ಲಕ್ಷದೀಪದ ಪ್ರಭೆಯಲ್ಲಿ ‘ಶ್ರೀನಿವಾಸ’ ದರ್ಶನ : ಸಂಭ್ರಮೋತ್ಸವ


Team Udayavani, Nov 27, 2018, 3:20 AM IST

karkala-26-11.jpg

ವಿಶ್ವವ್ಯಾಪಿ ಅನಂತ ಚೈತನ್ಯಕ್ಕೆ ಜ್ಯೋತಿ ಬೆಳಗಿ ಜ್ಯೋತಿರ್ಮಯವಾಗಿಸಿ ಜ್ಯೋತಿರ್ಲತೆಗಳಿಂದ ಅಲಂಕರಿಸಿ, ಜಗನ್ನಿಯಾಮಕ ಶಕ್ತಿಯ ದಿವ್ಯ ಮಂಗಳ ಸ್ವರೂಪವನ್ನು ದೀಪ ಪ್ರಕಾಶದಿಂದ ದರ್ಶಿಸುವ ಪರ್ವಕಾಲವೇ ಕಾರ್ತಿಕ ಮಾಸ. ಸ್ಥಿತಿಕರ್ತನಾದ ಶ್ರೀಮನ್ನಾರಾಯಣನ ಶ್ರೀ ವೆಂಕಟರಮಣ-ಶ್ರೀನಿವಾಸ ಸ್ವರೂಪಗಳನ್ನು ಪರಿಪೂರ್ಣವೆಂದು ಪರಿಭಾವಿಸಿ ದೀಪೋತ್ಸವದಿಂದ ಆರಾಧಿಸುವ ಸದವಸರದಲ್ಲಿದೆ ಕಾರ್ಕಳ.

ಪಡುತಿರುಪತಿ ಶ್ರೀ ವೆಂಕಟರಮಣ ದೇವಳದ ವಾರ್ಷಿಕ ದೀಪೋತ್ಸವದ ಸಂಭ್ರಮ .ಇದರ ನೆನಪೇ ಉತ್ಸಾಹ ತುಂಬಿ ಉತ್ಸವವಾಗುವ ವೇಳೆ. ಉಭಯ ಜಿಲ್ಲೆಗಳ ಪ್ರಸಿದ್ಧ ಜಾತ್ರೆಗಳಲ್ಲಿ, ಕಾರ್ಕಳ ದೀಪ ಒಂದು. ಈ ದೀಪೋತ್ಸವ ಆರಂಭವಾಗುತ್ತಲೆ ಅವರ್ಣನೀಯ ಸಂಭ್ರಮ ಸೃಷ್ಟಿಯಾಗುತ್ತದೆ. ದಿನನಿತ್ಯ ವಿವಿಧ ಉತ್ಸವಗಳೊಂದಿಗೆ ಈ ಸಡಗರ ಗಾಢವಾಗುತ್ತಾ ಲಕ್ಷದೀಪೋತ್ಸವದಂದು ವಿಜೃಂಭಿಸುತ್ತದೆ. ಇದು ಕಾರ್ಕಳ ದೀಪದ ಹೆಗ್ಗಳಿಕೆ. ಶ್ರೀ ವೆಂಕಟರಮಣ ದೇವರ ಶ್ರೀಮಂತಿಕೆ-ವೈಭವಕ್ಕೆ ಸಾಕ್ಷಿ.

