ಮಲ್ಪೆ ಬೀಚ್: ವಂದೇ ಮಾತರಂ ವಿಶ್ವದಾಖಲೆ
Team Udayavani, Jan 14, 2018, 12:51 PM IST
ಮಲ್ಪೆ: ಮಲ್ಪೆ ಬೀಚ್ನಲ್ಲಿ ಶನಿವಾರ ವಿವಿಧ ಕಾಲೇಜ್ಗಳ ಸುಮಾರು 5,000 ವಿದ್ಯಾರ್ಥಿಗಳು, ಚಲನಚಿತ್ರ, ಸುಗಮ ಸಂಗೀತ ಕ್ಷೇತ್ರದ 22ಕ್ಕೂ ಅಧಿಕ ಮಂದಿ ಗಾಯಕರು ಹಿನ್ನೆಲೆ ಸಂಗೀತದೊಂದಿಗೆ ರಣಮಂತ್ರದುಚ್ಚಾರ ಮಾಡಿ “ತ್ವಂಹಿ ದುರ್ಗಾ ದಶಪ್ರಹಣಧಾರಣಿ’… ಎನ್ನುತ್ತ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಿ “ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್’ನಲ್ಲಿ ಸೇರಿಸಿದರು.
ಸ್ವಾಮಿ ವಿವೇಕಾನಂದರ 155ನೇ ಜನ್ಮ ದಿನದ ಪ್ರಯುಕ್ತ ಉಡುಪಿಯ ಸಂವೇದನಾ ಫೌಂಡೇಶನ್ ಸಂಸ್ಥೆ ಸ್ತುತಪಡಿಸಿದ ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ 23 ಕಾಲೇಜುಗಳ 5,000 ವಿದ್ಯಾರ್ಥಿಗಳು ವಂದೇ ಮಾತರಂನ 5 ಚರಣಗಳನ್ನು (ಪೂರ್ಣರೂಪ) 6 ನಿಮಿಷ ಏಕಕಾಲದಲ್ಲಿ ಹಾಡಿ ದಾಖಲೆ ಬರೆದರು.
ಇದೇ ಮೊದಲ ಬಾರಿ ಸಂಪೂರ್ಣ ಚರಣಗಳನ್ನು ಹಾಡಲಾಗಿದ್ದು ಈ ಹಿಂದೆ ಆಯ್ದ ಚರಣಗಳನ್ನು ಮಾತ್ರ ದೊಡ್ಡ ಸಂಖ್ಯೆಯಲ್ಲಿ ಸೇರಿ ಹಾಡಲಾಗಿತ್ತು. ಆದರೆ ಇಲ್ಲಿವರೆಗೂ ಸಂಪೂರ್ಣ ಗೀತೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಹಾಡಿರುವ ದಾಖಲೆಗಳಿಲ್ಲ ಎನ್ನಲಾಗಿದೆ. ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿ ಸಂತೋಷ್ ಅಗರ್ವಾಲ್ ಅವರು ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ಸಂವೇದನ ಸಂಸ್ಥೆಗೆ ಹಸ್ತಾಂತರಿಸಿದರು.
ದೇಶಭಕ್ತಿ ಮೈಗೂಡಿಸಿಕೊಳ್ಳಿ
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ| ಜಿ. ಶಂಕರ್ ಅವರು ಸಂವೇದನಾ ಫೌಂಡೇಶನಿನ ಲಾಂಛನವನ್ನು ಬಲೂನ್ ಮೂಲಕ ಮೇಲೆ ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವಕ ಮತ್ತು ಯುವತಿಯರು ಸಶಕ್ತೀಕರಣದತ್ತ ಹೆಜ್ಜೆ ಹಾಕಿ ದೇಶಭಕ್ತಿ ಮೈಗೂಡಿಸಿಕೊಳ್ಳಬೇಕು. ಸಂವೇದನ ಸಂಸ್ಥೆಯ ಈ ಯುವ ತಂಡ ಒಳ್ಳೆಯ ಮಾರ್ಗದಲ್ಲಿ ನಡೆದು ಭವ್ಯ ಭಾರತ ನಿರ್ಮಾಣ ಮಾಡುವಲ್ಲಿ ಮುಂದಾಗಬೇಕು ಎಂದು ಅವರು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಈ ಕಾರ್ಯಕ್ರಮದಿಂದ ಜಗತ್ತಿಗೆ ಸಂದೇಶವನ್ನು ಸಾರುವ ಕೆಲಸ ಆಗಿದೆ. ವಿವೇಕಾನಂದರ ಸ್ಫೂರ್ತಿಯಿಂದ ದೇಶವನ್ನು ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ಒಂದಾಗಿ ನಮ್ಮನ್ನು ತೊಡಗಿಸಿಕೊಳ್ಳುವಂತಾಗಲಿ ಎಂದರು.
ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಮೆಂಡನ್, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕುಯಿಲಾಡಿ ಸುರೇಶ್ ನಾಯಕ್, ಕೆ. ಉದಯ ಕುಮಾರ್ ಶೆಟ್ಟಿ, ವಸಂತ ಕಾಂಚನ್, ಸಾಧು ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಸದಾನಂದ ಸಾಲ್ಯಾನ್, ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಸುದೇಶ್ ಶೆಟ್ಟಿ, ಪ್ರಮುಖ ಗಾಯಕರಾದ ರಮೇಶ್ಚಂದ್ರ, ಕೆ. ಸುರೇಖಾ, ರವೀಂದ್ರ ಪ್ರಭು, ಜಗದೀಶ್ ಶೆಟ್ಟಿ, ಸುಹಾನ ಸೈಯದ್, ನಿಖೀಲ್ ತಾವೆÅ, ಯಶವಂತ್ ಎನ್.ಜಿ., ದಿವ್ಯಾ ರಾಮಚಂದ್ರ, ರಾಜೇಶ್ ಶ್ಯಾನುಬೋಗ್, ಕಿಶೋರ್ ಪೆರ್ಲ, ಮಲ್ಲಿಕಾ ಶೆಟ್ಟಿ, ರೂಪಾ ಪ್ರಕಾಶ್, ರಜತ್ ಹೆಗ್ಡೆ, ದಿನೇಶ್ ಕಿನ್ನಿಗೋಳಿ, ಪಂಚಮಿ ಮತ್ತಿತರರು ಪಾಲ್ಗೊಂಡಿದ್ದರು.
ಆಕರ್ಷಕ ಶೋಭಾಯಾತ್ರೆ
ಸಭಾ ಕಾರ್ಯಕ್ರಮಕ್ಕೆ ಮೊದಲು ಮಲ್ಪೆ ಗಾಂಧಿ ಶತಾಬ್ದ ಮೈದಾನದಿಂದ ಮಲ್ಪೆ ಬಸ್ ನಿಲ್ದಾಣದ ಮೂಲಕ ಮಲ್ಪೆ ಬೀಚ್ವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಆಂಧ್ರಪ್ರದೇಶದ ಸಹಾರಾ ರೇಡಿಯನ್ಸ್ ಸೊಸೈಟಿ ತಯಾರಿಸಿದ ಸುಮಾರು 1750 ಅಡಿ ಉದ್ದ 9 ಅಡಿ ಅಗಲದ ತಿರಂಗ ಧ್ವಜದ ಜತೆಗೆ ವಿದ್ಯಾರ್ಥಿಗಳು, ಗಾಯಕರು ಹೆಜ್ಜೆ ಹಾಕಿದರು. ವಿವಿಧ ಭಜನ ಮಂದಿರ, ಸಂಘ ಸಂಸ್ಥೆಗಳ ಸದಸ್ಯರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ದೇಶ ಭಕ್ತಿ, ರಾಷ್ಟ್ರ ಜಾಗೃತಿ ಸಂದೇಶ ಸಾರುವ ವಿವಿಧ ಟ್ಯಾಬ್ಲೊಗಳ, ಚೆಂಡೆ ಕುಣಿತ, ಬ್ಯಾಂಜಿಯೋ ಶೋಭಾಯಾತ್ರೆಗೆ ಮೆರುಗನ್ನು ನೀಡಿತು.
ಅರುಣ್ ಕಲ್ಯಾಣಪುರ ಸ್ವಾಗತಿಸಿದರು. ಸಂವೇದನ ಫೌಂಡೇಶನಿನ ಪ್ರಕಾಶ್ ಮಲ್ಪೆ ಮತ್ತು ಪ್ರಶಾಂತ್ ತಿಂಗಳಾಯ ಪ್ರಸ್ತಾವನೆಗೈದರು.ದಾಮೋದರ ಮತ್ತು ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ನಿಖೀಲ್ ಸಾಲ್ಯಾನ್ ವಂದಿಸಿದರು.
ವಂದೇ ಮಾತರಂ ವಿಶ್ವದಾಖಲೆ
ಉಡುಪಿ ಒಂದು ಐತಿಹಾಸಿಕ ದಾಖಲೆಗೆ ಕಾರಣವಾಗಿದೆ, ಸಾವಿರಾರು ವಿದ್ಯಾರ್ಥಿಗಳು ಬ್ಯಾಡ್ಜ್ ತೊಟ್ಟು ವಂದೇ
ಮಾತರಂ ಗೀತೆ ಹಾಡಿದ್ದಾರೆ. ಹಿಂದೆಂದು ಈ ರೀತಿ ದೊಡ್ಡ ಮಟ್ಟದ, ವ್ಯವಸ್ಥಿತ ಗಾಯನ ಕಾರ್ಯಕ್ರಮ ನಡೆದಿರಲಿಲ್ಲ.
– ಸಂತೋಷ್ ಅಗರ್ವಾಲ್, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನ ವ್ಯವಸ್ಥಾಪಕ