ಕೇವಲ 3 ಲ.ಮೆ. ಟನ್ ಮರಳು ತೆರವಿಗೆ ಅವಕಾಶ: ಭಟ್
Team Udayavani, Sep 25, 2019, 5:00 AM IST
ಉಡುಪಿ: ಕರಾವಳಿ ನಿಯಂತ್ರಣ ಪ್ರಾಧಿಕಾರ 8 ಲ. ಮೆಟ್ರಿಕ್ ಟನ್ ಮರಳು ತೆರವಿಗೆ ಅನುಮತಿ ನೀಡಿದ್ದರೂ ವಾಸ್ತವದಲ್ಲಿ 3 ಲ. ಮೆ. ಟನ್ ಮಾತ್ರ ಮರಳು ತೆಗೆಯಲು ಸಾಧ್ಯ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಥಮೆಟಿಕ್ ಸರ್ವೇ ಮೂಲಕ ಜಿಲ್ಲೆಯಲ್ಲಿ ಒಟ್ಟು 25 ಲಕ್ಷ ಮೆ. ಟನ್ ಮರಳು ಗುರುತಿಸಲಾಗಿತ್ತು. ಹಿಂದಿನ ಜಿಲ್ಲಾಡಳಿತ 8 ಲಕ್ಷ ಮೆ. ಟನ್ ಮರಳು ಗುರುತಿಸಿ ಕರಾವಳಿ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿತ್ತು. ಪಡುಕರೆ, ಉದ್ಯಾವರ ಮೊದಲಾದ ಕಡೆ 5 ಲಕ್ಷ ಮೆ. ಟನ್ ಮರಳು ತೆಗೆಯಲು ಅವಕಾಶ ನೀಡಿದೆ. ಈ ಪ್ರದೇಶದಲ್ಲಿ ಮೀನುಗಾರಿಕೆ ನಡೆಯುವುದರಿಂದ ಮರಳು ತೆಗೆಯಲು ಸಾಧ್ಯವಿಲ್ಲ ಎಂದರು.
ಎಲ್ಲಿ ಮರಳು ತೆಗೆಯಲು ಸಾಧ್ಯ ಇದೆಯೋ ಅಲ್ಲಿ ಗುರುತಿಸಿಲ್ಲ. ಎಲ್ಲಿ ಸಾಧ್ಯವಿಲ್ಲವೋ ಅಲ್ಲಿ ಗುರುತಿಸಲಾಗಿದೆ. ಉದ್ಯಾವರ, ಪಡುಕರೆ ಇತ್ಯಾದಿ ಸ್ಥಳಗಳು ಇದಕ್ಕೆ ಉದಾಹರಣೆ. ಇನ್ನೂ ಅನೇಕ ಮರಳು ಇರುವ ಸ್ಥಳವನ್ನು ಗುರುತಿಸಿಲ್ಲ. 3 ಲಕ್ಷ ಮೆ. ಟನ್ ಮರಳು ಎರಡು ತಿಂಗಳಿಗೆ ಮುಗಿದು ಹೋಗುತ್ತದೆ. ಆದ್ದರಿಂದ ಹಾವಂಜೆ, ಬಾಕೂìರು ನದಿಗಳಲ್ಲಿ ಮರಳುದಿಬ್ಬ ಗುರುತಿಸಿ ಕರಾವಳಿ ನಿಯಂತ್ರಣ ಪ್ರಾಧಿಕಾರದಿಂದ ಮತ್ತೆ ಅನುಮತಿ ಪಡೆಯಲಾಗುತ್ತದೆ. 158 ಜನರ ಜತೆಗೆ ಈ ಹಿಂದಿನ 21 ಮಂದಿಗೂ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಲಾಗಿದೆ. ಬಜೆ ಮರಳು ಆ್ಯಪ್ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗೆ ದೂರು ನೀಡಿ
ಸಾರ್ವಜನಿಕರಿಂದ ಯಾವುದೇ ರೀತಿಯ ದೂರು ಬಾರದಂತೆ ಕೆಲಸ ಮಾಡಲು ಪರವಾನಗಿದಾರರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರ ದೂರುಗಳಿದ್ದರೆ ಜಿಲ್ಲಾಧಿಕಾರಿಯವರನ್ನು ನೇರವಾಗಿ ಸಂಪರ್ಕಿಸಬಹುದು. ಮರಳು ಹೊರ ಜಿಲ್ಲೆಗೆ ಹೋಗದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ಗುಜರಾತ್ ಅಧ್ಯಯನ ಪ್ರವಾಸ
ನಾನ್ ಸಿಆರ್ಝಡ್ ವ್ಯಾಪ್ತಿಯಲ್ಲಿ ಬೇಕಾದಷ್ಟು ಮರಳಿದೆ. 101 ಮಂದಿ ಸಾಂಪ್ರದಾಯಿಕ ಮರಳು ತೆಗೆಯುವವರಿದ್ದಾರೆ. ಆದರೆ ಸ್ಪಷ್ಟ ನಿಯಮಗಳಿಲ್ಲ. ಹೀಗಾಗಿ ಕರಾವಳಿಯ 3 ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸುವ ನಿಟ್ಟಿನಲ್ಲಿ ಗಣಿ ಸಚಿವರ ಕೋರಿಕೆಯಂತೆ 4 ಶಾಸಕರು ಗುಜರಾತ್ನಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಅಲ್ಲಿನ ಸಾಂಂಪ್ರದಾಯಿಕ ಮರಳುಗಾರಿಕೆ ಬಗ್ಗೆ ವರದಿ ಸಲ್ಲಿಸಲಿದ್ದೇವೆ ಎಂದು ಭಟ್ ತಿಳಿಸಿದರು.