ಕಾವ್ಯಾ ಸಾವು: ಎನ್ಎಸ್ಯುಐ ಪ್ರತಿಭಟನೆ
Team Udayavani, Aug 12, 2017, 7:20 AM IST
ಉಡುಪಿ: ಮೂಡಬಿದಿರೆ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿ ಸಂಘಟನೆ ಎನ್ಎಸ್ಯುಐ ವತಿಯಿಂದ ಉಡುಪಿಯ ಕ್ಲಾಕ್ ಟವರ್ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಮಂಗಳೂರು ವಿವಿ ಸೆನೆಟ್ ಸದಸ್ಯ, ಕಾಂಗ್ರೆಸ್ನ ಯುವಮುಖಂಡ ಪಿ. ಅಮೃತ್ ಶೆಣೈ ಮಾತನಾಡಿ, ಈ ಹೋರಾಟ ಯಾವುದೇ ಸಂಸ್ಥೆ, ವ್ಯಕ್ತಿಯ ವಿರುದ್ಧವಲ್ಲ. ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಸಿಗಬೇಕು ಎನ್ನುವ ಆಶಯದಲ್ಲಿ ಹೋರಾಟ ನಡೆಸಲಾಗುತ್ತಿದೆ. ಸಮರ್ಪಕ ತನಿಖೆಯಿಂದ ಸಾವಿನ ಸುತ್ತ ಇರುವ ಸಂಶಯಗಳು ಹೊರಬರಬೇಕಿದೆ. ನೈಜಾಂಶ ಎಲ್ಲರಿಗೂ ತಿಳಿಯಬೇಕು.
ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸುರಕ್ಷತೆಯ ಕ್ರಮಕ್ಕೆ ಗಂಭೀರ ಚರ್ಚೆಯಾಗಬೇಕು ಎಂದು ಹೇಳಿದ ಅವರು, ಸಂಸದೆ ಶೋಭಾ ಕರಂದ್ಲಾಜೆಯವರು ಬಂಟ್ವಾಳದಲ್ಲಾದ ಘಟನೆಯಲ್ಲಿ ಭಾರಿ ಹೋರಾಟ, ಹೇಳಿಕೆ ನೀಡಿದ್ದರು. ಆದರೆ ಇಲ್ಲಿ ಓರ್ವ ವಿದ್ಯಾರ್ಥಿನಿಯ ಅಸಹಜ ಸಾವಿನ ಬಗ್ಗೆ ಏನೂ ಹೇಳಿಕೆ ಕೊಟ್ಟಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡ, ನಗರಸಭೆ ಸದಸ್ಯ ಕೆ. ಜನಾರ್ದನ ಭಂಡಾರ್ಕರ್, ಎನ್ಎಸ್ಯುಐನ ಕ್ರಿಸ್ಟನ್ ಅಲ್ಮೇಡ, ಮಾರ್ಕ್ ಸಿಕ್ವೇರ,ಮಹಮ್ಮದ್ ವಾಲಿ, ಲೂವಿಟಾ, ಪವನ್, ಪ್ರಜ್ವಲ್ ಕುಂದರ್, ಕ್ಯಾಲ್ವಿನ್ ಡಿ’ಸಿಲ್ವ, ಕಾರ್ತಿಕ್ ಕೆ., ಪ್ರಿನ್ಸ್ ಲೀ ಲೂವಿಸ್ ಮತ್ತಿತರರು ಪಾಲ್ಗೊಂಡಿದ್ದರು.