ಇದು ನಿಸರ್ಗದಲ್ಲಿ ಅಪೂರ್ವ ಸ್ಥಿತ್ಯಂತರವೇರ್ಪಡುವ ಕಾಲ. ಶರದೃತು ಆವರಿಸುತ್ತದೆ. ಮತ್ತೆ ಸಸ್ಯ ಶ್ಯಾಮಲೆಯಾಗಲು ಭೂದೇವಿ ಸಿದ್ಧಳಾಗುತ್ತಿದ್ದಾಳೆ. ಸಮೃದ್ಧಿ-ಸಂಪತ್ತಿನ ಪ್ರತೀಕವಾದ ಧಾನ್ಯಲಕ್ಷ್ಮಿ ಮನೆಗಳನ್ನು ತುಂಬಿರುತ್ತಾಳೆ. ಈ ಪರ್ವಕಾಲದಲ್ಲಿ ಶ್ರೀಮನ್ನಾರಾಯಣನಿಗೆ ಭೂದೇವಿ ಶ್ರೀದೇವಿಯವರೊಂದಿಗೆ ಆರಾಧನೆ. ದೀಪವೇ ಪ್ರಧಾನವಾಗಿ ನಡೆಯುವುದಿರಂದ ದೀಪಾರಾಧನೆ. ಶ್ರೀ ದೇವಿ-ಭೂದೇವಿ ಸಮೇತರಾಗಿ  ಕಾರ್ಕಳದಲ್ಲಿ ಸನ್ನಿಹಿತರಾಗಿರುವ ಶ್ರೀನಿವಾಸ ವೆಂಕಟರಮಣ ದೇವರಿಗೆ ಬಲು ವಿಧದ ಪೂಜೆ, ಸವಾರಿ, ಉತ್ಸವ ದೇವರನ್ನು ಸಮೀಪದಲ್ಲಿ ದರ್ಶಿಸುತ್ತಾ ಅವರ ಸನ್ನಿಧಿಯಲ್ಲಿ ಭೋಜನ ಸ್ವೀಕಾರ, ಅದೂ ವನದಲ್ಲಿ ವನಭೋಜನ, ಇಂತಹ ಹತ್ತಾರು ಧಾರ್ಮಿಕ ವಿಧಿಯಾಚರಣೆಗಳೊಂದಿಗೆ ಕಾರ್ಕಳದ ನಗರದಲ್ಲಿ ದೇವರ ಸಂಚಾರ ಒಂದು  ಪುಳಕೋತ್ಸವದ ಸಂದರ್ಭ.

ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಊರು-ಪರವೂರುಗಳಿಂದ ಆಗಮಿಸುತ್ತಾರೆ. ಪಟ್ಟದ ದೇವರು ಮತ್ತು ಉತ್ಸವ ದೇವರು ಒಟ್ಟಿಗೆ ಶ್ರೀನಿವಾಸ ಮತ್ತು ಶ್ರೀ ವೆಂಕಟರಮಣ ದೇವರು ಆದರೆ ಬೇರೆ ಬೇರೆ  ವಾಹನಗಳಲ್ಲಿ ಪಲ್ಲಕ್ಕಿ, ಮಂಟಪಗಳಲ್ಲಿ ತೆರಳಿ ಪೂಜೆಗೊಂಡು ಹಿಂದಿರುಗುವ ವೈಭವ ಒಂದು ದಿನವಾದರೆ ಒಂದೇ ಪಲ್ಲಕ್ಕಿಯಲ್ಲಿ ಎದುರು ಬದರು ಕುಳಿತು ಸಾಗುವ ಅಪೂರ್ವ ಕ್ಷಣ ಈ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಇಡೀ ಉತ್ಸವದ ಅವಧಿಯಲ್ಲಿ ಮಾತ್ರ ಲಭ್ಯ. ವಿವಿಧ ಸ್ಥಿರರಥಗಳಲ್ಲಿ ( ಗುರ್ಜಿ) ಪೂಜೆಗೊಳ್ಳುವ ದೇವರನ್ನು ಕಾಣುವುದೇ ಒಂದು ಅಪೂರ್ವ ಅನುಭವ. ಉತ್ಸಾಹದ ವೇಳೆಯಾದರೂ ಎಲ್ಲಾ ವಿಧಿ-ವಿಧಾನಗಳು  ಶಿಸ್ತುಬದ್ಧ ಸಂಪ್ರದಾಯದಂತೆ ನೆರವೇರುವುದು ಕಾರ್ಕಳ ದೀಪದಲ್ಲಿ ಗಮನಿಸಬಹುದು. ಪಡುತಿರುಪತಿಗೆ ಆಗಮಿಸಿದ್ದು ದೇವರು ಮೂಡುದಿಕ್ಕಿನಿಂದ ಅಂದರೆ ತಿರುಪತಿಯಿಂದ. ಈ ನೆನಪಿಗಾಗಿ ಎಲ್ಲ ಉತ್ಸವಗಳು ಹೆಚ್ಚಾಗಿ ಮೂಡು ಮುಖವಾಗಿ ಸಾಗುತ್ತದೆ. ಲಕ್ಷದೀಪದಂದು ಶ್ರೀನಿವಾಸ ಆಶ್ರಮದ ವನಕ್ಕೆ ತೆರಳುವಲ್ಲಿಯೂ ದೇವರು ತಾನು ಮೂಡುಬದಿಯಿಂದ (ತಿರುಪತಿಯಿಂದ) ಬಂದೆ ಎಂಬ ನೆನಪಿಗಾಗಿ ಸಾಂಕೇತಿಕವಾಗಿ ಸಾಗುವುದೆಂದು ಹಿರಿಯರ ಅಭಿಪ್ರಾಯ.


