ಮಣಿಪಾಲ: ಹೆದ್ದಾರಿ ಬದಿ ಮಣ್ಣು ಕುಸಿತ; ಆತಂಕ
Team Udayavani, Aug 22, 2019, 5:30 AM IST
ಸಿಂಡಿಕೇಟ್ ಸರ್ಕಲ್ನಿಂದ ಕೆಳಕ್ಕೆ ಬರುವಲ್ಲಿ ಗುಡ್ಡದ ಮಣ್ಣು ಕುಸಿದಿರುವುದು.
ಉಡುಪಿ: ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎಯ ಮಣಿಪಾಲ ಲಕ್ಷ್ಮೀಂದ್ರನಗರದ ಚಿತ್ರಮಂದಿರ ಎದುರಿನ ಭಾಗದಲ್ಲಿ ಸಿಂಡಿಕೇಟ್ ಸರ್ಕಲ್ನಿಂದ ಕೆಳಕ್ಕೆ ಬರುವಲ್ಲಿ ಗುಡ್ಡದ ಮಣ್ಣು ಕುಸಿದು ವಾಹನ ಚಾಲಕರಲ್ಲಿ ಆತಂಕ ಮೂಡಿದೆ.
ಬುಧವಾರ ಸಂಜೆ ವೇಳೆ ಮಣ್ಣು ಕುಸಿದು ಚರಂಡಿಗೆ ಬಿದ್ದಿದೆ. ಈ ಗುಡ್ಡದಲ್ಲಿ ಮರಗಳು ಕೂಡ ಇವೆ. ಸ್ವಲ್ಪ ದೂರದಲ್ಲೇ ಕಟ್ಟಡಗಳೂ ಇವೆ. ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಪ್ರದೇಶ ಅಪಾಯಕಾರಿಯಾಗಿದೆ. ಮಣ್ಣು ಮರ ಸಮೇತ ವಾಹನಗಳ ಮೇಲೆ ಬೀಳುವ ಅಪಾಯವಿದೆ. ಅಲ್ಲದೆ ಮಳೆನೀರು ಚರಂಡಿ ಬ್ಲಾಕ್ ಆಗಿ ಮಳೆ ನೀರು ರಸ್ತೆ ಮೇಲೆ ಪ್ರವಹಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.
“ವಿಸ್ತಾರಗೊಳ್ಳಲಿದೆ’
“ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು ಈ ಭಾಗದಲ್ಲಿ ಇನ್ನೂ ಕೂಡ ಎರಡು ಬದಿಗೆ ರಸ್ತೆ ವಿಸ್ತಾರಗೊಳ್ಳಲಿದೆ. ಗುಡ್ಡ ಇರುವ ಭಾಗದಲ್ಲಿ ಸುಮಾರು 6 ಮೀಟರ್ನಷ್ಟು ಅಗಲಕ್ಕೆ ವಿಸ್ತಾರಗೊಳ್ಳಲಿದೆ. ಭೂ ಸ್ವಾಧೀನ ನಡೆಸಿ ವಿಸ್ತರಿಸಲಾಗುವುದು. ಮಣ್ಣು ಕುಸಿದ ಪ್ರದೇಶವನ್ನು ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೆದ್ದಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.