ಹೈನುಗಾರಿಕೆ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಚಾಲನೆ ನೀಡಿದ ಹಿರಿಮೆ
ಕೊಡವೂರು ಹಾಲು ಉತ್ಪಾದಕರ ಸಹಕಾರಿ ಸಂಘ
Team Udayavani, Feb 13, 2020, 5:24 AM IST
ಹೈನುಗಾರರನ್ನು ಒಗ್ಗೂಡಿಸುವ ಯೋಜನೆಯಿಟ್ಟುಕೊಂಡು ಆರಂಭವಾದ ಕೊಡವೂರು ಹಾಲು ಉತ್ಪಾದಕರ ಸಹಕಾರಿ ಸಂಘ ಆನಂತರದಲ್ಲಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿತು. ಹೈನುಗಾರಿಕೆ ಅಭಿವೃದ್ಧಿಯೇ ಸಂಘದ ಮೂಲ ಮಂತ್ರ
ಮಲ್ಪೆ: ಹೈನುಗಾರರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಹುಟ್ಟಿಕೊಂಡ ಕೊಡವೂರು ಹಾಲು ಉತ್ಪಾದಕರ ಸಂಘದ ಸಾಧನೆಯ ಹಾದಿ ದೊಡ್ಡದು. ಕೆನರಾ ಮಿಲ್ಕ್ ಯೂನಿಯನ್ ಆರಂಭವಾದ ಸಮಯದಲ್ಲೇ 1974, ಆ.24ರಂದು ಸಂಘ ಸ್ಥಾಪನೆಯಾಯಿತು. ಪಿ.ವಿ. ರಾವ್ ಅವರ ಕಟ್ಟಡದಲ್ಲಿ 64 ಸದಸ್ಯರು ಸೇರಿ ಸಂಘ ಸ್ಥಾಪನೆ ಮಾಡಿದ್ದು 1040 ರೂ. ಪಾಲು ಬಂಡವಾಳ ಹೂಡಲಾಗಿತ್ತು. ಆಗ 50ರಿಂದ 60 ಲೀ. ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ಸರಾಬರಾಜು ಮಾಡಲಾಗುತ್ತಿತ್ತು.
ಹೈನುಗಾರರನ್ನು ಒಗ್ಗೂಡಿಸಿದ ಕೀರ್ತಿ
ಕೆನರಾ ಮಿಲ್ಕ್ ಇರುವಾಗ ಆಗಿನ ಅಧ್ಯಕ್ಷರಾದ ಕೆ. ಟಿ. ಪೂಜಾರಿ, ಕಾರ್ಯದರ್ಶಿ ರಾಮ ಶೇರಿಗಾರ್ಅವರು ಹಳ್ಳಿ ಹಳ್ಳಿಗೆ ಹೋಗಿ ಹೈನುಗಾರರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಕೆ. ರವಿರಾಜ್ ಹೆಗ್ಡೆ ಅವರು ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಅವರ ಪ್ರಯತ್ನ, ಕಾರ್ಯನಿರ್ವಹಣಾಧಿಕಾರಿ ರಾಮ ಶೇರಿಗಾರ ಸಹಕಾರದಿಂದ 2004ರಲ್ಲಿ ಸ್ವಂತ ಕಟ್ಟಡವನ್ನು ಹೊಂದಿತು.
ಇತರ ಸಂಘಕ್ಕೆ ತರಬೇತಿ
ಶಿಸ್ತು ಬದ್ಧವಾಗಿ ಲೆಕ್ಕಪತ್ರಗಳನ್ನು ಇಡುವುದು, ಹಾಲು ಖರೀದಿ ಮಾದರಿಯನ್ನು ಇತರ ಸಂಘಗಳು ಕೊಡವೂರು ಸಂಘವನ್ನು ನೋಡಿ ಕಲಿತುಕೊಂಡಿದ್ದು, ಇತರರಿಗೆ ಮಾದರಿಯಾಗಿದೆ. ಕಳೆದ 15ವರ್ಷಗಳಿಂದ ಸಂಘದ ಸದಸ್ಯರ ಎಲ್ಲ ಜಾನುವಾರುಗಳಿಗೆ ವಿಮೆ ಮಾಡಿಸಲಾಗಿದೆ. ಜಾನುವಾರುಗಳು ಮರಣ ಹೊಂದಿದರೆ ವಿಮಾ ಮೊತ್ತವನ್ನು ತರಿಸಿಕೊಡಲಾಗುತ್ತಿದೆ. ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ನಿಂದ ನೆರವು, ಮಾತ್ರವಲ್ಲದೆ ಸಂಘದಿಂದಲೂ ಪರಿಹಾರವನ್ನು ನೀಡಲಾಗುತ್ತಿದೆ. ಪ್ರತಿವರ್ಷ ಉತ್ತಮ ಹಾಲು ಮತ್ತು ಅಧಿಕ ಹಾಲು ನೀಡಿದ ರೈತರಿಗೆ ಪ್ರಶಸ್ತಿ ಹಾಗೂ ಉಳಿದವರಿಗೂ ಪ್ರೋತ್ಸಾಹ ಬಹುಮಾನ ನೀಡುತ್ತಿದೆ.
