ಪಾಂಬೂರು,ಪಡುಬೆಳ್ಳೆಗೆ ನೀರುಣಿಸುವ ಕುರುಡಾಯಿ ಕೆರೆಗೆ ಬೇಕಿದೆ ಕಾಯಕಲ್ಪ
Team Udayavani, Jun 3, 2019, 6:10 AM IST
ಶಿರ್ವ: ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಪಡುಬೆಳ್ಳೆ ಪಾಂಬೂರು ನಿವೃತ್ತ ಶಿಕ್ಷಕ ಬಿ.ರಾಮಚಂದ್ರ ಪ್ರಭು ಅವರ ಮನೆ ಬಳಿ ಸುಮಾರು 1.73 ಎಕ್ರೆ ಪ್ರದೇಶದಲ್ಲಿ ಹರಡಿರುವ ಕುರುಡಾಯಿ ಕೆರೆಯು ಪಡುಬೆಳ್ಳೆ ಪಾಂಬೂರಿನ ರಕ್ಷಾಪುರ, ಧರ್ಮಶ್ರೀ ಮತ್ತು ಶಿವಗಿರಿ ಕಾಲನಿಗಳಿಗೆ ನೀರುಣಿಸುವ ಏಕೈಕ ಜೀವನಾಡಿಯಾಗಿದೆ.ಇಲ್ಲಿನ ಜನರಿಗೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಇಲ್ಲದೆ ಇದ್ದು ಕುರುಡಾಯಿ ಕೆರೆಯು ಹೂಳು ತುಂಬಿ ನಿರ್ವಹಣೆಯಿಲ್ಲದೆ ಸೊರಗಿದೆ.
ರೈತರು ಭತ್ತದ ಬೇಸಾಯ ಮಾಡುತ್ತಿದ್ದ ಸಂದರ್ಭಗಳಲ್ಲಿ ಕೆರೆಯ ಕಸಕಡ್ಡಿ
ತೆಗೆದು ನಿರ್ವಹಣೆ ಮಾಡುತ್ತಿದ್ದರು. ಇತ್ತೀಚೆಗೆ ಕೃಷಿ ಚಟುವಟಿಕೆ ಸ್ಥಗಿತಗೊಂಡು ಕೆರೆಯಲ್ಲಿ ಹೂಳು, ಮಣ್ಣು ಕಸಕಡ್ಡಿ ತುಂಬಿ ಮಣ್ಣಿನ ದಿಬ್ಬವುಂಟಾಗಿ ನೀರಿನ ಕೊರತೆಯುಂಟಾಗಿದೆ.
ಬೆಳ್ಳೆ ಗ್ರಾ.ಪಂ. ಪಂಪ್ಹೌಸ್ ನಿರ್ಮಿಸಿ
ಕುರುಡಾಯಿ ಕೆರೆ ನೀರನ್ನು ಪಾಂಬೂರು ಮಾನಸದ ಬಳಿಯಿರುವ 75,000 ಲೀ. ಸಾಮರ್ಥಯದ ನೀರಿನ ಟ್ಯಾಂಕ್ಗೆ ಸರಬರಾಜು ಮಾಡಿ ಪಡುಬೆಳ್ಳೆಯ ರಕ್ಷಾಪುರ, ಧರ್ಮಶ್ರೀ ಮತ್ತು ಶಿವಗಿರಿ ಕಾಲನಿಗಳಿಗೆ ಕುಡಿಯುವ ನೀರು ಪೂರೈಕೆ
ಮಾಡುತ್ತಿದೆ. ಕೆರೆಯ ನೀರು ಕಡಿಮೆಯಾದುದರಿಂದ ತಾತ್ಕಾಲಿಕವಾಗಿ ಹೂಳು ತೆಗೆದು ನೀರು ನಿಲ್ಲುವಂತೆ ಮಾಡಿದೆ.
ನೀರುಣಿಸುವ ನಿವೃತ್ತ ಮುಖ್ಯಶಿಕ್ಷಕ
ಕೆರೆಯ ನೀರು ಬರಿದಾದರೆ ಕಾಲನಿಗೆ ಬೇರೆ ನೀರಿನ ವ್ಯವಸ್ಥೆಯೇ ಇಲ್ಲ.ಇದನ್ನು ಮನಗಂಡ ನಿವೃತ್ತ ಮುಖ್ಯ ಶಿಕ್ಷಕ ಬಿ. ರಾಮಚಂದ್ರ ಪ್ರಭು ಕಳೆದ 3-4 ವರ್ಷಗಳಿಂದ ತನ್ನ ಕೃಷಿ ಭೂಮಿಯಲ್ಲಿರುವ ಪಂಪ್ಸೆಟ್ನಿಂದ ದಿನಕ್ಕೆ 4-5 ಗಂಟೆಗಳ ಕಾಲ ಪಾಪನಾಶಿನಿ ನದಿ ನೀರನ್ನು ಕುರುಡಾಯಿ ಕೆರೆಗೆ ಹಾಯಿಸುತ್ತಿದ್ದಾರೆ. ಆ ಮೂಲಕ ಪಡುಬೆಳ್ಳೆ ಪರಿಸರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ.ಇದಕ್ಕೆ ಬೆಳ್ಳೆ ಗ್ರಾ.ಪಂ.ಕೂಡಾ ಸಹಕರಿಸುತ್ತಿದ್ದು ಪೈಪುಗಳನ್ನು ಒದಗಿಸಿದೆ.
