ಕುಂದಾಪುರ: ಮೀನು ಮಾರುಕಟ್ಟೆಯ ಅವ್ಯವಸ್ಥೆ
Team Udayavani, Mar 10, 2019, 1:00 AM IST
ಕುಂದಾಪುರ: ಇಲ್ಲಿನ ಪುರಸಭೆಯ ಮೀನುಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದೆ. ಸ್ವತ್ಛತೆಯಿಲ್ಲ, ಕೊಳೆನೀರು, ಮೀನಿನ ನೀರು ಎಲ್ಲ ನೆಲದಲ್ಲಿ ಚೆಲ್ಲಿ ವಾಸನೆ ವಿಪರೀತವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು ಹಾಗೂ ಗ್ರಾಹಕರು.
ಗಮನ ಹರಿಸಿಲ್ಲ.
ಇಲ್ಲಿ ವ್ಯಾಪಾರಿಗಳು ಗ್ರಾಹಕರಿಂದ ನಿತ್ಯವೂ ಗಿಜಿಗುಟ್ಟುತ್ತಿರುತ್ತದೆ. ಇದರ ನಡುವೆ ಅಶುಚಿಯ ವಾತಾವರಣದಲ್ಲಿ ಮೀನು, ಆಹಾರ ಪದಾರ್ಥಗಳನ್ನು ಖರೀದಿಸುವಂತಾಗಿದೆ. ಪುರಸಭೆಯ ಪಕ್ಕದ ರಸ್ತೆಯಲ್ಲಿಯೇ ಹಾದುಹೋದ ರಸ್ತೆಯಲ್ಲಿ ಮೀನುಮಾರುಕಟ್ಟೆ ಇದ್ದರೂ ಆಡಳಿತ ವರ್ಗ ಇತ್ತ ಗಮನ ಹರಿಸಿಲ್ಲ.
ನಿರುಪಯುಕ್ತ
ಮೀನು ಮಾರುಕಟ್ಟೆ ಕಟ್ಟಡದ ಮೇಲೆ ಅಂತಸ್ತು ರಚಿಸಿ ಲಕ್ಷಾಂತರ ರೂ. ವ್ಯಯಿಸಿ ಸಂಕೀರ್ಣ ನಿರ್ಮಿಸಲಾಗಿದೆ. ಅದರಲ್ಲಿ 5 ಕೊಠಡಿಗಳಿವೆ. ಅವುಗಳ ಪೈಕಿ ನಾಲ್ಕನ್ನು ಮಾಂಸ ಮಾರಾಟಕ್ಕೆ ಬಾಡಿಗೆ ನೆಲೆಯಲ್ಲಿ ನೀಡಲಾಗಿದೆ. ಆದರೆ ವಿಶಾಲವಾದ ಜಾಗ ಇನ್ನೂ ಹಾಗೆಯೇ ಖಾಲಿಯಿದ್ದು ಉಪಯೋಗ ಶೂನ್ಯವಾಗಿದೆ. ಇದರಲ್ಲಿ ಕೂಡ ಮೀನು ಮಾರಾಟ ಮಾಡಿದರೆ ತಳ ಅಂತಸ್ತಿನಲ್ಲಿ ಆಗುವ ಜನಸಂದಣಿ, ಗೊಂದಲ ತಪ್ಪಲಿದೆ.
ಪಾರ್ಕಿಂಗ್ ಕಷ್ಟ
ಮೀನುಮಾರುಕಟ್ಟೆ ರಸ್ತೆ ಮೂಲಕ ಅನೇಕ ಮನೆಗಳಿಗೆ ಸಂಪರ್ಕ ಇದೆ. ಮುಖ್ಯ ರಸ್ತೆಗೂ ಸಂಪರ್ಕ ಸಾಧ್ಯವಾಗುತ್ತದೆ. ಈ ಭಾಗದ ಮನೆ, ದೇವಾಲಯಗಳಿಗೆ ಇದೇ ರಸ್ತೆಯ ಅಗತ್ಯವಿದೆ.
ಆದರೆ ಇಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವ ಕಾರಣ ಇತರ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆ.
ವ್ಯಾಪಾರಿಗಳು
ಈಗ ಬಹುತೇಕ ವ್ಯಾಪಾರಿಗಳು ಮನೆ ಮನೆಗೆ ತೆರಳಿ ಮೀನು ಮಾರಾಟ ಮಾಡುತ್ತಾರೆ. ಹಾಗಿದ್ದರೂ 150ರಿಂದ 200 ಮಂದಿ ಮಹಿಳೆಯರು, ಪುರುಷರು ಇಲ್ಲಿನ ಪುರಸಭೆಯ ಮೀನು ಮಾರುಕಟ್ಟೆಗೆ ಮೀನು ಮಾರಾಟ ನಡೆಸಲು ಬರುತ್ತಾರೆ. ಒಂದಷ್ಟು ಜನ ಸಣ್ಣ ಪ್ರಮಾಣದಲ್ಲಿ ಮೀನು ತಂದರೆ, 70ರಷ್ಟು ಜನ ಹೆಚ್ಚು ತಂದು ಸಂಜೆವರೆಗೆ ಮಾರಾಟ ನಡೆಸುತ್ತಾರೆ. ಇವರಿಗೆ 3 ರೂ., 5 ರೂ., 10 ರೂ., ಹೀಗೆ ದಿನಸುಂಕ ಇದೆ.
ಕಳೆದ ವರ್ಷ 1.2 ಲಕ್ಷ ರೂ.ಗೆ ಸುಂಕವಸೂಲಿ ಗುತ್ತಿಗೆ ಏಲಂಗೊಳಗಾಗಿದ್ದರೆ ಈ ವರ್ಷ 2.9 ಲಕ್ಷ ರೂ.ಗೆ ಏಲಂ ಆಗಿದೆ.
ತತ್ಕ್ಷಣ ವ್ಯವಸ್ಥೆ
ವ್ಯಾಪಾರಿಗಳು ಸಹಕಾರ ಕೊಟ್ಟರೆ ಮೀನುಮಾರುಕಟ್ಟೆಯನ್ನು ಶುಚಿಗೊಳಿಸಲು ತತ್ಕ್ಷಣ ವ್ಯವಸ್ಥೆ ಮಾಡಲಾಗುವುದು. ಮೇಲಂತಸ್ತು ಪ್ರಸ್ತುತ ಖಾಲಿಯಿದ್ದು ಅಲ್ಲಿ ಒಣಮೀನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಅದರ ಉಪಯೋಗವಾಗುವಂತೆ ಮಾಡುವ ಯೋಚನೆ ಇದೆ.
-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ
– ಲಕ್ಷ್ಮೀ ಮಚ್ಚಿನ