ಕಾರ್ಕಳ ಶ್ರೀ ವೆಂಕಟರಮಣ ದೇವರ ವೈಭವ,‌ ಅವಿಸ್ಮರಣೀಯ ಉತ್ಸವ, ಲಕ್ಷ ದೀಪದ ಬೆರಗು, ಧಾರ್ಮಿಕ ವಿಧಿಗಳಲ್ಲಿ ಎದ್ದು ಕಾಣುವ ಒಪ್ಪ-ಓರಣ,ನಿಯಮ ಸಂಪ್ರದಾಯ, ಪರಂಪರೆಗಳಿಗೆ ಚ್ಯುತಿ ಬಾರದಂತೆ ಉತ್ಸವಾಚರಣೆಯ ಶೈಲಿಯಿಂದ  ಕಾರ್ಕಳ ದೀಪ (ಕಾರ್ತೀಪುನ್ನವ್‌) ಜನಪ್ರಿಯ ಉತ್ಸವ. ನಿತ್ಯಪೂಜಾ ವಿಧಾನ, ಪರ್ವಕಾಲದ ವಿಧಿ ನಿರ್ವಹಣೆ, ಉತ್ಸವಾಚರಣೆ, ಮಹೋತ್ಸವ ಸಂಪ್ರದಾಯಗಳೆಲ್ಲ ಶಿಸ್ತುಬದ್ಧವಾಗಿ ವಿಸ್ತೃತ ಮಂತ್ರ-ತಂತ್ರಗಳೊಂದಿಗೆ ಸಂಪನ್ನಗೊಳ್ಳುವ ಕಾರ್ಕಳದ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಎಲ್ಲವೂ ಒಪ್ಪ, ಓರಣ. ಉತ್ಸವಗಳಲ್ಲಿ ವೈಭವವಿದ್ದರೂ ಶ್ರದ್ಧಾಭಕ್ತಿಯ ವಿಧಿಯಾಚರಣೆಗಳಿವೆ. ಸುಮಾರು ಆರುನೂರು ವರ್ಷಗಳ ಪ್ರಾಚೀನತೆಗನುಗುಣವಾದ ಪರಂಪರೆಯ ಕಟ್ಟುನಿಟ್ಟಿನ ಅನುಸರಣೆ ಇದೆ. ಇವು ಪಡುತಿರುಪತಿಯ ವೈಶಿಷ್ಟé. 
ವೇದ ವಿದ್ವಾಂಸರ ಪೂಜಾ ವಿಧಾನಗಳಲ್ಲಿ ನಿಯಮ – ನಿಷ್ಠೆಗಳಿವೆ. ಶಾಸ್ತ್ರ ಸೂಚಿತ ಆರಾಧನಾ ಕ್ರಮಗಳಿವೆ. ಅಲಂಕಾರ ವೈವಿಧ್ಯಗಳಿವೆ. ವರ್ಷಪೂರ್ತಿ ವಿವಿಧ ಉತ್ಸವಗಳು, ಋತುಮಾನಕ್ಕೆ ಬದ್ಧವಾದ ವಿವಿಧ ಪೂಜಾವಿಧಾನಗಳಿವೆ. ಈ ಸುವ್ಯವಸ್ಥೆಯ ನೈರಂತರ್ಯದಿಂದ ಕ್ಷೇತ್ರ ಸಮೃದ್ಧವಾಗಿದೆ. ಆಚಾರ್ಯನ (ಅರ್ಚಕನ) ತಪಃಶಕ್ತಿ, ಮಂತ್ರಘೋಷ, ರೂಢಗೊಂಡ ನಿಯಮಗಳಿಗೆ ಬದ್ಧತೆ, ಉತ್ಸವಾಚರಣೆ, ಹೋಮ-ಹವನ, ಭಜನೆ, ಅನ್ನದಾನಗಳು ಅತಿಶಯವಾಗಿ ನಡೆದಾಗ ಸನ್ನಿಧಾನ ವೃದ್ಧಿಯಾಗುತ್ತದೆ ಎಂಬುದು ಶಾಸ್ತ್ರಪ್ರಮಾಣ. ಇದರಂತೆ ಕಾರ್ಕಳದ ಶ್ರೀ ವೆಂಕಟರಮಣ ದೇವರ ಸನ್ನಿಧಿ ಪೂರ್ಣ ತೇಜಸ್ಸಿನಿಂದ ಭಕ್ತರನ್ನು ಆಕರ್ಷಿಸುತ್ತಿದೆ. ಇಷ್ಟಾರ್ಥ ನೆರವೇರಿಸುತ್ತಿದೆ. ಭಾವುಕ ಭಕ್ತರಿಗೆ ಸಿದ್ಧಿ ಕ್ಷೇತ್ರವಾಗಿ ರಾರಾಜಿಸುತ್ತಿದೆ. ವೆಂಕಟರಮಣನು ಸಂಕಟಹರಣನಾಗಿ ಅಭಯವೀಯುತ್ತಿದ್ದಾನೆ. ಶ್ರೀನಿವಾಸನಾಗಿ ಇಚ್ಛಾಪೂರ್ತಿಯೊಂದಿಗೆ ಸರ್ವಸಂಪತ್ತನ್ನು ಅನುಗ್ರಹಿಸುತ್ತಿದ್ದಾನೆ.ಸ್ವಚ್ಛ , ಶಾಂತ ಪ್ರಶಾಂತ ವಾತಾವರಣದಲ್ಲಿ ಸನ್ನಿಹಿತ ಸಾನ್ನಿಧ್ಯವು ಅದ್ಭುತ ಶಕ್ತಿಯೊಂದಿಗೆ ಸಂಭ್ರಮಿಸುತ್ತಿರುತ್ತದೆ. ಅಂತಹ ಅನನ್ಯ ಅನುಭವಗಳನ್ನು ನೀಡಬಲ್ಲ ಶ್ರೀ ವೆಂಕಟರಮಣ ದೇವರ ಪಾವನ ಸಮ್ಮುಖ ಲಕ್ಷದೀಪೋತ್ಸವದ ಸಡಗರದಲ್ಲಿದೆ.

