ದನ ಕಳವು ಪ್ರತಿಭಟಿಸಿ “ಮುದ್ರಾಡಿ ಚಲೋ’
Team Udayavani, Nov 26, 2018, 10:47 AM IST
ಹೆಬ್ರಿ: ಉಡುಪಿ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ದನ ಕಳವನ್ನು ತಡೆಯಲು ಕಠಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮುದ್ರಾಡಿ ಹಿಂದೂ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ರವಿವಾರ “ಮುದ್ರಾಡಿ ಚಲೋ’ ಪ್ರತಿಭಟನೆ ನಡೆಯಿತು.
ವಿಟ್ಲ ತಾಲೂಕು ಹಿಂಜಾವೇ ಪ್ರಧಾನ ಕಾರ್ಯದರ್ಶಿ ಗಣರಾಜ ಭಟ್ ಕೆದಿಲ ಮಾತನಾಡಿ, ಇಂದು ದನಗಳನ್ನು ಬೆಳಗ್ಗೆ ಹಟ್ಟಿಯಿಂದ ಬಿಟ್ಟರೆ ಸಂಜೆ ಹಿಂದಿರುಗುತ್ತವೆ ಎಂಬ ಧೈರ್ಯವಿಲ್ಲ. ಇಂದು ತಲವಾರು ತೋರಿಸಿ ಕೊಟ್ಟಿಗೆಗೆ ನುಗ್ಗಿ ಕಣ್ಣೆದುರೇ ದನ ಎಳೆದೊಯ್ಯುವವರು ಮುಂದೆ ನಮ್ಮ ಮನೆಯ ಸದಸ್ಯರ ಮೇಲೂ ಕೈಯೆತ್ತಲು ಹಿಂಜರಿಯರು. ರೈತರು ಭಯದಿಂದ ಬದುಕಬೇಕಿದೆ ಎಂದರು.
ದನಗಳ್ಳರಿಗೆ ಇಲಾಖೆ ಅಭಯ
ದನಗಳವು ಇಂದು ವ್ಯವಸ್ಥಿತವಾದ ಮಾಫಿಯಾ ಆಗಿದೆ. ಪೊಲೀಸರಿಗೆ ಸಂಪೂರ್ಣ ಮಾಹಿತಿ ಇದ್ದು, ಅವರ ಬೆಂಬಲದಿಂದಲೇ ರಾಜಾರೋಷವಾಗಿ ನಡೆಯುತ್ತಿದೆ. ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಬದಲು ಗೋ ಕಳ್ಳರನ್ನು ಬಂಧಿಸಿ. ಇಲ್ಲದಿದ್ದಲ್ಲಿ ಬೀದಿಗೆ ಇಳಿಯಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಹೇಳಿದರು.
ದ.ಕ. ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ, ಮಹೇಶ್ ಶೆಟ್ಟಿ ತೆಳ್ಳಾರು, ಕರವೇ ಜಿಲ್ಲಾ ಅಧ್ಯಕ್ಷ ಅನ್ಸಾರ್ ಅಹಮದ್, ಎಪಿಎಂಸಿ ಉಪಾಧ್ಯಕ್ಷ ರತ್ನಾಕರ ಅಮೀನ್ ಮಾತನಾಡಿದರು.
ಗೋ ಕಳವು ಹೆಚ್ಚುತ್ತಿದ್ದರೂ ದುಷ್ಕರ್ಮಿಗಳನ್ನು ಪತ್ತೆಹಚ್ಚಿಲ್ಲ, ಹೈನುಗಾರರ ಬದುಕು ಸಂಕಷ್ಟಕ್ಕೀಡಾ ಗಿದೆ. ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಪತ್ರವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. ನಾರಾಯಣ ಮಣಿಯಾಣಿ, ಮುಟ್ಲಪಾಡಿ ಸತೀಶ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ , ಪ್ರಶಾಂತ್ ನಾಯಕ್, ದಿನೇಶ್ ಶೆಟ್ಟಿ, ವಸಂತ ನಾಯ್ಕ, ರಾಜೀವ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಗಣಪತಿ ಎಂ. ಅವರು ಸ್ವಾಗತಿಸಿ, ಗಣೇಶ್ ಶೇಡಿಮನೆ ನಿರೂಪಿಸಿದರು. ಮಾಧವ ಮುದ್ರಾಡಿ ವಂದಿಸಿದರು.
ಸಾಕ್ಷಿ ಸಹಿತ ಮಾಹಿತಿ ಕೊಡುತ್ತೇನೆ
ಹಾಲು ಮಾರಿ ತಾಯಿ ನಮ್ಮನ್ನು ಸಾಕುತ್ತಿದ್ದಾರೆ. ಈಗ ದನವಿಲ್ಲದೆ ನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ದಿನನಿತ್ಯ ನಮ್ಮ ಮನೆ ಎದುರು ತಲವಾರು ತೋರಿಸಿ, ಹೆದರಿಸಿ ವಾಹನಗಳಲ್ಲಿ ಬಂದು ದನಗಳವು ಮಾಡುತ್ತಿದ್ದಾರೆ. ಈ ಬಗ್ಗೆ ಸಾಕ್ಷಿ ಸಹಿತ ನಾನು ಮಾಹಿತಿ ನೀಡಲು ಸಿದ್ಧನಿದ್ದೇನೆ. ಪೊಲೀಸರು ಅವರನ್ನು ಬಂಧಿಸಲಿ ಎಂದು ದನಗಳವಿನಿಂದ ನೊಂದ ಹೆಬ್ರಿಯ ನಿತೀಶ್ ಎಸ್.ಪಿ. ಆಕ್ರೋಶ ವ್ಯಕ್ತಪಡಿಸಿದರು.
ಆರು ದಿನಗಳ ಗಡು
ದೋಗು ಪೂಜಾರಿ ಹಟ್ಟಿಯಿಂದ ಕಳವಾಗಿರುವ ಆರು ದನಗಳು ಐದು ದಿನಗಳೊಳಗೆ ಅವರ ಹಟ್ಟಿಯಲ್ಲಿರಬೇಕು. ದನಗಳ್ಳರನ್ನು ಕೂಡಲೇ ಬಂಧಿಸಬೇಕು. ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದರೆ ನಾವು ಆ ದನಗಳನ್ನೂ ಕಳ್ಳರನ್ನೂ ಹುಡುಕಿ ತರುತ್ತೇವೆ ಎಂದು ಗಣರಾಜ ಭಟ್ ಕೆದಿಲ ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್