ಮಣಿಪಾಲಕ್ಕೆ ಬರಲಿದೆ ರಾಜ್ಯದ ಮೊದಲ ಸ್ಕಿನ್ ಬ್ಯಾಂಕ್
Team Udayavani, Aug 2, 2019, 9:42 AM IST
ಉಡುಪಿ: ಸ್ಕಿನ್ ಬ್ಯಾಂಕ್ ಈಗಾಗಲೇ ಜಾಗತಿಕವಾಗಿ ಚಾಲ್ತಿಯಲ್ಲಿದ್ದರೂ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ನೂತನವೇ. ಸ್ಕಿನ್ ಬ್ಯಾಂಕ್ ವಿವಿಧ ಚಿಕಿತ್ಸಾ ಸಂದರ್ಭಗಳಲ್ಲಿ ಕಸಿಗಾಗಿ ಮಾನವ ಚರ್ಮವನ್ನು ಒದಗಿಸುವ ಸಂಗ್ರಹಾಗಾರ. ಅಂತಾರಾಷ್ಟ್ರೀಯ ಸ್ತರಕ್ಕೇರಿರುವ ಮಣಿಪಾಲದಲ್ಲಿ ಸದ್ಯದಲ್ಲಿಯೇ ಸ್ಕಿನ್ ಬ್ಯಾಂಕ್ ತಲೆ ಎತ್ತಲಿದೆ. ರೋಟರಿ ಸಹಾಯದಿಂದ ಆರಂಭವಾಗಲಿರುವ ಇದರ ಪೂರ್ಣ ಹೆಸರು “ರೋಟರಿ ಮಾಹೆ ಸ್ಕಿನ್ ಬ್ಯಾಂಕ್ ಮಣಿಪಾಲ’.
ಮುಂಬಯಿಯ ಐರೋಲಿಯಲ್ಲಿರುವ ಸ್ಕಿನ್ ಬ್ಯಾಂಕ್ ದೇಶದಲ್ಲಿ ಅತಿ ಹಿರಿದು. ಒಂದು ವರ್ಷದ ಹಿಂದಷ್ಟೆ ಚೆನ್ನೈಯಲ್ಲಿ ಇಂಥದ್ದೇ ಒಂದು ಸ್ಥಾಪನೆಗೊಂಡಿದೆ. ದಕ್ಷಿಣ ಭಾರತದ ಮತ್ತೆಲ್ಲಿಯೂ ಇಲ್ಲ. ಸ್ಕಿನ್ ಬ್ಯಾಂಕ್ ಸ್ಥಾಪಿಸುವುದಕ್ಕಿಂತಲೂ ಅದರ ನಿರ್ವಹಣೆ ಕಷ್ಟದಾಯಕ. ಸುಸಜ್ಜಿತ ಆಸ್ಪತ್ರೆಗಳಿಗೆ ಮಾತ್ರ ಇದು ಸಾಧ್ಯವಾಗುತ್ತದೆ.
ಮೊತ್ತಮೊದಲಾಗಿ ಈ ಯೋಜನೆ ಅಗತ್ಯ ಎಂದು ಕಂಡುಬಂದದ್ದು ರೋಟರಿ ಕ್ಲಬ್ ಮಣಿಪಾಲ ಟೌನ್ಗೆ. ಯೋಜನೆಯ ಕಲ್ಪನೆ ಮೂಡಿದ್ದು ಮಾಹೆ ವಿ.ವಿ. ಕುಲಪತಿ ಡಾ| ಎಚ್. ವಿನೋದ ಭಟ್ ಮತ್ತು ಸಂಶೋಧನ ನಿರ್ದೇಶಕ ಡಾ| ಎನ್. ಉಡುಪ ಅವರಿಗೆ. ರೋಟರಿಯಲ್ಲಿ ಸ್ಥಳೀಯ ಕ್ಲಬ್ ಕೊಡಮಾಡುವ ಮೊತ್ತದಷ್ಟೇ ಅಂತಾರಾಷ್ಟ್ರೀಯ ರೋಟರಿ ಮ್ಯಾಚಿಂಗ್ ಗ್ರಾಂಟ್ ಕೊಡುತ್ತದೆ. ಮಣಿಪಾಲ ಟೌನ್ ಕ್ಲಬ್ ಯೋಜನೆಗೆ ದೊಡ್ಡ ಮೊತ್ತದ ಹಣಕಾಸು ನೆರವು ಒದಗಿಸಿದವರು ಅಮೆರಿಕದ ವರ್ಜೀನಿಯಾದಲ್ಲಿ ರೋಟರಿ ಸಕ್ರಿಯ ಸದಸ್ಯರಾಗಿರುವ ಪಟ್ಲ ಪೆರ್ಣಂಕಿಲ ಮೂಲದ ದಿನೇಶ ನಾಯಕ್. ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿರುವ ಉಡುಪಿ ಮೂಲದ ರೋಟರಿಯ ಹಿರಿಯ ಸಕ್ರಿಯ ಸದಸ್ಯ ಡಾ| ವಸಂತ ಪ್ರಭು ಸೂಕ್ತ ಮಾರ್ಗದರ್ಶನದೊಂದಿಗೆ ಹಣಕಾಸು ಒದಗಣೆಯನ್ನೂ ಮಾಡಿಕೊಟ್ಟಿದ್ದಾರೆ.
