ಪರ್ಸಿನ್ ಮೀನುಗಾರರಿಗೆ ಮತ್ಸ್ಯ ಸಂಕಟ!
Team Udayavani, Oct 21, 2019, 5:45 AM IST
ಮಲ್ಪೆ: ಮೀನುಗಾರಿಕೆ ಋತು ಆರಂಭಗೊಂಡು ಸರಿಸುಮಾರು ಮೂರು ತಿಂಗಳು ಕಳೆಯುತ್ತಾ ಬಂದರು ಪರ್ಸಿನ್ ಮೀನುಗಾರರ ಬಲೆಗೆ ಮಾತ್ರ ಸರಿಯಾದ ಪ್ರಮಾಣದಲ್ಲಿ ಬೀಳುತ್ತಿಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇಲ್ಲಿಯವರೆಗೆ ಒಂದೊಂದು ಪರ್ಸಿನ್ ಬೋಟಿಗೆ ಕನಿಷ್ಟ ಶೇ. 15ರಷ್ಟು ಆದಾಯ ಬಂದಿಲ್ಲ . ಹಾಗಾಗಿ ಬಹುತೇಕ ಶೇ.80ರಷ್ಟು ಪಸೀìನ್ ಬೋಟುಗಳು ಬಂದರಿನಲ್ಲೇ ಠಿಕಾಣಿ ಹೂಡಿದೆ.
ಕಾರಣವೇನು..?
ಪರ್ಸಿನ್ ಮೀನುಗಾರರಿಗೆ ಪ್ರಮುಖವಾಗಿ ಸಮುದ್ರ ನೀರಿನ ಉಷ್ಣಾಂಶ ಇನ್ನೂ ಇಳಿಮುಖವಾಗಿಲ್ಲ. ಹಾಗಾಗಿ ಆಳದಲ್ಲಿರುವ ಮೀನು ಮೇಲಕ್ಕೆ ಬರುತ್ತಿಲ್ಲ ಎಂಬುದು ಒಂದು ಕಾರಣವಾದರೆ, ಪ್ರಾಕೃತಿಕ ವೈಪರೀತ್ಯಾ, ಕೈಗಾರಿಕಾ ಘಟಕಗಳು ಹೊರ ಸೂಸುವ ತ್ಯಾಜ್ಯ ಸಮುದ್ರ ಸೇರುವುದರಿಂದಲೂ ಮೀನಿನ ಪ್ರಮಾಣವೂ ಗಣನೀಯವಾಗಿ ಕುಸಿಯಲು ಕಾರಣ ಎನ್ನಲಾಗುತ್ತಿದೆ.
ಮನೆಗೆ ಮರಳಿದ ಕಾರ್ಮಿಕರು
ಮಲ್ಪೆ ಬಂದರು ಸೇರಿದಂತೆ ರಾಜ್ಯದಲ್ಲಿ ಒಟ್ಟು 700ರಿಂದ 750 ಪರ್ಸಿನ್ ಬೋಟ್ಗಳು ಇವೆ. ಒಂದೊಂದು ಬೋಟಿನಲ್ಲಿ ಸುಮಾರು 35ರಿಂದ 40ಮಂದಿ ಕಾರ್ಮಿಕರು ಇದ್ದಾರೆ. ಹೆಚ್ಚಾಗಿ ಇದರಲ್ಲಿ ಜಾರ್ಖಂಡ್, ಒಡಿಶಾ ರಾಜ್ಯಗಳಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಮೀನುಗಾರಿಕೆ ಇರಲಿ ಇಲ್ಲದಿರಲಿ ಆವರಿಗೆ ವೇತನ ಪಾವತಿ ಮಾಡಲೇ ಬೇಕು. ಪ್ರತಿನಿತ್ಯ ಹೋಗಿ ಬರುವ ಪರ್ಸಿನ್ ಬೋಟು ಒಮ್ಮೆ ಸಮುದ್ರಕ್ಕೆ ಹೋದರೆ ಡಿಸೇಲ್, ಬೋನಸ್, ಇನ್ನಿತರ ವೆಚ್ಚ ಸೇರಿದಂತೆ ಕನಿಷ್ಟ 25ಸಾವಿರ ರೂಪಾಯಿ ಖರ್ಚು ಇದೆ. ಮೀನುಗಾರಿಕೆ ಹೋದ ಬೋಟುಗಳಿಗೆ ಬರಿಗೈಯಲ್ಲಿ ವಾಪಾಸಾಗುತ್ತಿರುವುದರಿಂದ ಪರ್ಸಿನ್ ಮೀನುಗಾರರಾರು ಕಡಲಿಗಿಳಿಯುತ್ತಿಲ್ಲ. ಹಾಗಾಗಿ ಕೆಲಸವಿಲ್ಲದ ಹೊರರಾಜ್ಯದ ಕಾರ್ಮಿಕರು ಊರಿಗೆ ತೆರಳಿ ಬೇರೆ ಕೆಲಸ ನೋಡುತ್ತಿದ್ದಾರೆ.
ಶೇ.40 ಬೋಟುಗಳು ಇನ್ನೂ ಕಡಲಿಗಿಳಿದಿಲ್ಲ
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15ರಷ್ಟು ಮೀನುಗಾರಿಕೆ ಆಗಿದ್ದು ಅದೂ ಕೂಡ 15-20ಬೋಟುಗಳಿಗೆ ಮಾತ್ರ. ಮಲ್ಪೆ ಬಂದರಿನಲ್ಲಿ ಸುಮಾರು 140 ಪರ್ಸಿನ್ ಬೋಟುಗಳಿದ್ದು ಈ ಬಾರಿಯ ವಾತಾವರಣವನ್ನು ಮನಗಂಡು ಶೇ.40ರಷ್ಟು ಪರ್ಸಿನ್ ಬೋಟುಗಳು ಋತು ಆರಂಭಗೊಂಡಂದಿನಿಂದಲೂ ಕಡಲಿಗೆ ಇಳಿಯಲು ಮನ ಮಾಡಿಲ್ಲ.
ನೀರು ತಂಪಾಗಬೇಕು
ಈ ಬಾರಿ ಮಳೆಗಾಲದಲ್ಲಿ ಹೆಚ್ಚು ಮಳೆಯಾಗಿ ಹೊಳೆನೀರು ಸಮುದ್ರ ಸೇರಿತ್ತು. ಆದರೆ ಬೀಸುವ ಗಾಳಿಯಲ್ಲಿ ವ್ಯತ್ಯಾಸವಾಗಿದ್ದರಿಂದ ಸಮುದ್ರದ ನೀರು ತಂಪಾಗಿಲ್ಲ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಗಾಳಿ ಉತ್ತರಾಭಿಮುಖವಾಗಿ ಬೀಸಿದರೆ ನೀರಿನ ಉಷ್ಣಾಂಶ ಕಡಿಮೆಯಾಗುತ್ತದೆ. ಈ ಬಾರಿ ದಕ್ಷಿಣಾಭಿಮುಖವಾಗಿ ಗಾಳಿ ಬೀಸುತ್ತಿದ್ದು ನೀರಿನ ಉಷ್ಣಾಂಶ ಇನ್ನೂ ಇಳಿಮುಖವಾಗಿಲ್ಲ. ನೀರು ತಂಪಾಗದೇ ಆಳದಲ್ಲಿರುವ ಮೀನುಗಳು ಸಮುದ್ರದ ಮೇಲ್ಮಟ್ಟಕ್ಕೆ ಬರುತ್ತಿಲ್ಲ. ಸಮುದ್ರದ ತಳಭಾಗದಲ್ಲೇ ಸಂಚರಿಸುವುದರಿಂದ ಪರ್ಸಿನ್ ಮೀನುಗಾರರಿಗೆ ಮೀನು ಲಭಿಸುತ್ತಿಲ್ಲ ಎಂಬ ಅಭಿಪ್ರಾಯವೂ ಹಿರಿಯ ಮೀನುಗಾರರಲ್ಲಿದೆ.
ಇಂಥ ಸ್ಥಿತಿ ಇದೇ ಮೊದಲು
ಪರ್ಸಿನ್ ಬೋಟನ್ನು ಹೊರತುಪಡಿಸಿ ಉಳಿದ ಎಲ್ಲ ವರ್ಗದ ಬೋಟುಗಳಿಗೆ ತಕ್ಕಮಟ್ಟಿಗೆ ಮೀನಿನ ಲಭ್ಯತೆ ಇದೆ. ಸಾಮಾನ್ಯವಾಗಿ ಬಂಗುಡೆ, ಬೂತಾಯಿ, ಕೋಡುಬತ್ತಿ, ಪಾಂಪ್ರಟ್ ಮೊದಲಾದ ಮೀನು ದೊರೆತು ಈ ವೇಳೆ ಉತ್ತಮ ಮೀನುಗಾರಿಕೆ ಆಗುತ್ತಿತ್ತು. ಈ ಬಾರಿ ನಮಗೆ ಬೋಟನ್ನು ಕಟ್ಟಿಡುವ ಪರಿಸ್ಥಿತಿ ಬಂದಿದೆ. ಕಳೆದ 40 ವರ್ಷದಿಂದ ಪರ್ಸಿನ್ ಮೀನುಗಾರರಿಕೆ ಈ ರೀತಿಯ ಸಂಕಷ್ಟದ ಪರಿಸ್ಥಿತಿ ಬಂದೊದಗಿದ್ದು ಇದೇ ಮೊದಲು.
– ನವೀನ್ ಕೋಟ್ಯಾನ್, ಜತೆ ಕಾರ್ಯದರ್ಶಿ, ಮಲ್ಪೆ ಪರ್ಸಿನ್ ಮೀನುಗಾರರ ಸಂಘ
ಸರಕಾರ ಪರಿಹಾರ ನೀಡಲಿ
ಮೀನಿನ ಕೊರತೆಯಿಂದಾಗಿ ಪರ್ಸಿನ್ ಮೀನುಗಾರರಿಗೆ ಆದಾಯ ಇಲ್ಲವಾಗಿದೆ. ಇದರಿಂದ ಮೀನುಗಾರ ಕುಟುಂಬಗಳಿಗೆ ತೊಂದರೆ ಉಂಟಾಗಿದೆ. ಬ್ಯಾಂಕ್ ಸಾಲದ ಬಡ್ಡಿ ಕಟ್ಟುವುದು ಕಷ್ಟವಾಗಿದೆ. ಕಾರ್ಮಿಕ ಕುಟುಂಬಗಳು ದಿನನಿತ್ಯ ಖರ್ಚಿಗೆ ಇನ್ನೊಬ್ಬರ ಬಳಿ ಕೈ ಚಾಚುವಂತಾಗಿದೆ. ಸರಕಾರ ಪರಿಹಾರ ಕೊಡುವ ಬಗ್ಗೆ ಯೋಚನೆ ಮಾಡಬೇಕು ಎಂಬುದು ಮೀನುಗಾರರ ಆಗ್ರಹವಾಗಿದೆ.
– ಯಶೋಧರ ಅಮೀನ್, ಅಧ್ಯಕ್ಷರು, ಮಲ್ಪೆ ಪಸೀìನ್ ಮೀನುಗಾರರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್