೇಶದ ಸನಿಹದಲ್ಲಿರುವ ಹಿಂದೂ ರುದ್ರಭೂಮಿಗೆ ತಾಗಿಕೊಂಡಂತಿರುವ ಜಮೀನಿನಲ್ಲಿದ್ದ ಡಂಪಿಂಗ್ ಯಾರ್ಡ್ನಲ್ಲಿ ತ್ಯಾಜ್ಯ ತುಂಬುತ್ತಾ ಹೋಗಿದ್ದು, ತ್ಯಾಜ್ಯ ರಾಶಿ ವಿಲೇವಾರಿ ಸವಾಲಾಗಿ ಪರಿಣಮಿಸಿತ್ತು.
1000 ಟನ್ ಕಸ
ಶ್ಮಶಾನಕ್ಕೆ ತಾಗಿಕೊಂಡಿದ್ದ 40 ಸೆಂಟ್ಸ್ನಲ್ಲಿ ತ್ಯಾಜ್ಯ ಶೇಖರಣೆಯಾಗುತ್ತಿತ್ತೇ ವಿನಾ ವಿಲೇವಾರಿಯಾಗುತ್ತಿರಲಿಲ್ಲ. ಈ ಕಾರಣ ಸುತ್ತ ಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದು, ಶ್ಮಶಾನಕ್ಕೆ ಹೆಣ ಸುಡಲು ಕೂಡಾ ಬರಲೂ ಜಾಗವಿಲ್ಲದೇ ಜನರು ಪರಾಡುವಂತಾಗಿತ್ತು. 2017ರ ಅಕ್ಟೋಬರ್ ಬಳಿಕ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಬಂದಿದ್ದ ರಾಯಪ್ಪ ಅವರು ಸ್ವತ್ಛತೆಗೆ ಪ್ರಥಮ ಆದ್ಯತೆ ನೀಡಿದ್ದು, ಕಸ ವಿಲೇವಾರಿಗೆ ಯತ್ನಿಸಿದ್ದಾರೆ. ಬಳಿಕ ಡಂಪಿಂಗ್ ಯಾರ್ಡ್ ಪ್ರದೇಶವನ್ನು ಸುಂದರ ಗಾರ್ಡನ್ ಆಗಿ ರೂಪಿಸಲು ಶ್ರಮಿಸಲಾಗಿದೆ.
ಕಸ ವಿಲೇವಾರಿಗೆ ವಾಹನ
ಪುರಸಭೆ ವ್ಯಾಪ್ತಿಯ ಕಸ ತ್ಯಾಜ್ಯ ಸಂಗ್ರಹಣೆಗಾಗಿ ಸಾರ್ವಜನಿಕ ಮೂಲದಿಂದ 3 ವಾಹನಗಳನ್ನು ದೇಣಿಗೆಯಾಗಿ ಪಡೆದು ತ್ಯಾಜ್ಯ ಸಂಗ್ರಹಣೆಗೆ ವಿಶೇಷ ಆದ್ಯತೆ ನೀಡಲಾಯಿತು. ಕಟ್ಟಡಗಳಲ್ಲಿ, ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿ ಕಸ ಮತ್ತು ಒಣ ಕಸಗಳನ್ನಾಗಿ ವಿಂಗಡಿಸಿ, ವಾಹನಗಳಿಗೆ ನೀಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜನರಿಗೆ ಪ್ರತ್ಯೇಕ ಬಕೆಟ್ಗಳನ್ನು ನೀಡಿ ವಿಲೇವಾರಿಗೆ ಸುಲಭವಾಗುವಂತೆ ಮಾಡಲಾಯಿತು.
