ಮುಂಡ್ಕೂರು-ಪೇರೂರು ರಸ್ತೆ: ಅಪಾಯ ಆಹ್ವಾನಿಸುತ್ತಿರುವ ಆಲದ ಮರಗಳು
Team Udayavani, Sep 11, 2019, 5:45 AM IST
ಬೆಳ್ಮಣ್: ಮುಂಡ್ಕೂರು-ಮೂಡಬಿದಿರೆ ಮುಖ್ಯ ರಸ್ತೆಯ ಪೇರೂರು ಬಳಿ ರಸ್ತೆಗೆ ತಾಗಿ ಕೊಂಡಿರುವ ಎರಡು ಬೃಹತ್ ಆಲದ ಮರಗಳು ವಾಲಿಕೊಂಡ ಸ್ಥಿತಿಯಲ್ಲಿದ್ದು, ಅಪಾಯ ಆಹ್ವಾನಿ ಸುತ್ತಿವೆ.
ಕಿನ್ನಿಗೋಳಿ, ಬೆಳ್ಮಣ್ ಕಡೆಯಿಂದ ಮೂಡುಬಿದಿರೆ ಮತ್ತು ಕೊಡ್ಯಡ್ಕಗಳಿಗೆ ಪ್ರಯಾಣಿಸುವವರಿಗೂ ಈ ರಸ್ತೆ ಅನಿವಾರ್ಯವಾಗಿರುವ ಕಾರಣ ಮರಗಳ ತೆರವಿಗೆ ಲೋಕೋಪಯೋಗಿ ಇಲಾಖೆ ಶೀಘ್ರ ಮುಂದಾಗಬೇಕೆಂಬ ಆಗ್ರಹ ಸಾರ್ವಜನಿಕ ವಲಯ ದಿಂದ ಕೇಳಿ ಬಂದಿದೆ.
ಖಾಸಗಿ ಜಾಗದಲ್ಲಿರುವ ಮರಗಳು
ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಈ ಆಲದ ಮರಗಳು ಇರುವುದು ಖಾಸಗಿ ಜಾಗದಲ್ಲಿ. ಸಾರ್ವಜನಿಕ ಹಿತದೃಷ್ಟಿಯಿಂದ ಇಲಾಖೆ ಖಾಸಗಿಯವರ ಮನವೊಲಿಸಿ ಈ ಮರಗಳನ್ನು ತೆರವುಗೊಳಿಸಬೇಕೆಂಬ ಸಲಹೆಗಳೂ ಕೇಳಿ ಬಂದಿವೆ. ಈ ಮರಗಳು ಭಾರೀ ಗಾಳಿಮಳೆಗೆ ರಸ್ತೆಗೆ ಉರುಳಿದಲ್ಲಿ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಇಕ್ಕಟ್ಟಾದ ರಸ್ತೆ, ಸೇತುವೆ
ಈ ರಸ್ತೆ ಭಾರೀ ಇಕ್ಕಟ್ಟಾಗಿದ್ದು ಕಿರು ಸೇತುವೆ ಯನ್ನೂ ವಿಸ್ತರಿಸಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ. ಈ ಪ್ರದೇಶದಲ್ಲಿ ಹಲವು ಅಪಘಾತಗಳು ನಡೆದರೂ ಇಲಾಖೆ ಮಾತ್ರ ಇನ್ನೂ ಸ್ಪಂದಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.