ಪೋಷಕರೇ ಗಮನಿಸಿ: ಮಕ್ಕಳ ಕೈಯಲ್ಲಿದೆ ಮೊಬೈಲ್ ಗೇಮ್ ನಿಧಾನ ವಿಷ
Team Udayavani, Mar 31, 2018, 6:10 AM IST
ಪ್ರೌಢಶಾಲಾ ಹಂತದ ಮಕ್ಕಳಲ್ಲಿ ಮೊಬೈಲ್ ಗೀಳು ಜಾಸ್ತಿ. ಅದೂ ಸುಲಭವಾಗಿ ಲಭ್ಯ. ಪರೀಕ್ಷೆಗಳು ಮುಗಿದು ರಜೆ ಆರಂಭವಾಗುವಾಗ ಈವರೆಗೆ ಮಕ್ಕಳಿಗೆ ಮೊಬೈಲ್ ಕೊಡದಿದ್ದವರು ರಜೆಯಲ್ಲಾದರೂ ಒಂದಷ್ಟು ಹೊತ್ತು ಕಳೆಯಲಿ ಎಂದು ಉದಾರವಾಗುತ್ತಿದ್ದಾರೆ. ಆದರೆ ಹೆತ್ತವರೇ ಗಮನಿಸಿ, ಕೆಲವು ಮೊಬೈಲ್ ಗೇಮ್ಗಳು ತೀರಾ ಅಪಾಯಕಾರಿಯಾಗಿವೆ. ಮಕ್ಕಳೇ ಕೈಗೆ ಸಿಗದಂತೆ ಆಗುವ ಮೊದಲು ಮಕ್ಕಳಿಗೆ ಮೊಬೈಲ್ ಸಿಗದಂತೆ ಮಾಡಿ.
ಕುಂದಾಪುರ: ಪ್ರಾಣೋತ್ಕ್ರಮಣ ಸ್ಥಿತಿಗೆ ಒಯ್ಯುತ್ತಿದ್ದ ಮೊಬೈಲ್ನ ಬ್ಲೂವೇಲ್ ಗೇಮ್ ಭಾರತದಲ್ಲಿ ನಿಷೇಧವಾಗಿದ್ದರೂ ಅದೇ ಮಾದರಿಯಲ್ಲಿ ಅಪಾಯದ ಉಚ್ಛ್ರಾಯದ ಸ್ಥಿತಿಗೆ ಕೊಂಡೊಯ್ಯುವ ಇನ್ನಷ್ಟು ಗೇಮ್ಗಳಿವೆ. ಇವು ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತಿವೆ. ಅಂತಹ ಕೆಲವು ಘಟನೆಗಳು ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ನಡೆದಿದ್ದು, ಶಿಕ್ಷಕರು, ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ. ಮಾದಕ ದ್ರವ್ಯ ವ್ಯಸನಕ್ಕಿಂತ ಅಧಿಕವಾಗಿ ಮೊಬೈಲ್ ಗೇಮ್ ಬಾಧಿಸುತ್ತಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇಂತಹ ಗೇಮ್ಗಳ ಕುರಿತು ಮಕ್ಕಳು ‘ಅತಿಯಾಗಿ ಆಡತೊಡಗಿದ್ದರಿಂದ’ ಕೆಲವು ಶಿಕ್ಷಣ ಸಂಸ್ಥೆಗಳು ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಮನಶ್ಯಾಸ್ತ್ರಜ್ಞರನ್ನು ನೇಮಿಸಿಕೊಳ್ಳಲು ಮುಂದಾಗಿವೆ. ಮೊಬೈಲ್ ಗೇಮ್ ವ್ಯಸನಕ್ಕೆ ಒಳಗಾದ ಅನೇಕರು ಮನೋ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿರುವ ಬೆಚ್ಚಿ ಬೀಳಿಸುವ ಅಂಕಿಅಂಶಗಳಿವೆ.
ಬೆಳಕಿಗೆ ಬಂದ ಘಟನೆ : ಆತ 9ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ. ಪರೀಕ್ಷೆಗಳಲ್ಲಿ 95 ಕ್ಕಿಂತ ಕಡಿಮೆ ಅಂಕ ಪಡೆದದ್ದೇ ಇಲ್ಲ. ಆದರೆ ಬರಬರುತ್ತಾ ಆತನ ಆದ್ಯತೆಗಳು ಬದಲಾದವು. ಪರೀಕ್ಷೆಯಲ್ಲಿ 25 ಅಂಕ ಗಳಿಸುವುದೂ ಕಷ್ಟವಾಯಿತು. ಶಿಕ್ಷಕರು ಕೂಲಂಕಷವಾಗಿ ಗಮನಿಸಿದಾಗ ಆತನಿಗೆ ಮೊಬೈಲ್ ಗೇಮ್ ಚಟ ಹಿಡಿದಿತ್ತು. ಮನೆಯವರು ಅದನ್ನು ಖಾತ್ರಿಪಡಿಸಿದಾಗ ಮೊಬೈಲ್ ಗೇಮ್ ಹುಚ್ಚು ತಲೆಗೆ ಅಡರಿರುವುದು ಸ್ಪಷ್ಟವಾಯಿತು.
‘ಉದಯವಾಣಿ’ ಜತೆ ವಿದ್ಯಾರ್ಥಿಯ ಮನೆಯವರು ಹೇಳಿಕೊಂಡಂತೆ, “ಪ್ರತಿಭಾವಂತನಿದ್ದ ಕಾರಣ ಖುಷಿಯಿಂದ ನಾವೇ ಮೊಬೈಲ್ ಕೊಡಿಸಿದೆವು. ಯಾವುದೋ ಒಂದು ಗೇಮ್ ಆಡುತ್ತಾನೆ ಎಂದು ಹೆಚ್ಚು ಗಮನಿಸಿರಲಿಲ್ಲ. ಅನಂತರ ಡಾಟಾ ರಿಚಾರ್ಜ್ಗೆ ಬೇಡಿಕೆಯಿಯಿರಿಸಿದ. ಗೆಳೆಯರ ಜತೆ COC ಆಟವಾಡುತ್ತಿದ್ದ. ರಿಚಾರ್ಜ್ ಮಾಡದಿದ್ದರೆ ಹಠ ಹಿಡಿಯುತ್ತಿದ್ದ. ಡಾಟಾ ಪ್ಯಾಕ್ ಖಾಲಿಯಾದಾಗ ಮಾನಸಿಕ ಖನ್ನತೆಯಿಂದ ಇರುತ್ತಿದ್ದ. ಹಣ ಕೊಡದೆ ಇದ್ದರೆ, ಡಾಟಾ ಹಾಕಿಸದೆ ಇದ್ದರೆ ನಮ್ಮ ಮೇಲೆಯೇ ಕೈ ಮಾಡಲು ಬರುತ್ತಿದ್ದ. ಮೊಬೈಲ್ ಗೀಳು ಬಿಡಿಸುವುದು ಹೇಗೆಂದು ಚಿಂತೆಯಾಗಿದೆ’.
ಮನಶ್ಯಾಸ್ತ್ರಜ್ಞರು ಹೇಳಿದ ಇನ್ನೊಂದು ಘಟನೆ ಹೀಗಿದೆ: “ಆತ ಎಂಜಿನಿಯರಿಂಗ್ ವಿದ್ಯಾರ್ಥಿ. ಎಸೆಸೆಲ್ಸಿಯಲ್ಲಿ ಶೇ. 85 ಅಂಕ ಗಳಿಸಿದ್ದ. ಮೊಬೈಲ್ ಗೇಮ್ ಆಡಲಾರಂಭಿಸಿದ. ಈಗ ಪಠ್ಯದಲ್ಲಿ ಆಸಕ್ತಿ ಕಳೆದುಕೊಂಡು ಮನೋಚಿಕಿತ್ಸೆ ಪಡೆಯುತ್ತಿದ್ದಾನೆ’.
ಗೆಳೆಯರೇ ಪ್ರೇರಣೆ
ಕೆಲವು ಮಕ್ಕಳಿಗೆ ಈ ಗೇಮ್ಗಳ ವಿಚಾರ ತಿಳಿದಿಲ್ಲವಾದರೂ ತಿಳಿದಿರುವ ಮಕ್ಕಳೇ ಅವರಿಗೆ ಗುರುಗಳು! ಗೇಮ್ ಚಟ ಅಂಟಿದ ಬಳಿಕ ಮೊಬೈಲ್ ಹಿಡಿದುಕುಟ್ಟತೊಡಗಿದರೆ ಕೆಳಗಿಡುವುದೇ ಇಲ್ಲ. ಇದು ಮಕ್ಕಳ ಮಾನಸಿಕ ಆರೋಗ್ಯ ಮಾತ್ರ ಅಲ್ಲ, ಕಣ್ಣು, ಕಿವಿ, ಕೈ ಬೆರಳು, ಬೆನ್ನು ನೋವಿನಂತಹ ಸಮಸ್ಯೆಗಳು ಉಂಟಾಗಿ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅನೇಕ ಗೇಮ್ಗಳು ಬ್ಲೂವೇಲ್ನಂತೆ ಸಾಯುವ ಹಂತದವರೆಗೆ ಕೊಂಡೊಯ್ಯದಿದ್ದರೂ ಮಾನಸಿಕವಾಗಿ ಕೊಲ್ಲುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿವೆ.
COC ಗೇಮ್
ಈಗ ಹೆಚ್ಚಾಗಿ ಬಳಕೆಯಲ್ಲಿರುವುದು COC ಗೇಮ್. ಕ್ಲಾಶ್ ಆಫ್ ಕ್ಲಾನ್ಸ್ (COC) ಆನ್ಲೈನ್ ಮೂಲಕ ಗುಂಪಾಗಿ ಆಡುವ ಆಟ. ಬಳಗವನ್ನು ಸೃಷ್ಟಿಸುವುದು, ಯುದ್ಧ, ದಾಳಿ ಮಾಡುವುದು, ಕಟ್ಟಡ ರಚಿಸುವುದು, ಚಿನ್ನ ಸಂಪಾದಿಸುವುದು ಹೀಗೆ ಆಟ ಮುಂದುವರಿಯುತ್ತದೆ. ಸೇನೆ, ಶಸ್ತ್ರಾಸ್ತ್ರ ಮೊದಲಾದವು ಇದ್ದು, ಎದುರಾಳಿಯನ್ನು ಹೇಗಾದರೂ ಮಾಡಿ ಕೆಡವಬೇಕು. ಇದು ಮಕ್ಕಳಲ್ಲಿ ಆಕ್ರಮಣಕಾರಿ ಹಾಗೂ ದ್ವೇಷ ಮನೋಭಾವವನ್ನು ಹೆಚ್ಚು ಮಾಡುತ್ತದೆ. ತಡರಾತ್ರಿಯವರೆಗೂ ಮಕ್ಕಳು ನಿದ್ರಾವಿಹೀನರಾಗಿ ಆಡುತ್ತಿರುತ್ತಾರೆ. 50 ಕೋಟಿಗಿಂತ ಅಧಿಕ ಮಂದಿ ಇದನ್ನು ಡೌನ್ಲೋಡ್ ಮಾಡಿದ್ದಾರೆ.
ಶಟ್ ಕ್ಲಿನಿಕ್: ಬೆಂಗಳೂರಿನಲ್ಲಿ ಈಗ ಅತಿಯಾಗಿ ತಂತ್ರಜ್ಞಾನ ಬಳಸುವವರ ಚಿಕಿತ್ಸೆಗಾಗಿ ಶಟ್ (ಸರ್ವಿಸ್ ಫಾರ್ ಹೆಲ್ದೀ ಯೂಸ್ ಆಫ್ ಟೆಕ್ನಾಲಜಿ ) ಕ್ಲಿನಿಕ್ಗಳನ್ನು ತೆರೆಯಲಾಗಿದೆ. ಸಾಫ್ಟ್ವೇರ್ ಕಂಪೆನಿಗಳ ಉದ್ಯೋಗಿಗಳು ಒತ್ತಡ ನಿವಾರಣೆಗೆ ಇಲ್ಲಿ ಮಾನಸಿಕ ತಪಾಸಣೆಗೆ ಒಳಗಾಗುತ್ತಿದ್ದಾರೆ.
ಮೊಬೈಲ್ಗೆ ಇಂಟರ್ನೆಟ್ ಹಾಕಿಸಬೇಡಿ: ಡಾ| ಭಂಡಾರಿ
ಕೈಯಲ್ಲಿರುವ ಶಕ್ತಿಶಾಲಿ ಆಯುಧದಂತಿರುವ ಮೊಬೈಲ್ ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದೆ. ಮಕ್ಕಳಷ್ಟೇ ಅಲ್ಲ, ಅಪ್ಪ ಅಮ್ಮಂದಿರು, ಮನೆಮಂದಿಯೆಲ್ಲ ಹಾಳಾಗುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ನಲ್ಲಿ ವಯೋಮಾನದ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿಗಳು ತುಂಬಿ ತುಳುಕಿ ಅಪಕ್ವವಾದ ಮನಸ್ಸಿಗೆ ಮಾರಕವಾದ ವಿಷಯಗಳು ತುಂಬುತ್ತಿವೆ. ಕುತೂಹಲಕಾರಿ ಮನಸ್ಸು ಪ್ರಯೋಗ ಮಾಡಲು ಪ್ರಯತ್ನಿಸುತ್ತದೆ. ಸೋಶಿಯಲ್ ಮೀಡಿಯಾ ಬಳಕೆಯ ಪರಿಣಾಮ ಊಹೆಗೂ ನಿಲುಕದಾಗಿದೆ. ಹಾಗಾಗಿ ಮೊಬೈಲ್ ಬಳಕೆ ಕಡಿಮೆ ಮಾಡಿ. ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಿ. ಸಾಮಾಜಿಕ ಜಾಲತಾಣಗಳಿಂದ ದೂರವಿರಲು ಯತ್ನಿಸಿ.
– ಡಾ| ಪಿ.ವಿ. ಭಂಡಾರಿ, ಮನೋವೈದ್ಯರು, ಉಡುಪಿ
ಅತಿಯಾದರೆ ಅಮೃತವೂ ವಿಷ
ಮೊಬೈಲ್ ಅಗತ್ಯವಿದ್ದಷ್ಟೇ ಬಳಸಿ. ಪಠ್ಯಪೂರಕ ಚಟುವಟಿಕೆಗೆ, ಮಾಹಿತಿ ಸಂಗ್ರಹಕ್ಕೆ, ಅನಿವಾರ್ಯಕ್ಕಾಗಿ ಮಾತ್ರ ಮಕ್ಕಳು ಮೊಬೈಲ್ ಬಳಸುವಂತೆ ಪೋಷಕರು ನೋಡಿಕೊಳ್ಳಬೇಕು. ಮಕ್ಕಳ ಮೊಬೈಲ್ ಬಳಕೆಯ ಮೇಲೆ ಆಗಾಗ ಕಣ್ಣಾಡಿಸುತ್ತಿರಬೇಕು. ಮಕ್ಕಳಿಗೆ ಸುಲಭದಲ್ಲಿ ಉಪಯೋಗಕ್ಕೆ ದೊರೆಯದಂತೆ ಮೊಬೈಲ್ಗೆ ಲಾಕ್ ಹಾಕಿಡಿ ಎಂದು ಪೋಷಕರ ಸಭೆಯಲ್ಲಿ ಹೇಳಲಾಗಿದೆ. ಪ್ರತಿ ಮನೆಗೆ ವೈಯಕ್ತಿಕ ಪತ್ರ ಕೂಡ ಬರೆಯಲಾಗಿದೆ.
– ಕೃಷ್ಣ ಅಡಿಗ, ಮುಖ್ಯೋಪಾಧ್ಯಾಯರು, ವೆಂಕಟರಮಣ ಆಂಗ್ಲಮಾಧ್ಯಮ ಪ್ರೌಢಶಾಲೆ, ಕುಂದಾಪುರ
— ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