ಮಣಿಪಾಲ ಎಸ್ಒಸಿ: ಆರ್ಟಿಕಲ್ 19
Team Udayavani, Feb 9, 2018, 12:50 PM IST
ಉಡುಪಿ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬೆಳೆಯಲು ಆತ್ಮಸ್ಥೈರ್ಯ, ಅಧಿಕ ಜನಸಂಪರ್ಕ, ಬಹು ಭಾಷೆಗಳ ಮೇಲೆ ಹಿಡಿತ ಮೊದಲಾದವು ಅವಶ್ಯ ಎಂದು ಪತ್ರಕರ್ತೆ ವಸಂತಿ ಹರಿಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ಫೆ. 8ರಂದು ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್ (ಎಸ್ಒಸಿ)ನಲ್ಲಿ ಆರಂಭಗೊಂಡ “ಆರ್ಟಿಕಲ್ 19′ ವಿಶೇಷ ಉಪನ್ಯಾಸ, ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿ, ವಿಚಾರಗಳ ಕುರಿತಾದ ಕುತೂಹಲ, ಜ್ಞಾನ ಮತ್ತು ಇದಕ್ಕೆ ಪೂರಕವಾದ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಅವರು ಹೇಳಿದರು.
ಎಸ್ಒಸಿ ನಿರ್ದೇಶಕಿ ಡಾ| ಪದ್ಮರಾಣಿ ಸ್ವಾಗತಿಸಿದರು. ಪತ್ರಕರ್ತ ರಾಜೀವ್ ಭಟ್ಟಾಚಾರ್ಯ ಅವರು “ಈಶಾನ್ಯ ರಾಜ್ಯಗಳಲ್ಲಿ ಪ್ರಸ್ತುತ ಮಾಧ್ಯಮಗಳ ಕಾರ್ಯನಿರ್ವಹಣೆ’ ಕುರಿತು ಮಾತನಾಡಿದರು. ಉಪನ್ಯಾಸಕರಾದ ಪ್ರಸೀದ್ ನಾಯರ್ ಮತ್ತು ಶ್ರುತಿ ಶೆಟ್ಟಿ ಉಪಸ್ಥಿತರಿದ್ದರು. ಪ್ರೊ| ಪದ್ಮ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಸುಬ್ರಹ್ಮಣ್ಯ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.