ಕೊಲ್ಲೂರಿನಲ್ಲಿ ಸಂಭ್ರಮದ ಮಹಾನವಮಿ: ನವರಾತ್ರಿ ರಥೋತ್ಸವಕ್ಕೆ ಹರಿದುಬಂದ ಭಕ್ತ ಸಾಗರ
Team Udayavani, Oct 7, 2019, 7:24 PM IST
ಕೊಲ್ಲೂರು: ಸೌಪರ್ಣಿಕಾ ನದಿ ತಟದಲ್ಲಿರುವ ಕೊಡಚಾದ್ರಿ ಬೆಟ್ಟ ಸಾಲುಗಳ ತಪ್ಪಲಲ್ಲಿರುವ ಪುರಾಣ ಪ್ರಸಿದ್ಧ ಶಕ್ತಿ ಕೇಂದ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಪರ್ವದ ಆಚರಣೆ ಭಕ್ತ ಜನಸಾಗರದ ನಡುವೆ ಸಂಪನ್ನಗೊಳ್ಳುತ್ತಿದೆ. ನವರಾತ್ರಿಯ ಒಂಭತ್ತನೇ ದಿನವಾದ ಸೋಮವಾರದಂದು ಭಕ್ತ ಜನಸಾಗರವೇ ಹರಿದು ಬಂದಿದೆ. ಒಂದು ಲೆಕ್ಕಾಚಾರದ ಪ್ರಕಾರ ಸರಿಸುಮಾರು 25 ಸಾವಿರ ಜನ ಭಕ್ತರು ಮಹಾನವಮಿಯಂದು ಒಂದೇ ದಿನ ಮೂಕಾಂಬಿಕೆಯ ದರ್ಶನವನ್ನು ಪಡೆದುಕೊಂಡಿದ್ದಾರೆ.
ರಾಜ್ಯದ ಮಾತ್ರವಲ್ಲದೆ ಕೇರಳ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳ ಭಕ್ತರು ಭೇಟಿ ಕೊಡುವ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಕೊಲ್ಲೂರು ಸಹ ಒಂದಾಗಿದೆ. ಹಾಗಾಗಿ ನವರಾತ್ರಿಯ ಪುಣ್ಯ ಸಮಯದಲ್ಲಿ ರಾಜ್ಯದ ಭಕ್ತಾದಿಗಳ ಸಹಿತ ಹೊರ ರಾಜ್ಯಗಳಿಂದಲೂ ಅಪಾರ ಪ್ರಮಾಣದ ಭಕ್ತರು ಕೊಲ್ಲೂರಿಗೆ ಭೇಟಿ ನೀಡಿ ದೇವಿಯ ದರ್ಶನವನ್ನು ಪಡೆದುಕೊಂಡಿದ್ದಾರೆ. ನವರಾತ್ರಿ ರಥೋತ್ಸವ ಮತ್ತು ಚಂಡಿಕಾ ಯಾಗ ಈ ಸಂದರ್ಭದಲ್ಲಿ ಸಂಪನ್ನಗೊಂಡಿತು.
ಮಂಗಳವಾರ ವಿಜಯದಶಮಿಯ ಪುಣ್ಯಕಾಲದಲ್ಲಿ ಇಲ್ಲಿ ನಡೆಯುವ ಅಕ್ಷರಾಭ್ಯಾಸದಲ್ಲಿ ಅಸಂಖ್ಯ ಭಕ್ತರು ಪಾಲ್ಗೊಳ್ಳುತ್ತಾರೆ. ಈ ದಿನ ಬೆಳಿಗ್ಗಿನಿಂದ ಮಧ್ಯಾಹ್ನ ತನಕ ಚಿಣ್ಣರಿಗೆ ಅಕ್ಷರಾಭ್ಯಾಸವನ್ನು ನಡೆಸಲಾಗುತ್ತದೆ.
ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ದೇವಳದ ಆಡಳಿತ ಮಂಡಳಿ, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.