ಲಕ್ಷದೀಪ (ಲಕ್ಷದಿವ್ವೆ)

ಕಾರ್ತಿಕದ ಗಾಢ ಕತ್ತಲೆಯನ್ನು ದೀಪಗಳಿಂದ ಪ್ರಕಾಶಮಾನವಾಗಿಸಿ ನಿಸರ್ಗಾಂತರ್ಗತ ಪುರುಷೋತ್ತಮನನ್ನು ಎಚ್ಚರಿಸುವ ಪರಿಕಲ್ಪನೆಯೊಂದಿಗೆ ಕಾರ್ತಿಕದ ದೀಪೋತ್ಸವ ಮಹತ್ವ ಪಡೆಯುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪ ವಿಶಿಷ್ಟ ಸ್ಥಾನ ಪಡೆಯುತ್ತದೆ. ದಿನದ ಆರಂಭವೇ ದೀಪ ಬೆಳಗುತ್ತಾ ಸತ್ಕಾರ್ಯ, ಶುಭ-ಶೋಭನಾದಿಗಳನ್ನು  ದೀಪ ಹಚ್ಚಿಟ್ಟು  ತೊಡಗುವುದು ಸಂಪ್ರದಾಯ. ದೀಪ ಪರಬ್ರಹ್ಮದ ಸಂಕೇತ. ಸ್ವತ: ಪರಬ್ರಹ್ಮವೇ  ಒಂದು ಪರಂಜ್ಯೋತಿ. ದೀಪ ಜ್ಞಾನ ಪ್ರತೀಕ.  ಮಂಗಳ ಶುಭ ಪಾಪಹರಗಳೇ  ಮುಂತಾದ ಗುಣವಿಶೇಷಗಳುಳ್ಳ ದೀಪವನ್ನು ಲಕ್ಷಾಂತರ ಸಂಖ್ಯೆಯಲ್ಲಿ ಬೆಳಗಿದಾಗ ನಾನು, ನೀವು  ಇಡೀ ಆಸ್ತಿಕ ಸಮುದಾಯ ಕೃತಾರ್ಥರಾದಂತೆ. ಈ ಕಲ್ಪನೆಯೊಂದಿಗೆ ದೇವಳಗಳಲ್ಲಿ ಸಾಮೂಹಿಕವಾಗಿ ದೀಪಾರಾಧನೆಯು ಸಂಪ್ರದಾಯ ಮನಸ್ಸುಗಳನ್ನು ಬೆಳಗುತ್ತಾ ಮಾನವ ಸಂಬಂಧವನ್ನು ಗಾಢಾವಾಗಿಸುವ ಕ್ರಿಯೆಯಾಗಿಯೂ ಗುರುತಿಸಲ್ಪಡುತ್ತದೆ.

ಕತ್ತಲೆಯ ನೇಪಥ್ಯ ಭಗವಂತನ ದಿವ್ಯ ಸನ್ನಿಧಾನ ಲಕ್ಷದೀಪಗಳೇ ಮಾಧ್ಯಮ ಇದು ವಿರಾಡ್‌ ದರ್ಶನವಲ್ಲದೇ ಮತ್ತಿನ್ನೇನು. ದೀಪ ಮೂಲದಲ್ಲಿ ಬ್ರಹ್ಮದೇವರು ದೀಪ ಮಧ್ಯದಲ್ಲಿ ನಾರಾಯಣ ದೇವರು. ದೀಪಾಗ್ರದಲ್ಲಿ ರುದ್ರದೇವರು ಸನ್ನಿಹಿತರೆಂಬುದು ಶಾಸ್ತ್ರೋಕ್ತಿ. ತುಪ್ಪದ ದೀಪವು ಸಾತ್ವಿಕ, ತಿಲತೈಲವ ದೀಪವು ರಾಜಸ, ತೆಂಗಿನೆಣ್ಣೆ ದೀಪವು  ತಾಮಸ ದೀಪವೆಂಬುದು ಪ್ರಮಾಣ. ಮೂರಂಗುಲ  ಎತ್ತರಕ್ಕೆ ಜ್ವಲಿಸುವ ದೀಪವು ಉತ್ತಮ. ಎರಡಂಗುಲ ಉರಿಯುವ ದೀಪ ಮಧ್ಯಮ. ಒಂದಂಗುಲ ಎತ್ತರದ ದೀಪ ಅಧಮ ದೀಪವೆಂದು ದೀಪ ಸ್ವರೂಪಗಳನ್ನು ಶಾಸ್ತ್ರಕಾರರು ನಿರೂಪಿಸುತ್ತಾರೆ.

