ಸ್ವಂತಿಕೆಯೇ ಸೃಜನಶೀಲ ಸಾಹಿತ್ಯದ ಮೂಲ
Team Udayavani, Apr 29, 2018, 7:35 AM IST
ಉಡುಪಿ: ಸ್ವಂತಿಕೆಯೇ ಸೃಜನಶೀಲ ಸಾಹಿತ್ಯದ ಮೂಲ. ನಮ್ಮ ಅನುಭವಗಳನ್ನೇ ಬರೆಯಲು ಆರಂಭಿಸಿದರೆ ನಾವು ಸೃಜನಶೀಲರಾಗುತ್ತೇವೆ ಎಂದು ಸಾಹಿತಿ, ಕನ್ನಡದ ವಿದ್ವಾಂಸ ಪ್ರೊ| ಹರಿಕೃಷ್ಣ ಭರಣ್ಯ ಅಭಿಪ್ರಾಯಪಟ್ಟರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಆಶ್ರಯದಲ್ಲಿ ಎ.28ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿದ ಸಮಾರಂಭದಲ್ಲಿ ದಿ| ಮುಳಿಯ ತಿಮ್ಮಪ್ಪಯ್ಯ ಅವರ ನೆನಪಿನಲ್ಲಿ ನೀಡಲಾದ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಡಾ| ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಅವರು ಮಾತನಾಡಿ ಕರಾವಳಿ ನಾಡಿನ ಅಗ್ರಗಣ್ಯ ವಿದ್ವಾಂಸರಲ್ಲಿ ಮುಳಿಯ ತಿಮ್ಮಪ್ಪಯ್ಯ ಅವರು ಒಬ್ಬರು. ವಿದ್ಯಾರ್ಥಿಗಳಲ್ಲಿ ಮತ್ತು ಎಳೆಯರಲ್ಲಿ ಇಂತಹ ವಿದ್ವಾಂಸರ ಬಗ್ಗೆ ಜ್ಞಾನವನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.
ಜೀವಾನುಭವವೇ ಸಾಹಿತ್ಯ
ಪ್ರಶಸ್ತಿ ಪುರಸ್ಕೃತರಾದ ಭರಣ್ಯ ಅವರ ಕುರಿತು ಅಭಿನಂದನಾ ಭಾಷಣ ಮಾಡಿದ ರವಿಶಂಕರ್ ಜಿ.ಕೆ. ಅವರು “ಭರಣ್ಯ ಅವರು ಬದುಕಿಗೆ ನಿಲುಕದ, ಕಾಲ್ಪನಿಕ ವಿಚಾರಗಳು° ಸಾಹಿತ್ಯವಾಗಿಸಿಲ್ಲ. ಗಟ್ಟಿಯಾದ ಜೀವನಾನುಭವವೇ ಅವರ ಕೃತಿಗಳ ಆಕರವಾಗಿದೆ. ಅವರ ಸರಳತೆ, ವಿಶಾಲ ಮನೋಭಾವ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿ’ ಎಂದರು.”ಮುಳಿಯರ ನಾಡೋಜ ಪಂಪ’ ವಿಷಯದ ಕುರಿತು ಡಾ| ಪಾದೇಕಲ್ಲು ವಿಷ್ಣುಭಟ್ಟ ಅವರು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ನಮ್ಮ ಸಂಸ್ಕೃತಿ
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಮಾತನಾಡಿ ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ. ಹೊರಗಿನ ಸಂಸ್ಕೃತಿಯನ್ನು ನಮ್ಮದಾಗಿಸಿಕೊಳ್ಳುವ ಬದಲು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕು ಎಂದು ಹೇಳಿದರು.ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಪ್ರಾಸ್ತಾವಿಕ ಮಾತನಾಡಿದರು. ಭ್ರಮರಿ ಶಿವಪ್ರಕಾಶ್ ಅವರು ಮುಳಿಯರ ನವನೀತ ರಾಮಾಯಣದ ನಾಂದಿ ಪದ್ಯ ಹಾಡಿದರು. ಪ್ರಶಸ್ತಿ ಸಮಿತಿಯ ಸದಸ್ಯೆ ಮನೋರಮಾ ಭಟ್ ಉಪಸ್ಥಿತರಿದ್ದರು. ಪ್ರೊ| ನರಸಿಂಹ ಮೂರ್ತಿ ನಿರ್ವಹಿಸಿದರು.
ಪತ್ತೆದಾರಿ ಕಾದಂಬರಿಗಳಿಂದ ಸಾಹಿತ್ಯಾಸಕ್ತಿ
ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ ತನಗೆ ಸಾಹಿತ್ಯದೆಡೆಗೆ ಒಲವು ಹೆಚ್ಚಾಯಿತು. ತರಗತಿಯಲ್ಲಿ ಕುಳಿತೇ ಕಥೆ, ಕವಿತೆಗಳನ್ನು ಬರೆಯುತ್ತಿದ್ದೆ. ಮೊದಮೊದಲು ನನ್ನಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸಿದ್ದು ಪತ್ತೆದಾರಿ ಕಾದಂಬರಿಗಳು.
– ಪ್ರೊ| ಹರಿಕೃಷ್ಣ ಭರಣ್ಯ, ಕನ್ನಡ ವಿದ್ವಾಂಸರು