ಉಪ್ಪು ನೀರಿನಿಂದ ಕರಟಿಹೋದ ಭತ್ತದ ಪೈರು
Team Udayavani, Oct 30, 2018, 2:45 AM IST
ತಲ್ಲೂರು: ಈ ಭಾಗದಲ್ಲಿ ಬೆಳೆಯುವುದೇ ಒಂದು ಬೆಳೆ. ಅದು ಕೂಡ ಈ ಬಾರಿ ಉಪ್ಪು ನೀರಿನ ಹಾವಳಿಯಿಂದಾಗಿ ಸಂಪೂರ್ಣ ನಾಶವಾಗಿದೆ. ಇದು ತಲ್ಲೂರು ಸಮೀಪದ ಉಪ್ಪಿನ ಕುದ್ರು ಪರಿಸರದ ರೈತರ ದುಸ್ಥಿತಿ. ಕಟಾವಿಗೆ ಬಂದ ಎಕರೆಗಟ್ಟಲೆ ಗದ್ದೆಯ ಭತ್ತದ ಪೈರು ಒಣಗಿ ಹೋಗಿದ್ದು, ಇದರಿಂದ ಈ ಭಾಗದ ಅನೇಕ ಮಂದಿ ರೈತರು ಸಂಕಷ್ಟದಲ್ಲಿದ್ದಾರೆ.
ಎಲ್ಲ ಕಡೆಗಳಲ್ಲಿ ಈಗ ಭತ್ತದ ಪೈರು ಕಟಾವು ಕಾರ್ಯ ಭರದಿಂದ ಸಾಗುತ್ತಿದೆ. ಕೆಲವರು ಮಾತ್ರ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮೊರೆ ಹೋದರೆ, ಹೆಚ್ಚಿನ ಕಡೆಗಳಲ್ಲಿ ಯಾಂತ್ರೀಕೃತ ಕೃಷಿ ಪದ್ಧತಿಗೆ ಆಕರ್ಷಿತರಾಗಿದ್ದಾರೆ. ಆದರೆ ತಲ್ಲೂರು, ಹೆಮ್ಮಾಡಿ ಭಾಗಗಳಲ್ಲಿ ಉಪ್ಪಿನ ನೀರಿನ ಸಮಸ್ಯೆ ಭತ್ತದ ಕೃಷಿಗೆ ಅಂಟಿದ ಶಾಪವಾಗಿದೆ. ಅದರಲ್ಲೂ ಕಳೆದ ಸೆಪ್ಟೆಂಬರ್ ತಿಂಗಳಿಡೀ ಮಳೆ ಕೊರತೆಯಿಂದಾಗಿ ಈ ಬಾರಿ ಹೊಳೆ ಸಮೀಪದ ಗದ್ದೆಗಳಿಗೆ ಈಗ ಪ್ರತಿಕೂಲ ಪರಿಣಾಮ ಬೀರಿದೆ. ಈ ಸಲ ಉಪ್ಪಿನಕುದ್ರು ಭಾಗದ ಅನೇಕ ಮಂದಿಯ ಗದ್ದೆಗಳಲ್ಲಿ ಕಟಾವು ಸಮಯದಲ್ಲಿಯೇ ಫಸಲು ಬಂದ ಪೈರು ಸುಟ್ಟು ಹೋಗಿದೆ.
ಹೊಳೆ ದಂಡೆ, ಬದು ಏರಿಸಿ
ಭತ್ತದ ಕೃಷಿಗೆ ಹೊಳೆ ದಂಡೆ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಪ್ರತಿ ಬಾರಿಯೂ ಉಪ್ಪು ನೀರು ಗದ್ದೆಗೆ ನುಗ್ಗಿ ಕೃಷಿಗೆ ತೊಂದರೆಯಾಗುತ್ತಿದೆ. ಈ ಭಾಗದ ಗದ್ದೆಗಳಿಗೆ ಉಪ್ಪು ನೀರಿನ ಸಮಸ್ಯೆ ತಪ್ಪಿಸಬೇಕಾದರೆ ಹೊಳೆ ದಂಡೆ ಅಥವಾ ಗದ್ದೆಯ ಬದುಗಳನ್ನು ಏರಿಸುವುದು. ಇದಕ್ಕೆ ಸರಕಾರದ ಮಟ್ಟದಲ್ಲೇ ಶಾಶ್ವತ ಯೋಜನೆ ಜಾರಿಗೆ ತಂದರೆ ಪ್ರಯೋಜನವಾಗಲಿದೆ ಎನ್ನುವುದು ಈ ಭಾಗದ ರೈತರ ಅಭಿಪ್ರಾಯವಾಗಿದೆ.