– ವಿವಿಧ ಸೇವಾದಾರರಿಗೆ, ಪರಂಪರೆಯಿಂದ ಪೂಜೆ ಅಥವಾ ಇತರ ಸೇವೆಗಳನ್ನು ನಡೆಸಿಕೊಂಡು ಬರುವವರಿಗೆ, ಗುರ್ಜಿ ಸೇವೆಯಲ್ಲಿ ನೀಡಲಾಗುವ ಪ್ರಸಾದವನ್ನು ನಿರ್ದಿಷ್ಟ ಕ್ರಮದಲ್ಲಿ ವಿತರಿಸಲಾಗುವುದು. ದೇವರ ಪ್ರಸಾದವೆಂಬ ಪವಿತ್ರಭಾವ, ಭಕ್ತನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಇವೆಲ್ಲವೂ ಮೊಕ್ತೇಸರರ, ಅರ್ಚಕರ ಹಾಗೂ ಕಾರ್ಯನಿರ್ವಹಣೆಗೆ ನಿಯೋಜಿಸಲ್ಪಟ್ಟವರಿಂದ ಪೂರ್ವಪದ್ಧತಿಯಂತೆ ನಡೆಯುತ್ತದೆ.

– ಸೇವಾ ಪ್ರಸಾದವನ್ನು ಯಜಮಾನನ ಮನೆಯವರಿಗೆ ಕೊಂಡೊಯ್ದು (ಗೌರವಗಳೊಂದಿಗೆ) ಅಲ್ಲಿ ಮನೆದೇವರ ಸನ್ನಿಧಿಯಲ್ಲಿ ಇರಿಸಿ ಬರುವ ವಾಡಿಕೆ ಪಡುತಿರುಪತಿಯಲ್ಲಿ ಇದೆ.

– ಉತ್ಸವದ ವೇಳೆ ಸೇವೆ ಸಲ್ಲಿಸುವ ಎಲ್ಲ ವರ್ಗದವರಿಗೆ, ಗುಡಿಸಿ ಸ್ವತ್ಛತಾ ಕಾರ್ಯನಿರ್ವಹಿಸುವವರಿಗೆ ಸಹಿತ ಸರ್ವರಿಗೂ ಪ್ರಸಾದ ವಿತರಣೆ ಸಾಂಗವಾಗಿ ನಡೆಯುತ್ತದೆ.

– ಪಡುತಿರುಪತಿಯಲ್ಲಿ ಹತ್ತು ಹಲವು ಪವಾಡಗಳು ನಡೆದಿವೆ. ಕಾರಣಿಕ ಪ್ರದರ್ಶನವಾಗಿವೆ. ಪೇಟೆ-ಸಮಾಜಕ್ಕೆ ಸರ್ವಸಮೃದ್ಧಿಯಾಗಿದೆ ಎನ್ನುತ್ತಾರೆ ಭಕ್ತರು.

ಗುರ್ಜಿ ಪೂಜೆ
ರಥವು ಚಲಿಸುವ ದೇವಾಲಯದ ಕಲ್ಪನೆ. ಗುರ್ಜಿ ನಿಂತಲ್ಲೆ ಕಂಗೊಳಿಸುವ ರಥದ ಪ್ರತಿಕೃತಿ. ಇದರ ಅಲಂಕಾರ ಮತ್ತು ಗುರ್ಜಿಯಲ್ಲಿ ನಡೆಯುವ ಪೂಜಾ ಶೈಲಿ ವಿಶಿಷ್ಟವಾದುದು.

