ಪಡುತೋನ್ಸೆ ಬೆಂಗ್ರೆಯಲ್ಲಿ ಹಿನ್ನೀರ ಮೇಲೆ ತೇಲುವ ಸ್ವರ್ಗ ಬೋಟ್ಹೌಸ್
Team Udayavani, Aug 7, 2017, 7:45 AM IST
ಮಲ್ಪೆ: ಕೆಮ್ಮಣ್ಣು ಪಡುತೋನ್ಸೆ ಬೆಂಗ್ರೆಯ ಸ್ವರ್ಣ ನದಿಯಲ್ಲಿ ಬೋಟ್ಹೌಸ್ ಮತ್ತೆ ಆರಂಭಗೊಂಡಿದೆ.ಕಳೆದ ಎಪ್ರಿಲ್ನಲ್ಲಿ ಕೇರಳ ಮಾದರಿಯಲ್ಲಿನ ಬೋಟ್ಹೌಸ್ ಪಾಂಚಜನ್ಯ ಕ್ರೂಸ್ ಇಲ್ಲಿನ ಪಡುತೋನ್ಸೆಯಲ್ಲಿ ಕಾರ್ಯಾರಂಭಿಸಿದ್ದು ಆನಂತರ ಮಳೆಗಾಲದ ಹಿನ್ನೆಲೆ ಯಲ್ಲಿ ಎರಡೂವರೆ ತಿಂಗಳು ಸ್ಥಗಿತಗೊಳಿಸಲಾಗಿತ್ತು. ಆ. 5 ರಿಂದ ಇದೀಗ ಮತ್ತೆ ಪ್ರವಾಸಿಗರಿಗೆ ತೆರೆದುಕೊಂಡಿದ್ದು ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿ ತನ್ನಡೆಗೆ ಸೆಳೆಯುತ್ತಿದೆ.
ದೋಣಿಯ ಮೇಲಿನ ಮನೆಯಲ್ಲಿ ಕುಳಿತು ಹಿನೀ°ರಿನಲ್ಲಿ ವಿಹರಿಸುವುದು ಅಪೂರ್ವ ಅನುಭವ. ಕೇವಲ ಪ್ರವಾಸಿಗರಿಗೆ ಮಾತ್ರವಲ್ಲ ಸ್ಥಳೀಯರಿಗೂ ಇದೊಂದು ಅದ್ಭುತ ಅನುಭವ. ತೇಲುವ ಮನೆಯಲ್ಲಿ ಇಡೀ ದಿನ ಕಳೆಯುವುದು ಒಂದು ಅವಿಸ್ಮರಣೀಯ.
ಐಷಾರಾಮಿ ಸೇವೆ
ದೋಣಿ ಮನೆಯಲ್ಲಿ ಐಷಾರಾಮಿ ಸೇವೆ ಸಿಗುತ್ತದೆ. ಒಬ್ಬ ದೋಣಿಯನ್ನು ನಡೆಸುತ್ತಿದ್ದರೆ, ದೋಣಿಗೆ ಹೊಂದಿಕೊಂಡು ಇರುವ ಅಡುಗೆ ಮನೆಯಲ್ಲಿ ಪ್ರವಾಸಿಗರು ಬಯಸಿದ ಆಹಾರ ಪದಾರ್ಥಗಳನ್ನು ಮಾಡಿಕೊಡುವ ನುರಿತ ಬಾಣಸಿಗ, ಅವನಿಗೊಬ್ಬ ಸಹಾಯಕನಿರುತ್ತಾನೆ. ಸಸ್ಯಹಾರದ ಜತೆ ಪ್ಯಾಕೇಜಿಗೆ ಅನುಗುಣವಾಗಿ ಮೀನು, ಕೋಳಿ ಮಾಂಸದ ವಿಶೇಷ ಅಡುಗೆಯೂ ಸಿಗುತ್ತದೆ. ಪ್ರವಾಸಿಗರ ಸುರಕ್ಷತೆಗೆ ನುರಿತ ಈಜು ತಜ್ಞರಿದ್ದಾರೆ. ನದಿಯಲ್ಲಿ 12 ರಿಂದ 14 ಕಿ.ಮೀ ದೂರ ಸುತ್ತಾಡಬಹುದಾಗಿದ್ದು, ಹವನಿಯಂತ್ರಿತ ಮನೆಯಲ್ಲಿ ಸ್ನಾನಗೃಹ, ಶೌಚಾಲಯದ ವ್ಯವಸ್ಥೆಯೂ ಇದೆ. ಆಕರ್ಷಕ ಲಿವಿಂಗ್ರೂಮ್, ವರ್ಕ್ಶಾಪ್, ಸಣ್ಣ ಪಾರ್ಟಿ ಆಯೋಜನೆ ಮಾಡಲು ಸ್ಥಳಾವಕಾಶವಿದೆ. ಸುಂದರ ಪರಿಸರದ ದೃಶ್ಯವನ್ನು ನೋಡಲು ಬಾಲ್ಕನಿ ಇದ್ದು ಅಧುನಿಕ ಸೌಲಭ್ಯಗಳ ಎಲ್ಲಾ ಅನುಕೂಲತೆಯನ್ನು ಹೊಂದಿದೆ.
ವಿಹಾರದ ಸಮಯ
ದೋಣಿ ಮನೆಯಲ್ಲಿ ಬೆಳಗ್ಗೆ 11ರಿಂದ ಸಂಜೆ 4, ಸಂಜೆ 5ರಿಂದ ರಾತ್ರಿ 9ವರೆಗೆ ವಿಹರಿಸಬಹುದು. ರಾತ್ರಿ ವೇಳೆ ಬೋಟಿನಲ್ಲಿ ತಂಗುವ ಅವಕಾಶವಿದೆ. ಸಂದರ್ಭಕ್ಕೆ ಅನುಗುಣವಾಗಿ ಕಡಿಮೆ ಅವಧಿಯ ವಿಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಪಾಂಚಜನ್ಯ ಕ್ರೂಸ್ ಮಾಲಕ ರಾಜೇಶ್ ಕಾಮತ್ ತಿಳಿಸಿದ್ದಾರೆ.
ಹೋಗುವ ದಾರಿ:
ಉಡುಪಿಯಿಂದ ಕಲ್ಯಾಣಪುರ- ಕೆಮ್ಮಣ್ಣು, ಹೂಡೆ ಅಥವಾ ಉಡುಪಿಯಿಂದ ಮಲ್ಪೆ-ತೊಟ್ಟಂ ಹೂಡೆ ಮಾರ್ಗವಾಗಿ ಕುಂದಾಪುರ ಕಡೆಯಿಂದ ಬರುವವರು ಬ್ರಹ್ಮಾವರ ಹಂಗಾರಕಟ್ಟೆಯಿಂದ ಬಾರ್ಜ್ ಮೂಲಕ ಬಂದು ಪಡುತೋನ್ಸೆಯನ್ನು ತಲುಬಹುದಾಗಿದೆ. ದೋಣಿಮನೆಯಲ್ಲಿ ವಿಹರಿಸಲು ಬಯಸುವವರು ರಾಜೇಶ್ ಕಾಮತ್ (9900480877) ಅವರನ್ನು ಸಂಪರ್ಕಿಸಬಹುದಾಗಿದೆ.