ಅಧಿಕಾರಿಗಳ ಕಾರ್ಯವೈಖರಿ: ಗ್ರಾಮಸ್ಥರ ಅಸಮಾಧಾನ
Team Udayavani, Jul 25, 2017, 6:45 AM IST
ಸಿದ್ದಾಪುರ: ಉಳ್ಳೂರು-74 ಗ್ರಾಮ ಪಂಚಾಯತ್ನ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು 74ನೇ ಉಳ್ಳೂರು ಗರಡಿ ಸಭಾಭವನದಲ್ಲಿ ಜರಗಿತು.
ಗ್ರಾಮಸಭೆ ಆರಂಭಗೊಳ್ಳುತ್ತಿದ್ದಂತೆ ಗ್ರಾಮಸ್ಥರು ಗಣಿ, ಪರಿಸರ ಇಲಾಖೆಯ ವಿರೋಧ ಹಾಗೂ ಹಿರಿಯ ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಮಾನ್ಯತೆ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ, ಮೆಸ್ಕಾಂ ಹಾಗೂ ಕಂದಾಯ ಇಲಾಖೆಯವರು ಕೂಡಲೆ ಸಾರ್ವಜನಿಕರ ದೂರುಗಳಿಗೆ ಕೂಡಲೆ ಸ್ಪಂದಿಸುವಂತೆ ಆಗ್ರಹಿಸಿದರು.
ಮೆಸ್ಕಾಂ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ ಮಾತನಾಡಿ, ಕರ್ನಾಟಕ ಸರಕಾರವು ಈ ಬಾರಿ ಉತ್ತಮವಾಗಿ ವಿದ್ಯುತ್ ನೀಡಿದೆ. ಸರಕಾರ ಗ್ರಾ.ಪಂ.ನ ಬಾಕಿ ಇರುವ ವಿದ್ಯುತ್ ಬಿಲ್ನ್ನು ಮನ್ನಾ ಮಾಡಿದೆ. ಕೇಲವೊಂದು ಗ್ರಾ. ಪಂ.ಗಳು ಪ್ರಾಮಾಣಿಕವಾಗಿ ವಿದ್ಯುತ್ ಬಿಲ್ ಕಟ್ಟಿವೆ. ಅಂತಹ ಗ್ರಾ. ಪಂ.ಗಳಿಗೂ ಸರಕಾರದ ವಿದ್ಯುತ್ ಬಿಲ್ ಮನ್ನಾ ಯೋಜನೆ ಲಾಭ ಸಿಗುವ ಹಾಗೇ ಪ್ರಯತ್ನ ಮಾಡಲಾಗುವುದು. ಡೀಮ್ಡ್ ಫಾರೆಸ್ಟ್ ಬಗ್ಗೆ ಸಮಸ್ಯೆ ಇರುವುದರಿಂದ ಕೆಲವೊಂದು ಗ್ರಾಮಸ್ಥರಿಗೆ ಆಕ್ರಮ ಸಕ್ರಮದಿಂದ ಸರಕಾರಿ ಜಾಗ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ. ಆಕ್ರಮ ಸಕ್ರಮದ ಬಗ್ಗೆ ಸರಕಾರದಲ್ಲಿ ಚರ್ಚಿಸಿ, ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಶಾಸಕರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ| ದಿನಕರ ಶೆಟ್ಟಿ ಅವರು ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದರು.
ಉಳ್ಳೂರು-74 ಗ್ರಾ. ಪಂ. ಅಧ್ಯಕ್ಷೆ ಭಾರತಿ ಕೋಟಿ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದರು.ತಾ. ಪಂ. ಸದಸ್ಯ ಉಮೇಶ್ ಶೆಟ್ಟಿ, ಗ್ರಾ. ಪಂ. ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಯು. ಸುಧಾಕರ ಶೆಟ್ಟಿ, ಪ್ರಸಾದ ಶೆಟ್ಟಿ ಕಟ್ಟಿನಬೈಲು, ರೋಹಿತ್ಕುಮಾರ ಶೆಟ್ಟಿ, ಸಂತೋಷ್ ಪೂಜಾರಿ, ಶಾಂತಾ ನಾಯ್ಕ, ಸುಶೀಲಾ ನಾಯ್ಕ, ಜಯಲಕ್ಷ್ಮೀ ಶೆಟ್ಟಿ, ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಮಿತಾ, ತೋಟಗಾರಿಕೆ ಇಲಾಖೆಯ ಉಮೇಶ್, ಅರಣ್ಯ ಇಲಾಖೆಯ ಹರೀಶ್, ಕೃಷಿ ಇಲಾಖೆಯ ರಘುರಾಮ ಶೆಟ್ಟಿ, ಗ್ರಾಮಲೆಕ್ಕಿಗ ರಮೇಶ್, ಮೆಸ್ಕಾಂ ಜೆಇ ಪ್ರವೀಣ್ ಆಚಾರ್ಯ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಲಿತಾ, ಪೊಲೀಸ್ ಸಿಬಂದಿ ಮತ್ತಿತರರು ಉಪಸ್ಥಿತರಿದ್ದರು.
ಅಭಿವೃದ್ಧಿ ಅಧಿಕಾರಿ ಶ್ರೀಧರ ಕಾಮತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬಂದಿ ಉದಯಕುಮಾರ ಶೆಟ್ಟಿ ವರದಿ ವಾಚಿಸಿದರು.