ಹಲವರ ದೇಣಿಗೆ
ದಿನೇಶ್ ನಾಯಕ್ ಅವರು ವೆಸ್ಟ್ರ್ನ್ ಹೆನ್ರಿಕೊ (ಅಂತಾರಾಷ್ಟ್ರೀಯ) ಕ್ಲಬ್ನಿಂದ 47 ಲ.ರೂ. ಮತ್ತು ಡಾ| ವಸಂತ ಪ್ರಭು ಅವರು ಅಮೆರಿಕದ ಪೆನ್ಸಿಲ್ವೇನಿಯಾದ ಸೆಂಟ್ರಲ್ ಚೆಸ್ಟರ್ ಕೌಂಟಿ ರೋಟರಿ ಕ್ಲಬ್ನಿಂದ 16 ಲ.ರೂ., ರೋಟರಿ ಮುಂದಾಳುಗಳಾದ ಅಭಿನಂದನ ಶೆಟ್ಟಿ ಮತ್ತು ಸದಾನಂದ ಚಾತ್ರ ಜಿಲ್ಲಾ ನಿಧಿಯಿಂದ 14 ಲ.ರೂ., ಮಣಿಪಾಲ ಟೌನ್ ಕ್ಲಬ್ನಿಂದ 3 ಲ.ರೂ. -ಹೀಗೆ ಒಟ್ಟು ರೋಟರಿಯಿಂದ 80 ಲ.ರೂ. ಕೊಡುಗೆಯನ್ನು ನೀಡಿದ್ದಾರೆ. ಒಟ್ಟು 1.5 ಕೋ.ರೂ. ಯೋಜನೆಯಲ್ಲಿ 50 ಲ.ರೂ. ಮೊತ್ತವನ್ನು ಮಣಿಪಾಲ ಮಾಹೆ ವಿ.ವಿ. ಭರಿಸಿದೆಯಲ್ಲದೆ ರೋಟರಿ ಫೌಂಡೇಶನ್ಗೆ 24 ಲ.ರೂ. ನೀಡಿದೆ.
ಅತ್ಯಾಧುನಿಕ ಯಂತ್ರೋಪಕರಣ
ಪ್ರತಿವರ್ಷವೂ ಸ್ಕಿನ್ ಬ್ಯಾಂಕ್ ನಿರ್ವಹಣೆಗೆ 30-40 ಲ.ರೂ. ಖರ್ಚು ತಗಲುತ್ತದೆ. ಇಂಕ್ಯುಬೇಟರ್, ಪರೀಕ್ಷಾ ಯಂತ್ರ, – 20 ಡಿಗ್ರಿ ಉಷ್ಣಾಂಶದ ಸ್ಟೋರೇಜ್ ಸೌಲಭ್ಯಕ್ಕಾಗಿ ಅಮೆರಿಕದಿಂದ ಯಂತ್ರೋಪಕರಣ ಆಮದು ಮಾಡಿಕೊಳ್ಳಬೇಕು. ಎರಡು ಪ್ರತ್ಯೇಕ ಆ್ಯಂಬುಲೆನ್ಸ್ ಬೇಕು.
