“ಪಲಾಯನ್ ನಹೀ ಪರಾಕ್ರಮ್’
Team Udayavani, Aug 1, 2017, 7:30 AM IST
ಉಡುಪಿ: ಅಲ್ಪಸಂಖ್ಯಾಕರ ಓಲೈಕೆಯಿಂದಾಗಿ ಸಂಪೂರ್ಣ ಹಿಂದೂ ಸಮಾಜ ದೌರ್ಜನ್ಯಕ್ಕೆ ಒಳಗಾಗುತ್ತಿದೆ. ಇದರಿಂದ ಹೊರ ಬರಲು ನಾವು “ಪಲಾ ಯತ್ ನಹೀ ಪರಾಕ್ರಮ್’ ವಾಕ್ಯವನ್ನು ಪಠಿಸ ಬೇಕೆಂದು ಕರ್ನಾಟಕ ಪ್ರಾಂತ ಸಹ ಸಂಚಾಲಕ ಸಕಲೇಶಪುರ ರಘು ಕರೆ ನೀಡಿದರು.
ಅವರು ಉಡುಪಿ ಯು.ಎಸ್. ನಾಯಕ್ ಸಭಾಂಗಣದಲ್ಲಿ ಜು. 31ರಂದು ಕರ್ನಾಟಕ ರಾಜ್ಯ ಸರಕಾರ ಹಿಂದೂ ದಮನ ನೀತಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿರು.
ಶರತ್ ಮಡಿವಾಳ ಹತ್ಯಾ ಪ್ರಕರಣ ರಾಷ್ಟ್ರೀಯ ತನಿಖಾ ದಳಕ್ಕೆ ನೀಡಬೇಕು. ಹಿಂದೂ ನಾಯಕರುಗಳಾದ ಶರಣ್ ಪಂಪ್ವೆಲ್, ಸತ್ಯಜಿತ್ ಸುರತ್ಕಲ್, ಮುರಳಿಕೃಷ್ಣ ಹಸಂತಡ್ಕ, ಹರೀಶ್ ಪೂಂಜಾ, ಪ್ರದೀಪ್ ಪಂಪ್ವೆಲ್
ವಿರುದ್ಧ ದಾಖಲಿಸಲಾದ ಸುಳ್ಳು ಮೊಕದ್ದಮೆಗಳನ್ನು ಕೂಡಲೇ ಹಿಂದೆ ಪಡೆಯಬೇಕು. ಇವರಮೇಲೆ ಗೂಂಡಾ ಕಾಯ್ದೆಯನ್ನು ಹೇರಲು ಮಾಡುವ ಪ್ರಯತ್ನ ತತ್ಕ್ಷಣ ಕೈಬಿಡಬೇಕು. ಪೊಲೀಸ್ ಇಲಾಖೆಯಿಂದ ನಡೆಯುತ್ತಿರುವ ತಾರತಮ್ಯ ನೀತಿಯನ್ನು ನಿಲ್ಲಿಸಬೇಕು ಹಾಗೂ ರಾಜ್ಯ ಸರಕಾರದ ಹಿಂದೂ ದಮನ ನೀತಿಯನ್ನು ತತ್ಕ್ಷಣ ನಿಲ್ಲಿಸಬೇಕೆಂದು ಸಭೆಯಲ್ಲಿ ಖಂಡನಾ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಉಡುಪಿ ವಿ.ಹಿಂ.ಪ. ಅಧ್ಯಕ್ಷ ವಿಲಾಸ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವಿ.ಹಿಂ.ಪ.ದ ದ.ಕ ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ, ಉಪಾಧ್ಯಕ್ಷ ನಾರಾಯಣ ಮಣಿಯಾಣಿ, ಮಂಗಳೂರು ವಿಭಾಗ ಸಂಚಾಲಕ ಸುನಿಲ್ ಕೆ.ಆರ್. ಉಪಸ್ಥಿತರಿದ್ದರು.
ಜಿಲ್ಲಾ ಸಂಯೋಜಕ ದಿನೇಶ್ ಮೆಂಡನ್, ಮಹಿಳಾ ಮಂಡಳದ ಸುಪ್ರಭಾ ಆಚಾರ್ಯ ವಂದಿಸಿದರು. ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು.