ಉಡುಪಿಯಲ್ಲಿ ಜೂನ್ 7 ರ ಬಳಿಕ ಮತ್ತೆ ಲಾಕ್ ಡೌನ್ ಅಗತ್ಯವಿಲ್ಲ : ಶಾಸಕ ರಘುಪತಿ ಭಟ್
Team Udayavani, May 30, 2021, 4:20 PM IST
ಉಡುಪಿ: ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗಿದೆ. ಜೂನ್ ಏಳರವರೆಗೆ ರೇಟ್ 10 ಆಗಬೇಕು. ನಮ್ಮಲ್ಲಿ ಕೋವಿಡ್ ಒಂದು ಹಂತದವರೆಗೆ ನಿಯಂತ್ರಣದಲ್ಲಿರವುದರಿಂದ ಜೂನ್ 7 ರ ಬಳಿಕ ಲಾಕ್ ಡೌನ್ ಅಗತ್ಯವಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಈ ಕುರಿತು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಜೂನ್ 7 ರ ನಂತರ ಸಂಪೂರ್ಣ ಲಾಕ್ ಡೌನ್ ಆಗತ್ಯ ಇಲ್ಲ. ಉಡುಪಿ ಜಿಲ್ಲೆಯಲ್ಲಿ 18- 19 ಪರ್ಸೆಂಟ್ ಪಾಸಿಟಿವಿಟಿ ರೇಟ್ ಇದೆ. ಸಾರ್ವಜನಿಕ ಸಭೆ- ಸಮಾರಂಭ, ಓಡಾಟ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಕಿದರೆ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದರು.
ಈಗಾಗಲೇ ಜನರ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಲಾಕ್ ಡೌನ್ ನಿಂದ ಜನರಲ್ಲಿ ಸೋಂಕಿನ ಬಗ್ಗೆಜಾಗೃತಿ ಮೂಡಿದೆ. ಮುಂದಿನ ಮೂರು ತಿಂಗಳು ಎಲ್ಲಾ ಸಭೆ ಸಮಾರಂಭಗಳಿಗೆ ನಿರ್ಬಂಧ ಹಾಕಿದರೆ ಒಳಿತು. ಮತ್ತೆ ಲಾಕ್ ಡೌನ್ ಮುಂದುವರೆಸಿದರೆ ಯಾವುದೇ ಉಪಯೋಗವಿಲ್ಲ ಎಂದರು.
ಪಾಸಿಟಿವಿಟಿ ರೇಟ್ ಹೆಚ್ಚು ಇದ್ದ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಬಹುದು.ಕೋವಿಡ್ ಕಂಟ್ರೋಲ್ ಗೆ ಬರುತ್ತಿರುವುದು ನಮ್ಮ ಪ್ರಯತ್ನದಿಂದ ಅಲ್ಲ. ಸಾಂಕ್ರಾಮಿಕ ರೋಗ ಒಂದು ಬಾರಿ ಎಲ್ಲಾ ಕಡೆ ವ್ಯಾಪಿಸಿದೆ. ಸ್ಟ್ರಾಂಗ್ ಇಮ್ಯೂನಿಟಿಯಿಂದ ಈಗ ತನ್ನಿಂದ ತಾನೇ ಕೋವಿಡ್ ಕಂಟ್ರೋಲಿಗೆ ಬಂದಿದೆ ಎಂದು ಹೇಳಿದರು.
ಜನ ಲಾಕ್ ಡೌನ್ ಮುಗಿಯಿತು ಎಂದು ಮೈಮರೆಯಬಾರದು. ಶೇಕಡ 70 ವ್ಯಾಕ್ಸಿನೇಷನ್ ಆಗುವವರೆಗೆ ಜನ ಬಹಳ ಜಾಗೃತಿಯಾಗಿರಲೇಬೇಕು ಎಂದು ಹೇಳಿದ್ದಾರೆ.