ಉಪಕೇಂದ್ರಗಳು
ಹಾಲು ಉತ್ಪಾದಕರಿಗೆ ಅನುಕೂಲವಾಗಲೆಂದು ತೆಂಕನಿಡಿಯೂರು, ಪಂದುಬೆಟ್ಟುವಿನಲ್ಲಿ ಸಂಘದ ಉಪಕೇಂದ್ರವನ್ನು ತೆರೆಯಲಾಗಿದೆ. ಸುಮಾರು 600ಕ್ಕೂ ಹೆಚ್ಚು ಮಂದಿ ಈ ಭಾಗದಲ್ಲಿ ಹೈನುಗಾರಿಕೆ ನಡೆಸುತಿದ್ದು 2 ಗ್ರಾಮ ಸೇರಿ 1000ಕ್ಕೂ ಮಿಕ್ಕಿ ಜಾನುವಾರುಗಳಿವೆ.
ಪ್ರಸ್ತುತ ಸಂಘದಲ್ಲಿ ಸುಮಾರು 243 ಸದಸ್ಯರಿದ್ದಾರೆ. ಪ್ರತಿ ದಿನ 820 ಲೀ. ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡಲಾಗುತ್ತಿದ್ದು, ಗ್ರಾಮೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದೆ. ನಗರಸಭೆ ವ್ಯಾಪ್ತಿಯಲ್ಲಿದ್ದರೂ ಹೆಚ್ಚು ಹಾಲು ಉತ್ಪಾದನೆಯ ಮೂಲಕ ಗ್ರಾಮಾಂತರ ಪ್ರದೇಶದ ಸಂಘವನ್ನು ಮೀರಿಸಿದೆ. ಪ್ರಸ್ತುತ ಕೆ. ಟಿ. ಪ್ರಸಾದ್ ಅಧ್ಯಕ್ಷರಾಗಿ, ಸಂತೋಷ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು
ಸಂಘಕ್ಕೆ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ 7 ಬಾರಿ ಅತ್ಯುತ್ತಮ ಸಂಘ ಪ್ರಶಸ್ತಿ, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕಿನಿಂದ 1 ಬಾರಿ, ಉಡುಪಿ ಜಿಲ್ಲೆಯಲ್ಲಿ 3 ಬಾರಿ ಉತ್ತಮ ಸಂಘ, ತಾಲೂಕಿನಲ್ಲಿ 3 ಬಾರಿ ಉತ್ತಮ ಸಂಘ, ಉಡುಪಿ ಜಿಲ್ಲೆ, ಮಂಗಳೂರು ಜಿಲ್ಲೆ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ಪಡೆದಿದೆ. ಹೈನುಗಾರರಾದ ಶೇಖರ್ ಶೆಟ್ಟಿ, ಗೋಪಾಲ ಶೆಟ್ಟಿ, ಸಂತ ಮಥಾಯಸ್ ಅವರಿಗೆ ಸಂಘದಿಂದ ಪ್ರಶಸ್ತಿ ನೀಡಲಾಗಿದೆ.
ಈ ಹಿಂದೆ 22ವರ್ಷಕ್ಕೂ ಹೆಚ್ಚುಕಾಲ ಅಧ್ಯಕ್ಷರಾಗಿದ್ದ ಕೆ. ರವಿರಾಜ್ ಹೆಗ್ಡೆ ಅವರು ನೀಡಿದ ಮಾರ್ಗದರ್ಶನದಿಂದಾಗಿ ಸಂಘವು ಸಾಕಷ್ಟು ಬೆಳವಣಿಗೆಗೆ ಕಂಡಿದೆ. ಮುಂದೆಯೂ ಹಲವಾರು ಅಭಿವೃದ್ಧಿ ಬಗ್ಗೆ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಸಂಘದ ಲಾಭಾಂಶದಲ್ಲಿ ಸಿಂಹಪಾಲನ್ನು ಉತ್ಪಾದಕರಿಗೆ ವರ್ಗಾಯಿಸಲಾಗುತ್ತಿದೆ.
-ಕೆ. ಟಿ. ಪ್ರಸಾದ್, ಅಧ್ಯಕ್ಷರು
ಅಧ್ಯಕ್ಷರು
ಪಿ. ವಿ. ರಾವ್, ಕೆ. ಟಿ. ಪೂಜಾರಿ, ಚಂದ್ರಶೇಖರ್ ರಾವ್, ವಾಸು ಶೆಟ್ಟಿ, ಕೆ. ರವಿರಾಜ ಹೆಗ್ಡೆ, ಪ್ರಸ್ತುತ ಕೆ. ಟಿ. ಪ್ರಸಾದ್
ಕಾರ್ಯದರ್ಶಿ
46 ವರ್ಷದಿಂದ ಕಾರ್ಯದರ್ಶಿಯಾಗಿ ರಾಮ ಶೇರಿಗಾರ್, ಪ್ರಸ್ತುತ ಸಂತೋಷ್.
- ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