ಕುಂದಾಪುರ: ಸುಸಜ್ಜಿತ ಹೆರಿಗೆ ವಿಭಾಗದ ಕಟ್ಟಡ ಲೋಕಾರ್ಪಣೆ
Team Udayavani, Sep 29, 2019, 5:28 AM IST
ಕುಂದಾಪುರ: ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ವತಿಯಿಂದ ಸುಮಾರು 6 ಕೋ.ರೂ. ವೆಚ್ಚದಲ್ಲಿ ಕುಂದಾಪುರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಬಳಿ ನಿರ್ಮಾಣಗೊಂಡ 150 ಹಾಸಿಗೆಗಳ ಅತ್ಯಾಧುನಿಕ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡ ದಿ| ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಿಭಾಗದ ನೂತನ ಕಟ್ಟಡದ ಉದ್ಘಾಟನೆ ಶನಿವಾರ ನಡೆಯಿತು.
ಅತ್ಯಾಧುನಿಕ ಸುಸಜ್ಜಿತ ಸೌಲಭ್ಯ ಗಳನ್ನು ಒಳಗೊಂಡ ದಿ| ಲಕ್ಷ್ಮಿ ಸೋಮ ಬಂಗೇರ ಹೆರಿಗೆ ವಿಭಾಗದ ನೂತನ ಕಟ್ಟಡವನ್ನು ಆರೋಗ್ಯ ಸಚಿವ ಶ್ರೀರಾಮುಲು ಉದ್ಘಾಟಿಸಿದರು.
ಸಮ್ಮಾನ
ಈ ಸಂದರ್ಭದಲ್ಲಿ ಸ್ತ್ರೀರೋಗ ತಜ್ಞರಾದ ಡಾ| ಆರತಿ, ಡಾ| ಚಂದ್ರ ಮರಕಾಲ, ಅರಿವಳಿಕೆ ತಜ್ಞ ಡಾ| ವಿಜಯ ಶಂಕರ್ ಅವರನ್ನು ಸಮ್ಮಾನಿಸಲಾಯಿತು. ಕಟ್ಟಡದ ಇಂಜಿನಿಯರ್ ಯೋಗೀಶ್, ಪ್ರಕಾಶ್ ಕರ್ಕೇರ ಅವರನ್ನು ಗೌರವಿಸಲಾಯಿತು.
ಸಚಿವರಿಗೆ ಮನವಿ
ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಆರೋಗ್ಯ ಸಚಿವರಿಗೆ ಆಶಾ ಕಾರ್ಯಕರ್ತೆಯರ ವತಿಯಿಂದ ಮನವಿ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರಿನ ಬಿ.ಎಂ. ಸುಕುಮಾರ್ ಶೆಟ್ಟಿ, ಉಡುಪಿಯ ರಘುಪತಿ ಭಟ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ| ಜಿ. ಶಂಕರ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು, ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೊ, ಮತ್ತಿತರರು ಉಪಸ್ಥಿತರಿದ್ದರು.
150 ಬೆಡ್ಗಳ ಘಟಕ
ಬೆಳೆಯುತ್ತಿರುವ ಕುಂದಾಪುರ ನಗರ ಮತ್ತು ಸುತ್ತಮುತ್ತಲಿನ ಊರುಗಳ ಮಹಿಳೆಯರ ಸುಖ ಪ್ರಸವ ಮತ್ತು ಆರೋಗ್ಯ ಸಂರಕ್ಷಣೆಗಾಗಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ 6 ಕೋ.ರೂ. ವೆಚ್ಚದಲ್ಲಿ 150 ಹಾಸಿಗೆಗಳ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ದಿ| ಲಕ್ಷ್ಮೀ ಸೋಮ ಬಂಗೇರ ಹೆರಿಗೆ ಆಸ್ಪತ್ರೆಯ ನೂತನ ಕಟ್ಟಡವನ್ನು ಬಡ ವರ್ಗದ ಜನರ ಉಪಯೋಗಕ್ಕಾಗಿ ನೀಡಲಾಗುತ್ತಿದೆ. ಇಲ್ಲಿ 2007ರಲ್ಲಿ ಕುಂದಾಪುರ ಆಸ್ಪತ್ರೆಯ ಆವಶ್ಯಕತೆ ಮನಗಂಡು 34 ಹಾಸಿಗೆಗಳ ಶ್ರೀಮತಿ ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಾರ್ಡನ್ನು ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿತ್ತು. ವಿಶೇಷವಾಗಿ ಕುಂದಾಪುರ ಆಸುಪಾಸಿನ ಹಾಗೂ ತೀರ್ಥಹಳ್ಳಿ, ಭಟ್ಕಳ, ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ಹೆಚ್ಚು ಸಹಕಾರಿಯಾಗಲಿದೆ.