ಕೋಟ: ನಾಯಿ ಹಿಡಿಯಲು ಹೋಗಿ ಮನೆಯೊಳಗೆ ಬಂಧಿಯಾದ ಚಿರತೆ!
Team Udayavani, Mar 21, 2021, 11:44 AM IST
ಕೋಟ: ಆಹಾರಕ್ಕಾಗಿ ನಾಡಿಗೆ ಬಂದ ಚಿರತೆಯೊಂದು ಮನೆಯ ಸಾಕು ನಾಯಿಯನ್ನು ಹಿಡಿಯಲು ಹೋಗಿ ಮನೆಯ ಕೋಣೆಯೊಳಗೆ ಬಂಧಿಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೈಲಾಡಿಯಲ್ಲಿ ಇಂದು ಮುಂಜಾನೆ ನಡೆದಿದೆ.
ರೈತ ಸಂಘದ ಪದಾಧಿಕಾರಿ ಬಿಲ್ಲಾಡಿ ಗ್ರಾಮದ ನೈಲಾಡಿಯ ಅಗ್ನೇಶ್ ಶೆಟ್ಟಿಯವರ ಮನೆಯಲ್ಲಿ ಚಿರತೆ ಬಂಧಿಯಾಗಿತ್ತು. ನಂತರ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳ ತಂಡ ಚಿರತೆಯನ್ನು ಸೆರೆ ಹಿಡಿದಿದೆ.
ಇದನ್ನೂ ಓದಿ:ಬಸವಕಲ್ಯಾಣ ಉಪ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ? ಸ್ಪಷ್ಟನೆ ನೀಡಿದ ಸಿಎಂ ಯಡಿಯೂರಪ್ಪ
ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ವೇಳೆಗೆ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಮನೆಯ ಕೋಣೆಯೊಳಗೆ ಸೇರಿಕೊಂಡಿದ್ದು ಸದ್ದು ಕೇಳಿದ ಮನೆಯವರು ಎಚ್ಚರಗೊಂಡು ಕೂಡಲೇ ಕೋಣೆಯ ಬಾಗಿಲು ಹಾಕಿದ್ದಾರೆ. ಇದರಿಂದ ಚಿರತೆ ಬಂಧಿಯಾಗಿದೆ.
ಇದನ್ನೂ ಓದಿ: ಬಡ ಕುಟುಂಬದ ಮನೆ ಮೇಲ್ಛಾವಣಿ ನಿರ್ಮಿಸಿದ ಗ್ರಾಮಸ್ಥರು
ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ್, ಸಿಬ್ಬಂದಿ ರವಿ, ರವೀಂದ್ರ, ಸಂತೋಷ್ ಜೋಗಿ, ವಿಠಲ್ ನಾಯ್ಕ್, ಲಕ್ಷ್ಮಣ, ಶಿವು, ಸುದೀಪ್ ಶೆಟ್ಟಿಯವರು ಮತ್ತು ಊರಿನವರ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಲಾಯಿತು.