ಬೈಂದೂರು:ಇನ್ನೂ ಆರಂಭವಾಗಿಲ್ಲ ನರ್ಮ್ ಬಸ್
Team Udayavani, Jul 30, 2018, 11:56 AM IST
ಬೈಂದೂರು: ಸರಕಾರಿ ಬಸ್ ಸೇವೆಯನ್ನು ನಂಬಿ ಬಸ್ ಪಾಸ್ ಪಡೆದುಕೊಂಡಿದ್ದ ಇಲ್ಲಿನ ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಶಾಲೆಗಳು ಆರಂಭವಾಗಿ ತಿಂಗಳು ಎರಡು ಸಂದರೂ ಈಗಲೂ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಬೈಂದೂರು ಪರಿಸರದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಗ್ರಾಮಾಂತರ ಸಾರಿಗೆ ನರ್ಮ್ ಬಸ್ಗಳ ಸಂಚಾರ ಆರಂಭಗೊಂಡಿತ್ತು. ಆದರೆ ಖಾಸಗಿ ಮಾಲಕರು, ಆರ್ಟಿಒ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಈ ವರ್ಷ ನರ್ಮ್ ಬಸ್ಗಳು ಸಂಚರಿಸುತ್ತಿಲ್ಲ.
ಸರಕಾರಿ ಬಸ್ಗಳು ಸೂಕ್ತ ಪರವಾನಿಗೆ ಇಲ್ಲದೆ ಸಂಚರಿಸುತ್ತಿವೆ ಎಂದು ಖಾಸಗಿ ಬಸ್ ಮಾಲಕರು ಲೋಕಾಯುಕ್ತ ಕೋರ್ಟ್ಗೆ ದೂರು ನೀಡಿದ್ದರು. ಇದರ ಸಮಗ್ರ ವರದಿ ಸಲ್ಲಿಸಬೇಕಿರುವುದರಿಂದ ಕೆಎಸ್ಆರ್ಟಿಸಿ ಅಧಿಕಾರಿಗಳು ನರ್ಮ್ ಬಸ್ ಸಂಚಾರ ಸ್ಥಗಿತಗೊಳಿಸಿದ್ದರು. ಲೋಕಾಯುಕ್ತ ಕೋರ್ಟ್ನಲ್ಲಿ ಜುಲೈ 20ರಂದು ವಿಚಾರಣೆ ನಡೆದಿದ್ದು, ತೀರ್ಪು ಕಾದಿರಿಸಲಾಗಿದೆ. ಸರಕಾರಿ ಬಸ್ ಸ್ಥಗಿತ ಕುರಿತು ಉದಯವಾಣಿ ಜೂ. 6ರಂದು ಸ್ಥಳೀಯ ಆವೃತ್ತಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಬೈಂದೂರಿನಲ್ಲಿ ವಿದ್ಯಾರ್ಥಿಗಳು, ಪೋಷಕರು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಜಾಥಾ ಹಾಗೂ ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕರು ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಸೂಚಿಸಿದ್ದರು. ಆದರೆ ಗೊಂದಲ ಇನ್ನೂ ಬಗೆಹರಿದಿಲ್ಲ.
ಆರ್ಟಿಒ ಪರವಾನಿಗೆ
ಪ್ರಾರಂಭದಲ್ಲಿ ನರ್ಮ್ ಬಸ್ಗಳಿಗೆ ಆರ್ಟಿಒ ಪರವಾನಿಗೆ ನೀಡಿರಲಿಲ್ಲ. ಪ್ರಕರಣ ಲೋಕಾಯುಕ್ತ ಕೋರ್ಟ್ ಮೆಟ್ಟಿಲೇರಿದ ಬಳಿಕ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆರ್ಟಿಒ ಕ್ರಮದ ಕುರಿತು ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪರವಾನಿಗೆ ಕೋರಿ ಕೆಎಸ್ಆರ್ಟಿಸಿ ಅಧಿಕಾರಿಗಳು ಆರ್ಟಿಒಗೆ ಅರ್ಜಿ ಸಲ್ಲಿಸಿದ್ದು, ಆರ್ಟಿಒ ಅನುಮತಿ ನೀಡಿತು. ಆದರೆ ಕೋರ್ಟ್ ಆದೇಶದ ಪ್ರಕಾರ ಈಗಾಗಲೇ ಬಾಕಿ ಇರುವ ಖಾಸಗಿ ಅರ್ಜಿಗಳಿಗೂ ಸಮಯ ನಿಗದಿಪಡಿಸಿ ಬಳಿಕ ಕೆಎಸ್ಆರ್ಟಿಸಿ ಬಸ್ ಸಮಯ ನೀಡಬೇಕಾಗಿರುವುದರಿಂದ ಸಮಸ್ಯೆ ಇತ್ಯರ್ಥವಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ 700ಕ್ಕೂ ಅಧಿಕ ಬಸ್ಗಳ ಪರವಾನಿಗೆ ಸಮಯ ನಿಗದಿಯಾಗಬೇಕಾಗಿದೆ.ಆ ಬಳಿಕವಷ್ಟೇ ಸರಕಾರಿ ಬಸ್ ಸೇವೆ ಮರಳಿ ಪ್ರಾರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