ಗದ್ದೆಯಿದ್ದರೂ, ಪೇಟೆಯಿಂದ ಅಕ್ಕಿ
ಮಳೆ ಬರುವ ಸಮಯದಲ್ಲಿ ಮಳೆ ಸರಿಯಾಗಿ ಬರದಿದ್ದರೆ, ಇದರ ನೇರ ಪರಿಣಾಮ ಈ ಹೊಳೆ ಬದಿಯಿರುವ ರೈತರ ಮೇಲಾಗುತ್ತದೆ. ಉಪ್ಪು ನೀರಿನ ಸಮಸ್ಯೆಯಿಂದಾಗಿ ಉಪ್ಪಿನಕುದ್ರು ಭಾಗದಲ್ಲಿ ಮುಂಗಾರು ಹಂಗಾಮು ಮಾತ್ರ ಬೆಳೆಯಲಾಗುತ್ತದೆ. ಈ ಬಾರಿ ಮುಂಗಾರಿನಲ್ಲಿಯೂ ಏನೂ ಫಸಲು ಇಲ್ಲದೆ, ಎಕರೆಗಟ್ಟಲೇ ಗದ್ದೆಯಿದ್ದರೂ, ಪೇಟೆಯಿಂದ ಅಕ್ಕಿ ತಂದು ಉಣ್ಣುವ ಪರಿಸ್ಥಿತಿ ಬಂದಿದೆ ಎನ್ನುವುದು ಇಲ್ಲಿನ ರೈತರೊಬ್ಬರ ಅಳಲು.
ಭತ್ತ ಬಿಡಿ, ಪೈರು ಕೂಡ ಇಲ್ಲ
ನಮಗೆ 20 ಸೆಂಟ್ಸ್ ಗದ್ದೆಯಿದೆ. ಎಂಓ. 4 ಭತ್ತದ ತಳಿಯನ್ನು ಬೆಳೆದಿದ್ದೇವೆ. ಆದರೆ ಮಳೆ ಕಡಿಮೆಯಾಗಿದ್ದರಿಂದ ಫಸಲು ಕಟಾವಿಗೆ ಬಂದ ಸಮಯದಲ್ಲಿಯೇ ಸಂಪೂರ್ಣ ನಾಶವಾಗಿದೆ. ಈಗ ಎಂಥಾ ಭತ್ತ ಬಿಡಿ, ಕನಿಷ್ಠ ದನಗಳಿಗೆ ಪೈರು ಕೂಡ ಕಟಾವಿಗೆ ಸಿಗದಂತಾಗಿದೆ. ಹಿಂದೆದೂ ಈ ಬಾರಿಯಷ್ಟು ತೊಂದರೆಯಾಗಿಲ್ಲ. ಹಿಂದಿನ ವರ್ಷಗಳಲ್ಲಿ ಅಲ್ಪಸ್ವಲ್ಪವಾದರೂ ಸಿಗುತ್ತಿತ್ತು. ನಮಗೆ ಪರಿಹಾರವಾದರೂ ಸಿಗಲಿ.
– ರೇಖಾ, ಉಪ್ಪಿನಕುದ್ರು
ಪರಿಶೀಲನೆ ನಡೆಸಲಾಗುವುದು
ಪ್ರಾಕೃತಿಕ ವಿಕೋಪದಿಂದ ಕೃಷಿ ನಾಶವಾಗಿದ್ದರೆ, ಅದರನ್ವಯ ಪರಿಹಾರ ನೀಡಬಹುದು. ಉಪ್ಪಿನಕುದ್ರುವಿನಲ್ಲೂ ಕೂಡ ಮಳೆ ಕಡಿಮೆಯಾಗಿ, ತೊಂದರೆಯಾಗಿರುವುದರಿಂದ ಅಲ್ಲಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿ ಪರಿಹಾರ ಕುರಿತಂತೆ ಪ್ರಯತ್ನ ಮಾಡಲಾಗುವುದು. ಉಪ್ಪು ನೀರಿಗೆ ಆಗುವಂತಹ ತಳಿಯನ್ನು ಬಳಸಿದರೂ ಇಲ್ಲಿ ಅದು ಅಷ್ಟೇನೂ ಯಶಸ್ವಿಯಾಗಿಲ್ಲ.
– ಚಂದ್ರಶೇಖರ್, ಉಪ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ
— ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