ಒಣ ಕಸ ಗೊಬ್ಬರಕ್ಕೆ – ಹಸಿ ಕಸ ಗೋಶಾಲೆಗೆ
ತ್ಯಾಜ್ಯ ಎನ್ನುವುದು ಕಸವಲ್ಲ, ಸಂಪನ್ಮೂಲ ಎಂಬ ಘೋಷಣೆಯೊಂದಿಗೆ ಜನರಿಂದ ಸಂಗ್ರಹಿಸಿದ ಕಸಗಳ ಪೈಕಿ ಹಸಿ ಕಸವನ್ನು ರೈತರ ಕೃಷಿ ಭೂಮಿಗೆ ನೀಡಲಾಗುತ್ತಿದ್ದು, ಒಣ ಕಸಗಳನ್ನು 17 ವಿಧಗಳಾಗಿ ವಿಂಗಡಿಸಿ ಮರು ಬಳಕೆಗಾಗಿ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ಕಾಪು ಪುರಸಭಾ ವ್ಯಾಪ್ತಿಯ ಮಾರ್ಕೆಟ್, ಅಂಗಡಿಗಳಿಂದ ಸಂಗ್ರಹಿಸಲಾಗುವ ತ್ಯಾಜ್ಯಗಳ ಪೈಕಿ ತಾಜಾ ತರಕಾರಿಗಳನ್ನು ಸಂಗ್ರಹಿಸಿ ಕಾಪುವಿನ ಗೋ ಶಾಲೆಗೆ ನೀಡಲಾಗುತ್ತಿದೆ. ಮದುವೆ ಹಾಲ್, ಕೋಲ, ಜಾತ್ರೆ, ಉತ್ಸವ ನಡೆಯುವ ಪರಿಸರದಲ್ಲಿ ಉತ್ಪತ್ತಿಯಾಗುವ ಆಹಾರ ಪದಾರ್ಥಗಳನ್ನು ಅದೇ ದಿನ ಮಧ್ಯಾಹ್ನದೊಳಗೆ ಸಂಗ್ರಹಿಸಿ, ಅದನ್ನು ಕೂಡಾ ಉಪಯೋಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ವಾರ್ಷಿಕ 8 ಲಕ್ಷ ರೂ. ಆದಾಯ
ಕಾಪು ಡಂಪಿಂಗ್ ಯಾರ್ಡ್ಗೆ ಪುರಸಭೆ ವಾಹನಗಳ ಮೂಲಕ ಪ್ರತೀ ದಿನ 10 ಟನ್ನಷ್ಟು ಕಸ ಬರುತ್ತಿದೆ. ಅದರಲ್ಲಿ 4 ಟನ್ ಕಸವನ್ನು ಕಾಂಪೋಸ್ಟ್ ಗೊಬ್ಬರಕ್ಕಾಗಿ, 3.5 ಟನ್ ಕಸವನ್ನು ಮರು ಬಳಕೆಗೆ ವಿಂಗಡಿಸಿ ನೀಡುತ್ತಿದ್ದೇವೆ. ಮತ್ತು 1 ಟನ್ ಹಸಿ ಕಸವನ್ನು ಗೋ ಶಾಲೆಗೆ ನೀಡುತ್ತಿದ್ದೇವೆ. ಇದರಿಂದ ಪುರಸಭೆಗೆ ಒಂದು ವರ್ಷಕ್ಕೆ 8 ಲಕ್ಷ ರೂ. ಹೆಚ್ಚುವರಿ ಆದಾಯ ಬರುತ್ತಿದೆ. ಆದಾಯವನ್ನು 26 ಮಂದಿ ಪೌರ ಕಾರ್ಮಿಕರ ಸಂಬಳ, ತಿಂಡಿ ಸಹಿತ ಅವರಿಗೆ ಬೇಕಾದ ಪರಿಕರಗಳ ಖರೀದಿಗೆ ಬಳಕೆಯಾಗುತ್ತಿದೆ.
ಮಾದರಿ ಕಾರ್ಯ
ಸರಕಾರಿ ಅಧಿಕಾರಿಗಳಲ್ಲಿ ಇಚ್ಛಾ ಶಕ್ತಿ ಎನ್ನುವುದಿದ್ದರೆ ಯಾವುದೇ ಕಾರ್ಯವೂ ಸುಸೂತ್ರವಾಗಿ ನಡೆಯುತ್ತದೆ. ದಶಕಗಳಿಂದ ಜನರನ್ನು ಮತ್ತು ಪರಿಸರವನ್ನು ಕಾಡುವ ಯಾವುದೇ ಜಟಿಲ ಸಮಸ್ಯೆಗಳೂ ಕೂಡಾ ಎಳ್ಳಷ್ಟೂ ಕೂಡಾ ಕಿರಿಕಿರಿಯಿಲ್ಲದೇ ಪರಿಹಾರ ಕಾಣಲು ಸಾಧ್ಯವಿದೆ. ಸ್ವತ್ಛ ಕಾಪು – ಸುಂದರ ಕಾಪು ನಿರ್ಮಾಣದ ಅವರ ಯೋಜನೆಗೆ ಜನರಿಂದಲೂ ಉತ್ತಮ ಸಹಕಾರದ ಅಗತ್ಯತೆಯಿದೆ.
– ಅರುಣ್ ಶೆಟ್ಟಿ ಪಾದೂರು, ಸದಸ್ಯರು, ಕಾಪು ಪುರಸಭೆ
ಹಸಿರು ಶಿಷ್ಟಾಚಾರ ಪಾಲನೆ
ಅನಾವಶ್ಯಕ ತ್ಯಾಜ್ಯ ಕಡಿಮೆಗೆ ಜಾಗೃತಿಯೊಂದಿಗೆ ಸಮಾರಂಭದಲ್ಲಿ ಹಸಿರು ಶಿಷ್ಟಾಚಾರವನ್ನು ಅನುಸರಿಸಲು ಮಾರ್ಗದರ್ಶನ ನೀಡಲಾಗುತ್ತಿದೆ. ಇದರಿಂದ ಶೇ. 50ರಷ್ಟು ಅನಾವಶ್ಯಕ ತ್ಯಾಜ್ಯ ಉತ್ಪಾದಿಸುವುದನ್ನು ಕಡಿಮೆ ಮಾಡಬಹುದು. ಎಲ್ಲರೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.
-ರಾಯಪ್ಪ , ಮುಖ್ಯಾಧಿಕಾರಿ, ಕಾಪು ಪುರಸಭೆ
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