ನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ: ಸಿದ್ದು
Team Udayavani, Jan 9, 2018, 8:37 AM IST
ಕಾಪು: ಇದುವರೆಗೆ ವಿಧಾನ ಸಭಾ ಕ್ಷೇತ್ರ ಮಾತ್ರ ಆಗಿದ್ದ ಕಾಪುವಿಗೆ ಪ್ರತ್ಯೇಕ ಐಡೆಂಟಿಟಿ ನೀಡಬೇಕು ಎಂಬ ಬೇಡಿಕೆ ನಮ್ಮ ಮತ್ತು ನಿಮ್ಮ ಶಾಸಕ ವಿನಯಕುಮಾರ್ ಸೊರಕೆ ಅವರಿಂದ ಪ್ರತೀ ಬಾರಿ ಕೇಳಿ ಬರುತ್ತಿತ್ತು. ಅವರ ಒತ್ತಾಯ ಮತ್ತು ನಿಮ್ಮೆಲ್ಲರ ಬೇಡಿಕೆಯಂತೆ ಕಾಪುವಿಗೆ ಪುರಸಭೆ ಭಾಗ್ಯವನ್ನು ನೀಡಿದ್ದೇವೆ. ಜನವರಿ ತಿಂಗಳ ಅಂತ್ಯದೊಳಗೆ ಕಾಪು ತಾಲೂಕು ಆಗಿ ಮಾರ್ಪಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾಪು ಪೇಟೆಯಲ್ಲಿ ಜರಗಿದ ಸಾಧನಾ ಸಮಾವೇಶ, ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಸುಮಾರು 445 ಕೋ. ರೂ. ಮೊತ್ತದ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧಿಕಾರದ ಪಾಠ ಹೇಳಿಸಿಕೊಳ್ಳ ಬೇಕಾದ ಅನಿವಾರ್ಯತೆ ನನಗಿಲ್ಲ. ನೀವು ಮೆಚ್ಚಿ ಅಧಿಕಾರ ನೀಡಿರುವ ಸಿದ್ದ ರಾಮಯ್ಯ ಸರಕಾರವನ್ನು ಟೀಕಿಸುತ್ತಾ ರೆಂದರೆ, ಅವರಷ್ಟು ಮೂರ್ಖರು ಬೇರೊಬ್ಬರಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೂ ಟೀಕಾಕಾರರೊಂದಿಗೆ ಕೈ ಜೋಡಿಸಿದ್ದು, ಇವರ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥಿಸುತ್ತೇನೆ, ದಯವಿಟ್ಟು ಬಿಜೆಪಿ, ಜೆಡಿಎಸ್ ಇವರಿಬ್ಬರಿಗೂ ಅಧಿಕಾರ ನೀಡಬೇಡಿ. ಮತ್ತೆ ಕಾಂಗ್ರೆಸ್ಗೆ ನಿಮ್ಮ ಬೆಂಬಲ ನೀಡಿ ಎಂದು ವಿನಂತಿಸಿದರು.
ಕುಡಿಯುವ ನೀರು ಯೋಜನೆಗೆ ಇನ್ನಷ್ಟು ಅನುದಾನ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಇಂದು ಒಂದೇ ದಿನ ಸುಮಾರು 445 ಕೋ. ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರ ವೇರಿಸಿ ದ್ದೇವೆ. ಇವ್ಯಾವುದಕ್ಕೂ ಅನುದಾನ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಕಾಪುವಿಗೆ ಕುಡಿಯುವ ನೀರಿನ ಯೋಜನೆಗಾಗಿ ಮತ್ತಷ್ಟು ಅನು ದಾನ ಬೇಕೆಂಬ ಬೇಡಿಕೆ ಶಾಸಕರಿಂದ ಬಂದಿದೆ. ಅದನ್ನೂ ಈಡೇರಿಸಲು ಸರಕಾರ ಸಿದ್ಧವಿದೆ ಎಂದರು.
ನೀವು ಕೇಳಿದ್ದನ್ನು ನಾವು ನೀಡಿದ್ದೇವೆ, ಈಗ ಕೇಳುವುದು ನಮ್ಮ ಸರದಿ. ಅದನ್ನು ನೀವು ಕೊಡುವ ಕಾಲವೂ ಕೂಡಿ ಬಂದಿದೆ. ನಿಮಗಾಗಿ ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ ಎಂಬ ಬೇಡಿಕೆ ನಮ್ಮದು. ಕಾಪು ಕ್ಷೇತ್ರದಲ್ಲಿ ವಿನಯಕುಮಾರ್ ಸೊರಕೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಮೂಲಕ ಮತ್ತೂಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂಬ ವಿನಮ್ರ ವಿನಂತಿ ನಮ್ಮದು ಎಂದು ಸಿದ್ದರಾಮಯ್ಯ ಹೇಳಿದರು.
ಹೆಜಮಾಡಿ ಬಂದರಿಗೂ ಅನುದಾನದ ವಿಶ್ವಾಸ: ಸೊರಕೆ
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಕಾಪು ಕ್ಷೇತ್ರದಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ 1,700 ಕೋ. ರೂ. ಮೊತ್ತದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇಂದಿನ 445 ಕೋ. ರೂ. ಮೊತ್ತದ ಕಾಮಗಾರಿ ವಿಶೇಷ ಮಹತ್ವ ಪಡೆದಿದೆ. ಕಾಪು ತಾಲೂಕು, ಕಾಪು ಪುರಸಭೆಯನ್ನು ಕೊಡುಗೆಯಾಗಿ ನೀಡಿರುವ ಮುಖ್ಯ ಮಂತ್ರಿಗಳು ಬಹುಕಾಲದ ಕನಸಾದ ಹೆಜಮಾಡಿ ಬಂದರು ಅಭಿವೃದ್ಧಿಗೂ ವಿಶೇಷ ಅನುದಾನವನ್ನೂ ಒದಗಿಸಿ ಕೊಡುತ್ತಾರೆಂಬ ವಿಶ್ವಾಸವಿದೆ ಎಂದರು.