ಕುಡಿಯುವ ನೀರಿಗೂ ತತ್ವಾರ
ಕೆರೆಯಿಂದ ಹರಿದು ಹೊರಹೋಗುವ ನೀರಿಗೆ ತೂಬು (ಒಡ್ಡು) ನಿರ್ಮಿಸಿ ನೀರು ಹರಿಯುವಂತೆ ಮಾಡಿ ಪರಿಸರ ರೈತರು ಸುಗ್ಗಿ,ಕೊಳಕೆ ಭತ್ತದ ಬೇಸಾಯದೊಂದಿಗೆ ತೆಂಗು, ಕಂಗು ಹಾಗೂ ಇನ್ನಿತರ ವಾಣಿಜ್ಯ
ಬೆಳೆಗಳಿಗೆ ನೀರುಣಿಸುತ್ತಿದ್ದರು. ಪರಿಣಾಮವಾಗಿ ಸುತ್ತಮುತ್ತಲಿನ ಕಿ.ಮೀ.
ಅಂತರದ ಬಾವಿಗಳಲ್ಲಿ ಅಂತರ್ಜಲ
ಮಟ್ಟ ಏರಿಕೆಯಾಗಿ ನೀರಿನ ಅಭಾವವಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿಕೂಲಿ ಕಾರ್ಮಿಕರ ಅಭಾವ, ದುಬಾರಿ ಕೂಲಿಯಿಂದಾಗಿ ಬಹುತೇಕ ಕೃಷಿ ಭೂಮಿ ಹಡಿಲು ಬಿದ್ದಿದೆ. ಕೃಷಿಯೂ ಇಲ್ಲ-ನೀರೂ ಇÇÉ ಎಂಬಂತಾಗಿ ಕೃಷಿ ಭೂಮಿ ಬರಡಾಗಿ ಮುಂದೊಂದು ದಿನ ಕುಡಿಯುವ ನೀರಿಗೂ ತತ್ವಾರ ಬರಲಿದೆ.
ಪ್ರಕೃತಿ ಸಹಜ ಸೌಂದರ್ಯದಿಂದ ಕಂಗೊಳಿಸುತ್ತಿರುವ ಸುಮಾರು 1.73ಎಕ್ರೆ ಪ್ರದೇಶದ ಕೆರೆಯನ್ನು ಹೂಳು ತೆಗೆದು ಅಭಿವೃದ್ಧಿಪಡಿಸಬೇಕಾಗಿದೆ. ಜಿಲ್ಲಾಡಳಿತ ಕುರುಡಾಯಿ ಕೆರೆಯ ಸಮಗ್ರ ಅಭಿವೃದ್ಧಿಗಾಗಿ ಮುತುವರ್ಜಿವಹಿಸಿ ಸೂಕ್ತ ಅನುದಾನ ನೀಡಿ ಕೆರೆ ಪುನರುತ್ಥಾನ ಗೊಳಿಸಿದಲ್ಲಿ ಮುಂಬರುವ ದಿನಗಳಲ್ಲಿ ಪಾಂಬೂರು, ಪಡುಬೆಳ್ಳೆ ಕಾಲನಿಗಳಿಗೆ ನೀರುಣಿಸುವ ಮೂಲಕ ಇದೊಂದು ಮಾದರಿ ಜಲಪೂರಣ ಕೆರೆಯಾಗಿ ಪರಿಣಮಿಸಬಹುದು.
ಬೇಸಗೆಯಲ್ಲಿ ಏರುತ್ತಿರುವ ತಾಪಮಾನ ಮತ್ತು ಕುಡಿಯುವ ನೀರಿನ ಕೊರತೆ ಸಮಸ್ಯೆಗಳಿಗೆ ಜಿಲ್ಲಾಡಳಿತ ಸಕಾಲದಲ್ಲಿ ಎಚ್ಚೆತ್ತುಕೊಂಡು ಬೆಳ್ಳೆ ಕುರುಡಾಯಿ ಕೆರೆಗೆ ಕಾಯಕಲ್ಪ ನೀಡಿದಲ್ಲಿ ಪಾಂಬೂರು, ಪಡುಬೆಳ್ಳೆ ಕಾಲನಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಿ ನೀರಿನ ಬವಣೆಯ ಸಂಕಷ್ಟ ದೂರ ಮಾಡಬಹುದಾಗಿದೆ.
ಕೆರೆ ಅಭಿವೃದ್ಧಿಪಡಿಸಿದರೆ ಸಮಸ್ಯೆಗೆ ಪರಿಹಾರ
ಜಿಲ್ಲಾಡಳಿತ ಮುತುವರ್ಜಿ ವಹಿಸಿ ಅನುದಾನ ನೀಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕುರುಡಾಯಿ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಬಹುದು.
-ಹರೀಶ್ ಶೆಟ್ಟಿ, ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ
ತುರ್ತು ಕ್ರಮ ಕೈಗೊಳ್ಳಿ
ಕಳೆದ 3-4ವರ್ಷಗಳಿಂದ ಬೇಸಗೆಯಲ್ಲಿ ಪಂಪ್ಸೆಟ್ನ ಮೂಲಕ ನದಿ ನೀರನ್ನು
ಕುರುಡಾಯಿ ಕೆರೆಗೆ ಹಾಯಿಸುತ್ತಿದ್ದೇವೆ, ಕೆರೆಯಲ್ಲಿ ನೀರು ಕಡಿಮೆಯಾದಲ್ಲಿ ಪಾಂಬೂರು,ಪಡುಬೆಳ್ಳೆ ಕಾಲನಿಗಳಿಗೆ ಬೇರೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ .ಕೆರೆ ಅಭಿವೃದ್ಧಿಪಡಿಸಿ ಜಿಲ್ಲಾಡಳಿತ ನೀರಿನ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ.
-ಬಿ. ರಾಮಚಂದ್ರ ಪ್ರಭು, ನಿವೃತ್ತ ಮುಖ್ಯ ಶಿಕ್ಷಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