ಗುರ್ಜಿ ಪೂಜೆಯ ಸಂಪ್ರದಾಯ
ಒಂದು ಗುರ್ಜಿಯಲ್ಲಿ ಪೂಜೆ ನಡೆದು ಮುಂದಿನ ಗುರ್ಜಿಗೆ ದೇವರು ಚಿತ್ತೈಸುವಲ್ಲಿಯೂ ಸಾಂಪ್ರದಾಯಿಕ ವಿಧಿ ರೂಢಿಯಲ್ಲಿದೆ. ಗುರ್ಜಿಯ ಯಜಮಾನನ ಬಿನ್ನಹ, ಅರ್ಚಕರಿಂದ (ಸಂಬಂಧಪಟ್ಟ ಅಧಿಕಾರಿಗಳಿಂದ) ಉತ್ತರ. ಬಳಿಕ ದೇವರನ್ನು ಕರೆದೊಯ್ಯುವುದು ಮುಂತಾದ ಶಿಷ್ಟಾಚಾರ ಇಂದಿಗೂ ಪಾಲಿಸಲ್ಪಡುತ್ತಿದೆ.

ಪೂಜಾವಿಧಾನ
ಷೋಡಶೋಪಚಾರ ಪೂಜಾಕ್ರಮವು ಮಂತ್ರಪ್ರಧಾನವಾಗಿ, ವಸ್ತುಪ್ರಧಾನವಾಗಿ, ಅಲಂಕಾರ ಪ್ರಧಾನವಾಗಿ ಆಯಾಯ ಅಗತ್ಯ ಸಮರ್ಪಣಾ ದ್ರವ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯುವುದು ಇಲ್ಲಿ ಸಹಜ. ಉತ್ಸವ ವಿಧಿಯಲ್ಲಿ ಉತ್ಸಾಹಕ್ಕೆ ವೈಭವಕ್ಕೆ ಅವಕಾಶವಿದೆಯಾದರೂ ಶ್ರದ್ಧೆ, ಭಕ್ತಿ ಮತ್ತು ಶಿಸ್ತುಬದ್ಧತೆ ಪಡುತಿರುಪತಿಯಲ್ಲಿ ನಡೆದು ಬಂದ ಸಂಪ್ರದಾಯ.​​​​​​​

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲ್ಲಿ ಕೈಹಿಡಿದು ನಡೆಸೆನ್ನನು.. ಎಂಬ ಕವಿ ವಾಣಿಯನ್ನು ನೆನಪಿಸಿಕೊಳ್ಳುತ್ತಾ ಪವಿತ್ರ, ಸನ್ನಿಧಾನವಿರುವ ಲೌಕಿಕದಲ್ಲಿ ಅಲೌಕಿಕವನ್ನು ಸೃಷ್ಟಿಸಿ ದಿವ್ಯ ಸಾನಿಧ್ಯಗಳು ಸನ್ನಿಹಿತವಾಗಲು ದೀಪ ಹಚ್ಚೋಣ. ಲಕ್ಷ ಸಂಖ್ಯೆಯಲ್ಲಿ ಬೆಳಗೋಣ.

ಬನ್ನಿ ಕಾರ್ಕಳಕ್ಕೆ …. ಲಕ್ಷ ದೀಪದ ಪ್ರಭೆಯಲ್ಲಿ ಶ್ರೀದೇವಿ-ಭೂದೇವಿ ಸಹಿತ ವೆಂಕಟರಮಣ ಶ್ರೀನಿವಾಸ ದೇವರನ್ನು ಕಂಡು ಧನ್ಯರಾಗೋಣ.

— ಕೆ.ಎಲ್‌.ಕುಂಡಂತಾಯ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.