ಹಳ್ಳಿ ವೈದ್ಯೆಯ ಮುಡಿಗೆ ರಾಜ್ಯ ಪ್ರಶಸ್ತಿಯ ಬೆಳ್ಳಿ ಗರಿ
Team Udayavani, Mar 6, 2017, 5:13 PM IST
ಐದುನೂರು ಹೆರಿಗೆ ಮಾಡಿಸಿದ ಮಹಾತಾಯಿ ಯಡ್ತಾಡಿಯ ಬೆಳ್ಳಿ ಬಾೖ
ಕೋಟ: ಶಾಲೆಯ ಮೆಟ್ಟಿಲನ್ನು ತುಳಿಯದ ಈಕೆ ಐದು ನೂರು ಜೀವಗಳಿಗೆ ಭುವಿಯ ಬೆಳಕನ್ನು ತೋರಿದ ಮಹಾತಾಯಿ. ಅಕ್ಷರ ಜ್ಞಾನವಿಲ್ಲದಿದ್ದರು ಪುಟ್ಟ ಮಕ್ಕಳ ಕಾಯಿಲೆ ವಾಸಿಮಾಡುವ ಹಳ್ಳಿ ಡಾಕ್ಟರ್ ಹಾಗೂ ಹವ್ಯಾಸಿ ಜಾನಪದ ಕಲಾವಿದೆ. ಇವರ ಸಾಧನೆಯನ್ನು ಗುರುತಿಸಿ ಇದೀಗ ಕರ್ನಾಟಕ ರಾಜ್ಯ ಸರಕಾರದ ಜಾನಪದ ಅಕಾಡಮಿ ಈ ಬಾರಿಯ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆಕೆ ಬೇರೆ ಯಾರೂ ಆಲ್ಲ, ಉಡುಪಿ ತಾಲೂಕಿನ ಯಡ್ತಾಡಿ ಗ್ರಾಮದ ನಿವಾಸಿ ನಾಟಿ ವೈದ್ಯೆ ಬೆಳ್ಳಿ ಬಾೖ.
ವೈದ್ಯರಿಲ್ಲದ ಕಾಲದಲ್ಲಿ ಹಳ್ಳಿಗೆ ಇವರೇ ಡಾಕ್ಟರ್
ಐದಾರು ದಶಕಗಳ ಹಿಂದೆ ಅಲ್ತಾರು, ಯಡ್ತಾಡಿ ಎಂಬ ಕುಗ್ರಾಮದಲ್ಲಿ ವೈದ್ಯರನ್ನು ನೋಡ ಬೇಕಾದರೆ ಹತ್ತಾರು ಕಿ.ಮೀ. ಸಾಗಬೇಕಿತ್ತು. ಆ ಸಂದರ್ಭ ಯಾರಿಗೇ ಹೆರಿಗೆ ನೋವು ಕಾಣಿಸಿಕೊಂಡರು ಮೊದಲು ಕರೆ ಹೋಗುತ್ತಿದ್ದದ್ದು ಈ ಬೆಳ್ಳಿ ಬಾೖಗೆ. ಇವರು ಆ ಮನೆಗೆ ತೆರಳಿ ಹೆರಿಗೆ ಮಾಡಿಸಿ, ತಾಯಿ – ಮಗುವಿಗೆ ಔಷಧೋಪಚಾರಗಳನ್ನು ತಿಳಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ಅವರು ನೀಡುವ ಕಾಣಿಕೆಯನ್ನು ಸ್ವೀಕರಿಸಿ, ಅದರಲ್ಲಿಯೇ ತಾನು ನಂಬಿದ ದೇವರಿಗೆ ಸುಗಮವಾಗಿ ಹೆರಿಗೆಯಾದ ಕುರಿತು ಸೇವೆ ಸಲ್ಲಿಸಿ ಬರುತ್ತಿದ್ದರು. ಹೀಗೆ 50 ವರ್ಷಕ್ಕೂ ಹೆಚ್ಚು ಕಾಲ ಈ ವೃತ್ತಿಯಲ್ಲಿ ತೊಡಗಿಕೊಂಡ ಇವರು ಸುಮಾರು ಐದುನೂರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ. ಗರ್ಭಕೋಶ ಜಾರಿದಾಗ ಚಿಕಿತ್ಸೆ, ಮಕ್ಕಳಿಗೆ ಬಾಲಗ್ರಹ ಪೀಡೆ, ಅಜೀರ್ಣ, ಹೊಟ್ಟೆಹುಳ, ಗಾಳಿ ಸೋಂಕು, ವಾತಿ-ಭೇದಿಧಿ ಹೀಗೆ ಅನೇಕ ಸಂದರ್ಭ ಸಾವಿರಾರು ಮಂದಿಗೆ ಆಯುರ್ವೇದ ಮದ್ದು ನೀಡಿ ಗುಣಪಡಿಸಿದ್ದಾರೆ. ಒಟ್ಟಾರೆ ವೈದ್ಯರಿಲ್ಲದ ಕಾಲದಲ್ಲಿ ಹಳ್ಳಿಗೆ ಇವರೇ ಡಾಕ್ಟರ್.