ಹಲವರ ಯೋಗದಾನ
ಸ್ಕಿನ್ ಬ್ಯಾಂಕ್ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಮಾಹೆ ವಿ.ವಿ. ಕುಲಾಧಿಪತಿ ಡಾ| ರಾಮದಾಸ್ ಎಂ. ಪೈ, ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಡಾ| ಎಚ್. ವಿನೋದ ಭಟ್, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ, ಪ್ಲಾಸ್ಟಿಕ್ ಸರ್ಜರಿ ಮತ್ತು ಸುಟ್ಟಗಾಯಗಳ ವಿಭಾಗ ಮುಖ್ಯಸ್ಥ ಡಾ| ಎನ್. ಶ್ರೀಕುಮಾರ್ ಅವರ ಕೊಡುಗೆ ಇದೆ. ರೋಟರಿ ಕ್ಲಬ್ ಮಣಿಪಾಲ ಟೌನ್ ಸದಸ್ಯರಾದ ರೋಟರಿ ಸಹಾಯಕ ಗವರ್ನರ್ ಡಾ| ಶೇಷಪ್ಪ ರೈ, ಡಾ| ಎನ್. ಉಡುಪ, ಡಾ| ಬಸವರಾಜು, ಡಾ|ಸಚ್ಚಿದಾನಂದ ವಿ. ನಾಯಕ್, ಅಧ್ಯಕ್ಷ ಡಾ| ಶ್ರೀಧರ್, ಎಚ್.ಎನ್.ಎಸ್. ರಾವ್, ರಾಜಾರಾಮ ಭಟ್, ಜಿಲ್ಲಾ ಗವರ್ನರ್ ಬಿ.ಎನ್. ರಮೇಶ್ ಅವರ ದೂರಾಲೋಚನೆ, ಕಲ್ಪನಾಶಕ್ತಿ ಇದೆ.
ಚರ್ಮದ ಅಗತ್ಯ ಯಾವಾಗ?
ಚರ್ಮವನ್ನೂ ಅಗತ್ಯವಿದ್ದವರಿಗೆ ಜೋಡಿಸಬಹುದು. ಸುಟ್ಟ ಗಾಯ, ದೊಡ್ಡ ಮಟ್ಟದ ಅಪಘಾತ, ಅಗ್ನಿ ಆಕಸ್ಮಿಕ, ಯುದ್ಧ, ಸ್ಫೋಟ ಸಂಭವಿಸಿದಾಗ ಚರ್ಮ ದೊಡ್ಡ ಪ್ರಮಾಣದಲ್ಲಿ ನಾಶವಾಗುತ್ತದೆ ಅಥವಾ ಹೊಸ ಚರ್ಮ ಬೆಳೆಯದ ಸ್ಥಿತಿ ಇರುತ್ತದೆ. ಇಂತಹ ಸಂದರ್ಭ ಬೇರೊಬ್ಬರ ಚರ್ಮದ ಕಸಿ ಅಗತ್ಯವಾಗುತ್ತದೆ. ಇದಕ್ಕಾಗಿ ರೂಪುಗೊಂಡ ವ್ಯವಸ್ಥೆಯೇ “ಸ್ಕಿನ್ ಬ್ಯಾಂಕ್’.
ಕ್ಷಿಪ್ರ ಪ್ರಕ್ರಿಯೆ-ದೀರ್ಘ ಬಾಳಿಕೆ
ವ್ಯಕ್ತಿ ಮರಣ ಹೊಂದಿದ ಆರು ಗಂಟೆಗಳೊಳಗೆ ಚರ್ಮವನ್ನು ಸಂಸ್ಕರಿಸಿ 24 ಗಂಟೆಯೊಳಗೆ ಸ್ಟೋರೇಜ್ನಲ್ಲಿರಿಸಬೇಕು. ಇದನ್ನು ಮುಂದೆ ಐದು ವರ್ಷಗಳ ವರೆಗೆ ಬಳಸಬಹುದು. 20ರಿಂದ 70 ವರ್ಷದೊಳಗಿನ ಯಾರೇ ಆದರೂ ಚರ್ಮದಾನ ಮಾಡಬಹುದು. ಗಂಭೀರ ಕಾಯಿಲೆ ಇದ್ದವರು, ಚಿಕ್ಕ ಮಕ್ಕಳ ಚರ್ಮಗಳು ಉಪಯುಕ್ತವಲ್ಲ. ದೇಹದ ಎದುರಿನ ಭಾಗ (ಎದೆ, ಹೊಟ್ಟೆ), ಹಿಂಭಾಗ (ಬೆನ್ನು), ತೊಡೆಯ ಭಾಗ -ಹೀಗೆ ದೇಹದ ಮೂರನೆಯ ಒಂದರಷ್ಟು ಭಾಗದ ಚರ್ಮ ಮಾತ್ರ ಉಪಯೋಗಕ್ಕೆ ಬರುತ್ತದೆ.
