ಪೇಜಾವರ ಶ್ರೀಗಳ ನಿಧಾನಗತಿಯ ಚೇತರಿಕೆ
Team Udayavani, Dec 26, 2019, 12:43 AM IST
ಉಡುಪಿ: ಪೇಜಾವರ ಶ್ರೀಗಳಿಗೆ ಚಿಕಿತ್ಸೆ ಮುಂದುವರಿಯುತ್ತಿದೆ. ಕೃತಕ ಉಸಿರಾಟದಲ್ಲಿ ಅವರಿದ್ದು ಶ್ವಾಸಕೋಶಗಳು ನಿಧಾನವಾಗಿ ಚೇತರಿಸಿ ಕೊಳ್ಳುತ್ತಿವೆ. ಪ್ರಜ್ಞಾಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ ಎಂದು ಆಸ್ಪತ್ರೆ ಪ್ರಕಟನೆ ತಿಳಿಸಿದೆ.
ವಿವಿಧೆಡೆಗಳಲ್ಲಿ ಪೂಜೆ, ಪ್ರಾರ್ಥನೆ ಮುಂದು ವರಿಯುತ್ತಿದ್ದು, 2 ದಿನಗಳಲ್ಲಿ ಹಲವು ಗಣ್ಯರು ಭೇಟಿ ನೀಡಿ ಅವರ ಕ್ಷೇಮಾರ್ಥ ಪ್ರಾರ್ಥನೆ ನಡೆಸಿದರು.
ಕಾಂಗ್ರೆಸ್ ಪ್ರದೇಶ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಸಿ.ಟಿ. ರವಿ, ಮಾಜಿ ಸಚಿವ ಡಾ| ಎಂ. ವೀರಪ್ಪ ಮೊಲಿ, ಉದ್ಯಮಿಗಳಾದ ಡಾ| ಬಿ.ಆರ್. ಶೆಟ್ಟಿ, ಹುಬ್ಬಳ್ಳಿ ವಿಟuಲ ಹೆಗ್ಡೆ, ವಿಹಿಂಪ ರಾಷ್ಟ್ರೀಯ ಅಧ್ಯಕ್ಷ ಸದಾಶಿವ ಕೋಕಡೆ, ಪ್ರ.ಕಾರ್ಯದರ್ಶಿ ಮಿಲಿಂದ್ ಪೆರಾಂಜೆ, ಜತೆ ಕಾರ್ಯದರ್ಶಿ ಕೋಟೇಶ್ವರ ರಾವ್ ಭೇಟಿ ನೀಡಿದರು.
ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರಸರಸ್ವತಿ ಸ್ವಾಮೀಜಿ, ಮೈಸೂರಿನ ಹನಸೋಗೆಯ ಶ್ರೀ ವಿಶ್ವನಂದನತೀರ್ಥರು, ಕಣ್ವ ಮಠದ ಶ್ರೀ ವಿದ್ಯಾ ವಿರಾಜತೀರ್ಥರು, ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಕ್ಯಾ| ಗಣೇಶ ಕಾರ್ಣಿಕ್, ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ ಕೊಡವೂರು, ಎಂ.ಎ. ಗಫೂರ್, ಮಂಗಳೂರಿನ ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಭೇಟಿ ನೀಡಿದರು. ಶ್ರೀಗಳ ಶಿಷ್ಯೆ ಉಮಾಭಾರತಿ ಸತತ ಮೂರನೆಯ ದಿನವೂ ಭೇಟಿ ನೀಡಿದರು.
ತಿರುಮಲದಲ್ಲಿ ಪೂಜೆ
ಶ್ರೀಗಳ ಆಯುರಾರೋಗ್ಯಕ್ಕಾಗಿ ತಿರುಮಲ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ದೇವಸ್ಥಾನದ ಅಧ್ಯಕ್ಷ ವೈ.ವಿ. ಸುಬ್ಬ ರಾವ್ ತಿಳಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ಪೂಜೆ, ಪ್ರಾರ್ಥನೆ ನಡೆಸುವುದಾಗಿ ಅಲ್ಲಿನ ಸ್ವಾಮೀಜಿ ತಿಳಿಸಿದ್ದಾರೆ.
ಹಂಪಿಯಲ್ಲಿ ಪೂಜೆ
ಶ್ರೀಗಳು ಸನ್ಯಾಸದೀಕ್ಷೆ ತೆಗೆದುಕೊಂಡ ಹಂಪಿ ಚಕ್ರತೀರ್ಥದ ಯಂತ್ರೋದ್ಧಾರಕ ಪ್ರಾಣ ದೇವರ ಸನ್ನಿಧಾನದಲ್ಲಿ ಲಕ್ಷ ಧನ್ವಂತರಿ ಜಪ, ತಲಾ 108ರಂತೆ ವಾಯುಸ್ತುತಿಪುರಶ್ಚರಣ, ಪವಮಾನ ಸೂಕ್ತ, ಮನ್ಯುಸೂಕ್ತ ಪುರಶ್ಚರಣ, ಸುಂದರಕಾಂಡ, ವಿಷ್ಣುಸಹಸ್ರನಾಮ ಪಾರಾಯಣಗಳನ್ನು ನಡೆಸಿದರು. ಆನೆಗುಡ್ಡೆ ದೇವಸ್ಥಾನ, ಸೌತಡ್ಕದ ಬಯಲು ಗಣಪತಿ ದೇವಸ್ಥಾನ, ಕೊಕ್ಕಡದ ವೈದ್ಯನಾಥೇಶ್ವರ ದೇವಸ್ಥಾನ, ರಾಮಕುಂಜದ ರಾಮಕುಂಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.
ಕಿರಿಯ ಶ್ರೀಗಳ ಉಸ್ತುವಾರಿ
ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗುರು ಗಳಿಗೆ ಅಸೌಖ್ಯ ಬಾಧಿಸಿದಂದಿನಿಂದ ತಮ್ಮೆಲ್ಲ ಪ್ರವಾಸಗಳನ್ನು ರದ್ದುಗೊಳಿಸಿ ಉಡುಪಿ ಯಲ್ಲಿಯೇ ಮೊಕ್ಕಾಂ ಇದ್ದಾರೆ. ಬೆಳಗ್ಗೆ ಬೇಗ ಮಠದಲ್ಲಿ ಪೂಜೆ ಮುಗಿಸಿ ಆಸ್ಪತ್ರೆಗೆ ಹೋದರೆ ರಾತ್ರಿಯ ವರೆಗೆ ಅಲ್ಲಿಯೇ ಇರುತ್ತಾರೆ. ಬಿಡುವಿದ್ದಾಗ ಸ್ತೋತ್ರ ಪಾಠಗಳ ಪಾರಾಯಣ ನಡೆಸುವ ಅವರು ಆಸ್ಪತ್ರೆಗೆ ಭೇಟಿ ನೀಡುವ ಗಣ್ಯರನ್ನು ಮಾತನಾಡಿಸುತ್ತಾರೆ. ವೈದ್ಯರು, ಹಿರಿಯ ಅಧಿಕಾರಿಗಳು ಕಿರಿಯ ಶ್ರೀಗಳಿಗೆ ಅಗತ್ಯ ಮಾಹಿತಿಗಳನ್ನು ನೀಡುತ್ತಿದ್ದಾರೆ.