ಕೇವಲ ಮನುಷ್ಯರಿಗೆ ಮಾತ್ರವಲ್ಲ ಜಾನುವಾರುಗಳಿಗೂ ಮದ್ದು ನೀಡುವುದರಲ್ಲಿ, ಹೆರಿಗೆ ಮಾಡಿಸುವುದರಲ್ಲಿ ಇವರು ನಿಸ್ಸೀಮರು. ಕಾಲಕ್ರಮೇಣ ವೈದ್ಯರು ಹೆರಿಗೆ ಮಾಡಿಸುತ್ತಿದ್ದ ಸಂದರ್ಭದಲ್ಲೂ ಕೂಡ ಇವರನ್ನು ಸಹಾಯಕ್ಕಾಗಿ ಕರೆಯುತ್ತಿದ್ದರು. ಇದೀಗ ಎಂಬತ್ತರ ಆಸುಪಾಸಿನಲ್ಲಿರುವ ಇವರು ಹೆರಿಗೆ ಮಾಡಿಸುವುದನ್ನು ಬಿಟ್ಟಿದ್ದು, ಮನೆಗೆ ಬಂದವರಿಗೆ ಗಿಡಮೂಲಿಕೆಗಳ ಔಷಧ ನೀಡುತ್ತಾರೆ. ಕುಡುಬಿ ಜನಾಂಗದವರಾದ ಬೆಳ್ಳಿ ಬಾೖ ಅವರು ಚಿಕ್ಕವರಿರುವಾಗ ತಾಯಿ ಮಾಡುತ್ತಿದ್ದ ನಾಟಿ ವೈದ್ಯ ಪದ್ಧತಿಯನ್ನು ನೋಡಿ ಅದನ್ನು ಅನುಸರಿಸಿದರು ಹಾಗೂ ಅವರ ಕಾಲ ಅನಂತರ ಅದೇ ಹಾದಿಯಲ್ಲಿ ಮುಂದುವರಿದರು.
ಜಾನಪದ ಕಲಾವಿದೆ
ಇವರ ಪ್ರತಿಭೆ ಕೇವಲ ನಾಟಿ ವೈದ್ಯಕ್ಕೆ ಸೀಮಿತವಲ್ಲ. ಕುಟುಂಬದ ಮದುವೆ, ಇನ್ನಿತರ ಸಮಾರಂಭಗಳಲ್ಲಿ ಕುಡುಬಿ ಭಾಷೆಯ ಹಾಡುಗಳನ್ನು ಹಾಡುವ ಮೂಲಕ ಉತ್ತಮ ಜಾನಪದ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಮಾಜದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅವರ ಕೈಯಿಂದ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಬೆಳ್ಳಿ ಬಾೖಯವರು ತುಂಬಾ ಸಂತೋಷಗೊಂಡಿದ್ದಾರೆ ಹಾಗೂ ಉಡುಪಿ ಜಿಲ್ಲೆಯಿಂದ ಈ ಬಾರಿ ಪ್ರಶಸ್ತಿ ಪಡೆದ ಏಕೈಕ ಸಾಧಕಿ ಇವರಾಗಿದ್ದಾರೆ.
ನಾನು ಚಿಕ್ಕವಳಿರುವಾಗ ನಮ್ಮೂರಿನಲ್ಲಿ ಆಸ್ಪತ್ರೆ ಇರಲಿಲ್ಲ. ಆಗ ನನ್ನ ಅಮ್ಮ ನಾಟಿ ಔಷಧ ನೀಡುತ್ತಿದ್ದಳು, ಹೆರಿಗೆ ಮಾಡಿಸುತ್ತಿದ್ದಳು. ಅವಳಿಂದ ನಾನು ಇದನ್ನು ನೋಡಿ ಕಲಿತೆ. ಎಂದೂ ಹಣಕ್ಕಾಗಿ ಈ ಕೆಲಸ ಮಾಡಿದವಳಲ್ಲ. ಸೇವೆ ಎನ್ನುವ ರೀತಿಯಲ್ಲಿ 500ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದೇನೆ. ಸಾವಿರಾರು ಮಂದಿ ಮಕ್ಕಳಿಗೆ, ಜಾನುವಾರುಗಳಿಗೆ ಔಷಧ ನೀಡಿ ಕಾಯಿಲೆ ಗುಣಪಡಿಸಿದ್ದೇನೆ. ಇದೀಗ ಸರಕಾರ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ತುಂಬಾ ಸಂತೋಷವಾಗಿದೆ.
– ಬೆಳ್ಳಿ ಬಾೖ, ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!