ಸಚಿವ ಯು.ಟಿ. ಖಾದರ್, ಸಚಿವ ಪ್ರಮೋದ್ ಮಾತನಾಡಿದರು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಬ್ಲೋಸಂ ಆಸ್ಕರ್ ಫೆರ್ನಾಂಡಿಸ್, ಶಾಸಕರಾದ ಅಭಯಚಂದ್ರ ಜೈನ್, ಪ್ರತಾಪ್ಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಭಂಡಾರಿ, ಯು.ಆರ್. ಸಭಾಪತಿ, ಎಸ್.ಸಿ. ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಕಾಪು ಬ್ಲಾಕ್ ಕಾಂಗ್ರೆಸ್ (ದ.) ಅಧ್ಯಕ್ಷ ನವೀನ್ಚಂದ್ರ ಜೆ. ಶೆಟ್ಟಿ, ಉತ್ತರ ಬ್ಲಾಕ್ ಅಧ್ಯಕ್ಷ ಸುಧೀರ್ ಹೆಗ್ಡೆ, ಎಂ. ಎ. ಗಫೂರ್, ಡಾ| ದೇವಿಪ್ರಸಾದ್ ಶೆಟ್ಟಿ, ಜಿ.ಎ. ಬಾವಾ, ಕಾಪು ದಿವಾಕರ ಶೆಟ್ಟಿ, ವಿಲ್ಸನ್ ರೊಡ್ರಿಗಸ್, ಸುಧಾಕರ ಶೆಟ್ಟಿ ಮೈರ್ಮಾಡಿ, ಚಂದ್ರಿಕಾ ಕೇಲ್ಕರ್, ಗೀತಾ ವಾಗ್ಲೆ, ದೀಪಕ್ ಕುಮಾರ್ ಎರ್ಮಾಳ್, ಅಬ್ದುಲ್ ಅಜೀಜ್, ವಿಶ್ವಾಸ್ ವಿ. ಅಮೀನ್, ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯಾ ಸಂಜೀವ, ಉಪಾಧ್ಯಕ್ಷ ಉಸ್ಮಾನ್, ಸರಸು ಬಂಗೇರ, ಇಸ್ಮಾಯಿಲ್ ಆತ್ರಾಡಿ, ಕ್ರಿಸ್ಟಿನ್ ಅಲ್ಮೇಡಾ, ಗಣೇಶ್ ಕೋಟ್ಯಾನ್, ಶಶಿಧರ ಶೆಟ್ಟಿ, ವಿನಯ ಬಲ್ಲಾಲ್, ಅಬ್ದುಲ್ ರೆಹಮಾನ್, ಮನಹರ್ ಇಬ್ರಾಹಿಂ, ವೈ. ಸುಧೀರ್ ಕುಮಾರ್, ರಾಜೇಶ್ ರಾವ್, ರಮೇಶ್ ಶೆಟ್ಟಿ, ಶಾಂತಲತಾ ಶೆಟ್ಟಿ, ಪ್ರಶಾಂತ್ ಜತ್ತನ್ನ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿನ್, ಎಸ್ಪಿ ಹೇಮಂತ್ ನಿಂಬರಗಿ, ಮಂಗಳೂರು ವಿ.ವಿ. ಉಪ ಕುಲಪತಿ ಭೈರಪ್ಪ ಉಪಸ್ಥಿತರಿದ್ದರು.
ಸ್ಥಳೀಯ ಶಾಸಕ ವಿನಯಕುಮಾರ್ ಸೊರಕೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಉಡುಪಿ ತಾ.ಪಂ. ಇಒ ಮೋಹನರಾಜ್ ವಂದಿಸಿದರು. ಕಾಪು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಸಂಯೋಜಿಸಿದರು. ನಿವೃತ್ತ ಶಿಕ್ಷಕ ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸೊರಕೆ ಅವರನ್ನು ಮತ್ತೆ ಗೆಲ್ಲಿಸಿ
ಶಾಸಕ ವಿನಯಕುಮಾರ್ ಸೊರಕೆ ಅವರ ಹೆಸರೇ ಹೇಳು ವಂತೆ ನಯ ವಿನಯಗಳ ಮಾದರಿ ಯಾಗಿದ್ದಾರೆ. ಸರಳ, ಸಜ್ಜನ ಮತ್ತು ಕ್ರಿಯಾಶೀಲ ರಾಜಕಾರಣಿ ಆಗಿರುವ ಅವರು ನಮ್ಮ ಸರಕಾರ ದಲ್ಲಿ ಮೂರು ವರ್ಷ ಸಚಿವ ರಾಗಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವ ಹಿಸಿದ್ದಾರೆ. ಅವಕಾಶ ಮತ್ತೆ ಅವರ ಪಾಲಿಗೆ ಬಂದೇ ಬರು ತ್ತದೆ. ರಾಜಕಾರಣದಲ್ಲಿ ಏನೂ ಆಗಬಹುದು. ಮತ್ತಷ್ಟು ಎತ್ತರದ ಅವಕಾಶವೂ ಅವರಿಗೆ ಸಿಗ ಬಹುದು, ಅವರನ್ನು ಬೆಂಬಲಿಸಿ ಎಂದು ಸಿದ್ದರಾಮಯ್ಯ ಅವರು ಕರೆ ನೀಡಿದರು.