ಮಣಿಪಾಲದಲ್ಲಿ ಸ್ಥಾಪನೆಯಾಗಲಿರುವ ಸ್ಕಿನ್ ಬ್ಯಾಂಕ್ ಯಶಸ್ವಿಯಾಗ ಬೇಕಾದರೆ ದಾನಿಗಳ ಅಗತ್ಯವಿದೆ. ಕಣ್ಣು, ವಿವಿಧ ಅಂಗಾಂಗಗಳನ್ನು ನೀಡುವಂತೆ ಚರ್ಮವನ್ನೂ ದಾನ ಮಾಡುವ ಪರಿಪಾಠ ಬೆಳೆಯಬೇಕು. ನಿರ್ವಹಣೆಯೂ ದುಬಾರಿಯಾದ ಕಾರಣ ಎಲ್ಲರ ಸಹಕಾರ ಬೇಕು ಎನ್ನುತ್ತಾರೆ ರೋಟರಿ ಮುಂದಾಳು, ಮಾಹೆ ಸಂಶೋಧನ ನಿರ್ದೇಶಕ ಡಾ| ಎನ್. ಉಡುಪ.
ಅಗತ್ಯದ ಬೇಡಿಕೆಗೆ ಸ್ಪಂದನದ ಸಂತೃಪ್ತಿ
1945ರ ಮಹಾಯುದ್ಧವಾ ದಾಗ ಅಲ್ಲಿನ ಗಾಯಾಳುಗಳಿಗಾಗಿ ಸ್ಕಿನ್ ಬ್ಯಾಂಕ್ ಕಲ್ಪನೆ ಮೂಡಿತು. 1950ರಲ್ಲಿ ಅಮೆರಿಕದಲ್ಲಿ, 1970ರ ವೇಳೆ ಯೂರೋಪ್ನಲ್ಲಿ ಸ್ಕಿನ್ ಬ್ಯಾಂಕ್ ಚಾಲ್ತಿಗೆ ಬಂತು. ಮಣಿಪಾಲದಲ್ಲಿ ಒಂದು ಸ್ಕಿನ್ ಬ್ಯಾಂಕ್ನ ಬೇಡಿಕೆಗೆ ಅನುಗುಣವಾಗಿ ಕಾರ್ಯಪ್ರವೃತ್ತ ನಾದೆ. ರೋಟರಿಯಲ್ಲಿ ಇಂತಹ ಯೋಜನೆಗಳನ್ನು ಜಾರಿಗೊಳಿಸುವುದಾದರೆ ಸ್ಥಳೀಯ ಕ್ಲಬ್ಗ ರೋಟರಿ ಫೌಂಡೇಶನ್ ಮ್ಯಾಚಿಂಗ್ ಗ್ರಾಂಟ್ ಕೊಡುತ್ತದೆ. ನಮ್ಮ ಊರಿನಲ್ಲಿ ಇಂತಹ ಅಗತ್ಯ ಪೂರೈಸುವಲ್ಲಿ ನನಗೂ ಅವಕಾಶ ಸಿಕ್ಕಿರುವುದಕ್ಕೆ ತೃಪ್ತಿ ಇದೆ.
– ದಿನೇಶ ನಾಯಕ್
ಪಾಕ್, ಅಫ್ಘಾನ್ನಲ್ಲೂ ಯೋಜನೆ
ಪಾಕಿಸ್ಥಾನ, ಅಪಾನಿಸ್ಥಾನ, ಬಾಂಗ್ಲಾದೇಶ ಸಹಿತ 14 ದೇಶ ಗಳಲ್ಲಿ 120 ಯೋಜನೆಗಳನ್ನು ಕಾರ್ಯ ಗತಗೊಳಿಸಿದ್ದೇನೆ. ಆರೋಗ್ಯ, ಶಿಕ್ಷಣ, ಕುಡಿ ಯುವ ನೀರು, ನೈರ್ಮಲ್ಯ ಈ ಮಾನವೀಯ ವಿಷಯಗಳಲ್ಲಿ ಸುಮಾರು 14 ಕೋ.ರೂ. ಯೋಜನೆಗಳನ್ನು ಕಾರ್ಯಗತ ಗೊಳಿಸಿದ್ದೇನೆ. ಶಿರಸಿಯಲ್ಲಿ ಇತ್ತೀಚೆಗೆ 55 ಲ.ರೂ. ಮೊತ್ತದಲ್ಲಿ ಮಳೆ ನೀರು ಕೊಯ್ಲು ಕಾರ್ಯಗತಗೊಂಡಿದೆ. ರೋಟರಿಯಲ್ಲಿ ಆತಿಥೇಯ ಕ್ಲಬ್ ಯೋಜನೆಗೆ ಜಾಗತಿಕ ಮಟ್ಟದ ಇನ್ನೊಂದು ಕ್ಲಬ್ ಅನುದಾನ ಭರಿಸುತ್ತದೆ. ಈಗ ಸ್ಕಿನ್ ಬ್ಯಾಂಕ್ಗೆ ಸಹಕಾರ ಕೊಡುತ್ತಿದ್ದೇನೆ.
– ಡಾ| ವಸಂತ ಪ್ರಭು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