ಕೋವಿಡ್ ಎರಡನೇ ಅಲೆ ಭೀತಿ : ಲಾಕ್ ಡೌನ್ ಗೆ ಕಾಪು ಸ್ತಬ್ಧ
ಜನಸಂಚಾರ ನಿಯಂತ್ರಿಸಲು ರಸ್ತೆಗಿಳಿದ ಪೊಲೀಸರು
Team Udayavani, Apr 28, 2021, 4:07 PM IST
ಕಾಪು: ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಘೋಷಿಸಿರುವ ಹದಿನಾಲ್ಕು ದಿನಗಳ ಲಾಕ್ ಡೌನ್ ಗೆ ಕಾಪುವಿನಲ್ಲಿ ಪೂರಕ ಸ್ಪಂಧನೆ ದೊರಕಿದೆ.
ಸರಕಾರದ ಆದೇಶದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತವು ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಿದ್ದು, ಅದರಂತೆ ಬೆಳಗ್ಗೆ10 ಗಂಟೆಯವರೆಗೆ ಬಿರುಸಿನ ವ್ಯಾಪಾರ ನಡೆಯಿತು.
ಅವಶ್ಯಕ ವಸ್ತುಗಳೂ ಸೇರಿದಂತೆ ದಿನಸಿ, ತರಕಾರಿ, ಹಣ್ಣು ಹಂಪಲು, ಹಾಲು ಸಹಿತವಾಗಿ ಇತರೇ ವಸ್ತುಗಳ ಖರೀದಿಗಾಗಿ ಜನ ಬೆಳಗ್ಗಿನಿಂದಲೇ ಪೇಟೆಯಲ್ಲಿ ಸಂಚಾರ ನಡೆಸುತ್ತಿದ್ದರು.
ಪ್ರಥಮ ದಿನವಾದ ಬುಧವಾರ ಬೆಳಗ್ಗೆ 10 ಗಂಟೆಯ ಒಳಗೆ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆ ಪೊಲೀಸರು ಆಗಾಗ ಎಚ್ಚರಿಕೆ ನೀಡುತ್ತಿರುವುದು ಕಂಡು ಬಂದಿದೆ.
ರಸ್ತೆಗಿಳಿದ ಪೊಲೀಸರು :
ಬೆಳಗ್ಗೆ 10 ಗಂಟೆಯ ಬಳಿಕವೂ ಅನಾವಶ್ಯಕವಾಗಿ ತಿರುಗಾಡುತ್ತಿದ್ದವರನ್ನು ಕಾಪು ಪೊಲೀಸರು ತಡೆದು ನಿಲ್ಲಿಸಿ ವಿಚಾರಣೆಗೊಳಪಡಿಸುತ್ತಿರುವುದು ಕಂಡು ಬಂದಿದೆ. ನಾಳೆಯಿಂದಲೂ ಇದೇ ರೀತಿಯಲ್ಲಿ ಸಂಚರಿಸುತ್ತಿರವುದನ್ನು ಕಂಡರೆ ಕೇಸ್ ಹಾಕಿ, ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಬ್ಯಾಂಕ್ ಗಳಿಗೆ ಹೋಗುವವರಿಗೂ ತೊಂದರೆ :
ಕೋವಿಡ್ ಎರಡನೇ ಅಲೆ ಭೀತಿಯಿಂದಾಗಿ ಲಾಕ್ ಡೌನ್ ಹೇರಲಾಗಿದ್ದು, ಬ್ಯಾಂಕ್ ಗಳು ಮಧ್ಯಾಹ್ನದವರೆಗೆ ಕಾರ್ಯ ನಿರ್ವಹಿಸುತ್ತಿವೆ. ಬೆಳಗ್ಗೆ 10 ಗಂಟೆಯ ನಂತರ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಬ್ಯಾಂಕ್ ಗಳಿಗೆ ಆಮಿಸುವ ಗ್ರಾಹಕರಿಗೆ ತೊಂದರೆಯುಂಟಾಗುತ್ತಿದ್ದು, ಜನರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಕೂಡಾ ಈ ವಿಚಾರದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.